RSS ನಿಷೇಧಿಸುವ ತಾಕತ್ ಇದೆಯಾ, HDKಗೆ ಇದೆಂಥಾ ಸವಾಲ್?
ಚಿತ್ರದುರ್ಗ, ಜನವರಿ.28: ಭಾರತ ದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಾ ಸಂಘಟನೆ (ಆರ್ ಎಸ್ಎಸ್)ಯನ್ನು ನಿಷೇಧಿಸುವ ತಾಕತ್ ಯಾರಿಗಾದರೂ ಇದೆಯಾ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಸವಾಲ್ ಹಾಕಿದ್ದಾರೆ.
Recommended Video
ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು. ಯಾವುದು ದೇಶಭಕ್ತರ ಸಂಘಟನೆ ಯಾವುದು ದೇಶದ್ರೋಹಿಗಳ ಸಂಘಟನೆ ಎಂಬುದರ ಬಗ್ಗೆ ಅರಿತುಕೊಂಡು ಮಾತನಾಡಬೇಕು.
ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ದೇಶದಲ್ಲಿ ಆರ್ ಎಸ್ಎಸ್ ಬ್ಯಾನ್ ಆಗಬೇಕು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಕೆಂಡ ಕಾರಿದ ಪ್ರಭಾಕರ್ ಭಟ್, ರಾಜಕಾರಣಕ್ಕಾಗಿ 18 ತಿಂಗಳು ಸಿಎಂ ಆಗಿದ್ದವರು ಮಾತನಾಡಿದರೆ ಅದು ಶೋಭೆ ತರುವಂಥದ್ದಲ್ಲ ಎಂದರು.

ಆರ್ ಎಸ್ಎಸ್ ಬ್ಯಾನ್ ಮಾಡಲು ತಾಕತ್ ಬೇಕು
ದೇಶದಲ್ಲಿ ಹಿಂಸಾಚಾರ ನಡೆಸುತ್ತದೆ ಎಂದು ಆರೋಪ ಮಾಡಿ ಆರ್ ಎಸ್ಎಸ್ ನಿಷೇಧಿಸುವಂತಾ ಪ್ರಯತ್ನವನ್ನು ಮಾಡಲಾಗುತ್ತಿದೆ. ಈ ಪ್ರಯತ್ನ ಎಂದಿಗೂ ಸಾಧ್ಯವಿಲ್ಲ. ತಾಕತ್ ಇದ್ದರೆ ಆರ್ ಎಸ್ಎಸ್ ಸಂಘಟನೆಗಳನ್ನು ಬ್ಯಾನ್ ಮಾಡಿ ನೋಡೋಣ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಸವಾಲ್ ಹಾಕಿದರು.

ಹಿಂದೂ ಧರ್ಮದ ರಕ್ಷಕನಂತೆ RSS ಕಾರ್ಯ
1947ರಿಂದಲೂ RSS ಹಿಂದೂ ಸಮಾಜದ ರಕ್ಷಕನಂತೆ ಕೆಲಸ ಮಾಡುತ್ತಿದೆ. ಹಿಂದೂ ಧರ್ಮವನ್ನು ರಕ್ಷಿಸುವಲ್ಲಿ ನಮ್ಮ ಸಂಘಟನೆ ಶ್ರಮಿಸುತ್ತಿದೆ. ಹೀಗಾಗಿ ಇಡೀ ಹಿಂದೂ ಸಮಾಜವೇ RSS ಹಾಗೂ ಭಜರಂಗದಳದ ಬೆಂಬಲಕ್ಕೆ ನಿಂತಿದೆ. ಇಂಥ ಸಂಘಟನೆ ವಿರುದ್ಧ ದೇಶದ್ರೋಹದ ಆರೋಪ ಮಾಡುತ್ತಿದ್ದೀರಲ್ಲಾ ಎಂದು ಪ್ರಶ್ನೆ ಮಾಡಿದ್ದಾರೆ.

"ಯಾರು ದೇಶದ್ರೋಹಿಗಳು, ಯಾರು ದೇಶಪ್ರೇಮಿಗಳು?"
ಮಹಾತ್ಮ ಗಾಂಧೀಜಿ ಹತ್ಯೆಯನ್ನೇ ಕಾರಣವಾಗಿಟ್ಟುಕೊಂಡು ಹಿಂದಿನಿಂದಲೂ RSS ವಿರುದ್ಧ ಪಿತೂರಿ ನಡೆಸಲಾಗುತ್ತಿದೆ. ನಮ್ಮದು ಯಾರನ್ನೂ ಹೊಡೆದು ಬಡೆದು ಬದುಕುವ ಸಂಸ್ಕೃತಿಯಲ್ಲ. ನಮ್ಮ ಮನೆಯ ಹೆಣ್ಣುಮಕ್ಕಳನ್ನು ಹಾರಿಸಿಕೊಂಡು ಹೋಗುತ್ತಾರೆ. ಕ್ರಿಶ್ಚಿನ್ನರು, ಮುಸ್ಲಿಮರು, ಪಾಶ್ಚಾತ್ಯ ಸಂಸ್ಕೃತಿಯನ್ನು ಪಾಲಿಸುವವರು ನಮ್ಮ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ಇದಕ್ಕೆಲ್ಲ ನಾವು ಬೆದರುವುದಿಲ್ಲ. RSS ಹಿಂದೂಗಳ ರಕ್ಷಣೆಗೆ ಸದಾ ಹೋರಾಡುತ್ತದೆ ಎಂದು ಹೇಳಿದರು.

ಗಾಂಧೀಜಿ ಕನಸು ನನಸು ಮಾಡುವುದೇ ನಮ್ಮ ಗುರಿ
ಸ್ವಾತಂತ್ರ್ಯ ಸಿಕ್ಕಾಗಲೇ ಮಹಾತ್ಮ ಗಾಂಧೀಜಿ ಎರಡು ಕಾನೂನುಗಳನ್ನು ಜಾರಿಗೊಳಿಸುವುದಾಗಿ ಹೇಳಿದ್ದರು. ಮತಾಂತರ ನಿಷೇಧ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುವುದು ಮಹಾತ್ಮ ಗಾಂಧೀಜಿ ಕನಸಾಗಿತ್ತು. ಆ ಮಹಾತ್ಮನ ಕನಸನ್ನು ನನಸು ಮಾಡಲು RSS ಪ್ರಯತ್ನ ಪಡುತ್ತಿದೆ. ಆದರೆ, ನಕಲಿ ಗಾಂಧೀಜಿಗಳು ಇದನ್ನು ವಿರೋಧಿಸುತ್ತಿದ್ದಾರೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಆರೋಪಿಸಿದರು.

ಅಂಬೇಡ್ಕರ್ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿದ್ದರು ಎಂದ ಕಲ್ಲಡ್ಕ
ಇನ್ನು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ನಾವು ಎಂದಿಗೂ ನಿಕೃಷ್ಟವಾಗಿ ಮಾತನಾಡಿಲ್ಲ. ಅಸಲಿಗೆ ಮೊದಲು ಅಂಬೇಡ್ಕರ್ ಬಗ್ಗೆ ಪುಸ್ತಕವನ್ನು ಬರೆದಿದ್ದೇ ನಾವು. ಏಕೆಂದರೆ ಅಂಬೇಡ್ಕರ್ ಅವರು ರಾಷ್ಟ್ರೀಯ ಚಿಂತನೆಗಳನ್ನು ಹೊಂದಿದ್ದ ಶ್ರೇಷ್ಠ ವ್ಯಕ್ತಿತ್ವದ ಮಹಾನ್ ನಾಯಕರಾಗಿದ್ದರು ಎಂದು ಕಲ್ಲಡ್ಕ ತಿಳಿಸಿದರು.












Click it and Unblock the Notifications