ವಾಣಿ ವಿಲಾಸ ಜಲಾಶಯ ಅಭಿವೃದ್ಧಿಗೆ 738 ಕೋಟಿ ರೂ ಮೀಸಲು: ಬೊಮ್ಮಾಯಿ
ಚಿತ್ರದುರ್ಗ, ನವೆಂಬರ್ 22: ವಾಣಿವಿಲಾಸ ಜಲಾಶಯಕ್ಕೆ ಕಾಯಕಲ್ಪ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ 738 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಇದರಲ್ಲಿ ಮುಚ್ಚಿ ಹೋಗಿರುವ ಜಲಾಶಯದ ಕಾಲುವೆಗಳ ಅಭಿವೃದ್ಧಿ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಜನ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, "2007-08 ರಲ್ಲಿ ಎರಡು ವರ್ಷ ನೀರಾವರಿ ಹೋರಾಟಗಾರ ಧರಣಿ ನಡೆಸುತ್ತಿದ್ದರು. ನಾನು ನೀರಾವರಿ ಸಚಿವನಾಗಿ ಆಗ ಕೇವಲ ಒಂದುವರೆ ತಿಂಗಳು ಆಗಿತ್ತು. ಸಚಿವನಾದ ಮೇಲೆ ಧರಣಿ ಸ್ಥಳಕ್ಕೆ ಆಗಮಿಸಿದ್ದೆ. ಆಗ ಸುಮಾರು ಹತ್ತು ಸಾವಿರ ರೈತರು ಸೇರಿದ್ದರು. ಒಂದು ಉದ್ವೇಗದ ವಾತಾವರಣ ನಿರ್ಮಾಣವಾಗಿತ್ತು. ಅಂದಿನ ರೈತರ ಕಷ್ಟದ ದಿನಗಳನ್ನು ಅರಿತು ಸಿಎಂ ಜೊತೆ ಚರ್ಚಿಸಿ ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿ ವಿಲಾಸ ಜಲಾಶಯಕ್ಕೆ ನೀರು ಹರಿಸುವ ಕ್ರಮ ಕೈಗೊಳ್ಳಲಾಯಿತು. ಹದಿನೈದು ದಿನದೊಳಗೆ ಆದೇಶ ಮಾಡಲಾಗಿತ್ತು" ಎಂದು ತಿಳಿಸಿದರು.
ಮಹಾರಾಷ್ಟ್ರದ ಕನ್ನಡ ಶಾಲೆಗೆ ವಿಶೇಷ ಅನುದಾನ, ಕನ್ನಡಿಗರಿಗೆ ಪಿಂಚಣಿ ನೀಡಲಾಗುವುದು: ಸಿಎಂ
ರಾಜ್ಯದಲ್ಲಿ ಜಲಸಂಪನ್ಮೂಲ ಇದೆ. ಜನರ ಪರ ಕೆಲಸ ಮಾಡಬೇಕು. ಮೈಸೂರು ಮಹಾರಾಜರು ಮಾಡಿದ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡಲಿಲ್ಲ. ಈ ಭಾಗದ ಕಾಂಗ್ರೆಸ್ ನಾಯಕರು ವಾಣಿ ವಿಲಾಸ ಜಲಾಶಯಕ್ಕೆ ನೀರು ಕೊಡಲು ಆಗಿಲ್ಲ. ಮೈಸೂರು ಮಹಾರಾಜರ ಋಣ ತೀರಿಸುವ ಕೆಲಸ ಕಾಂಗ್ರೆಸ್ ಪಕ್ಷ ಮಾಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಒಡೆಯರ ಕೊಡುಗೆ ಮರೆಯಲಾಗಲ್ಲ
88 ವರ್ಷಗಳಿಗೂ ಮುನ್ನ ವಾಣಿವಿಲಾಸ ಸಾಗರ ತುಂಬಿತ್ತು. ನಂತರ ಈ ವರ್ಷ ತುಂಬಿ ಹರಿದಿದೆ. ಇದೊಂದು ರೀತಿಯಲ್ಲಿ ನಮ್ಮ ಕೇಂದ್ರ ಕರ್ನಾಟಕದ ನೀರು ಸಂಗ್ರಹ ಗ್ರಿಡ್ ಇದು. ಇದನ್ನು ತುಂಬಿಸುವ ಮೂಲಕ ಚಿತ್ರದುರ್ಗ, ತುಮಕೂರು, ದಾವಣಗೆರೆ ಭಾಗಗಳಲ್ಲಿ ನೀರಾವರಿ ಸೌಲಭ್ಯ ನೀಡಲು ಸಾಧ್ಯವಾಗಿದೆ. ಹಿಂದಿನ ಕಾಲದಲ್ಲಿ ಈ ಭಾಗದ ಪಶ್ಚಿಮ ಘಟ್ಟಗಳಿಂದ ಬರುವ ನೀರನ್ನು ಶೇಖರಣೆ ಮಾಡಿ ಎಲ್ಲರಿಗೂ ಒದಗಿಸಬೇಕೆಂದು ಆರ್ಥಿಕ ಸಂಕಷ್ಟವಿದ್ದರೂ ಕೂಡ ತಮ್ಮ ಮನೆತನದ ಒಡವೆಗಳನ್ನು ಮಾರಿ ಕಟ್ಟಿರುವುದನ್ನು ನಾವು ಮರೆಯಲು ಸಾಧ್ಯವಿಲ್ಲ. ಇಡೀ ಒಡೆಯರ ಕುಟುಂಬಕ್ಕೆ ರಾಜ್ಯದ ಜನತೆಯ ಪರವಾಗಿ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದರು.
ಕಾಲುವೆಗಳ ನವೀಕರಣಕ್ಕೆ 738 ಕೋಟಿ ರೂ
ಯಡಿಯೂರಪ್ಪ ಐದು ವರ್ಷಗಳಲ್ಲಿ ಏಳುವರೆ ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಮಾಡಿದ್ದಾರೆ. ಇಂತಹ ಒಂದು ಸಂದರ್ಭದಲ್ಲಿ ವಿವಿ ಸಾಗರಕ್ಕೆ ಬಾಗಿನ ಅರ್ಪಿಸುವ ಸೌಭಾಗ್ಯ ನನಗೆ ಮತ್ತು ಯಡಿಯೂರಪ್ಪ ಅವರಿಗೆ ಸಿಕ್ಕಿದೆ. ಈ ಜಲಾಶಯಕ್ಕೆ ಕಾಯಕಲ್ಪ ಕೊಡಬೇಕು ಎಂಬ ಹಿನ್ನೆಲೆಯಲ್ಲಿ ಡ್ರಿಪ್ ಯೋಜನೆಯಲ್ಲಿ 20 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ವಾಣಿ ವಿಲಾಸ ಕಾಲುವೆಗಳ ನವೀಕರಣ ಸೇರಿದಂತೆ ಜಲಾಶಯ ಕಾಯಕಲ್ಪಕ್ಕೆ 738 ಕೋಟಿ ರೂ ಮಂಜೂರು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಲಕ್ಷಕ್ಕಿಂತ ಹೆಚ್ಚು ಹೆಕ್ಟೇರ್ ನೀರಾವರಿ ಪ್ರದೇಶ
ಧರ್ಮಪುರ ಕೆರೆಗೆ ನೀರು ಹರಿಸುವ ಕಾಮಗಾರಿ ಯೋಜನೆ ಜಾರಿಗೆ ತರಲಾಗಿದೆ. ಹಿರಿಯೂರು ನಗರಕ್ಕೆ ಯುಜಿಡಿ ಯೋಜನೆಗೆ 208 ಕೋಟಿ ಅನುದಾನ ಮಂಜೂರು ಮಾಡಿದ್ದು, ಇದರಲ್ಲಿ 104 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಗೆ ನೀರಾವರಿ ಸೌಲಭ್ಯ ಒದಗಿಸುವ ಮೂಲಕ ಒಂದು ಲಕ್ಷಕ್ಕಿಂತ ಹೆಚ್ಚು ಹೆಕ್ಟೇರ್ ನೀರಾವರಿ ಪ್ರದೇಶ ಮಾಡಲಾಗುವುದು ಎಂದರು.
ಚಿತ್ರದುರ್ಗದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಬೇಕು ಈಭಾಗದ ರೈತರ ಬೇಡಿಕೆಯಾಗಿದೆ. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ಮಾಡಿ ಹದಿನೈದು ದಿನದೊಳಗೆ ತಜ್ಞರ ಸಮಿತಿಯೊಂದನ್ನು ಕಳಿಸಲಾಗುತ್ತದೆ ಎಂದು ಭರವಸೆ ನೀಡಿದರು. ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಬೇಕು ಎಂದು ಸಿಎಂ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಜನೋಪಯೋಗಿ ಶಾಸಕಿಯಾಗಿದ್ದಾರೆ. ಮತ್ತೊಮ್ಮೆ ಪೂರ್ಣಿಮಾ ಅವರಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಚುನಾವಣೆಗೆ ದಿಕ್ಸೂಚಿ
ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಅತ್ಯಧಿಕ ಮತಗಳಿಂದ ಆಯ್ಕೆಯಾಗಿ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಈ ಚುನಾವಣೆ ಕರ್ನಾಟಕದ ರಾಜ್ಯದ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಬಿಜೆಪಿಯ ಪರಿಕಲ್ಪನೆ ಜನರು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು. ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಚಿವ ಬಿ ಶ್ರೀರಾಮುಲು, ಗೋವಿಂದ ಕಾರಜೋಳ, ಶಾಸಕರಾದ ತಿಪ್ಪಾರೆಡ್ಡಿ, ಶಾಸಕಿ ಕೆ ಪೂರ್ಣಿಮಾ ರಾಜೇಶ್ ಗೌಡ, ನವೀನ್, ರವಿ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.