ಕೆ.ಸಿ.ವೀರೇಂದ್ರ ಮನೆಯಲ್ಲಿ ಸಿಕ್ಕ ಕೋಟಿ-ಕೋಟಿ ಹಣದ ಪ್ರಕರಣ ಇತ್ಯರ್ಥ!
ಚಿತ್ರದುರ್ಗ, ಜೂನ್ 17 : ಉದ್ಯಮಿ, ನಟ ದೊಡ್ಡಣ್ಣ ಅಳಿಯ ಕೆ.ಸಿ.ವೀರೇಂದ್ರ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣವನ್ನು ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದಾಗಿ ಕೈಬಿಡಲಾಗಿದೆ. ಕೆ.ಸಿ.ವಿರೇಂದ್ರ 2018ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
500 ರೂ. ಮತ್ತು 2000 ರೂ. ಮುಖಬೆಲೆ ನೋಟುಗಳ ಅಕ್ರಮ ಸಂಗ್ರಹ ಮಾಡಿದ್ದಾರೆ ಎಂದು ಕೆ.ಸಿ.ವೀರೇಂದ್ರ ಅಲಿಯಾಸ್ ಪಪ್ಪಿ ವಿರುದ್ಧ ಸಿಬಿಐ ಪ್ರಕರಣ ದಾಖಲು ಮಾಡಿತ್ತು. 2016ರ ಡಿಸೆಂಬರ್ 10ರಂದು ವೀರೇಂದ್ರ ಅವರ ಚಳ್ಳಕೆರೆಯಲ್ಲಿರುವ ಮನೆ, ಗೋವಾದಲ್ಲಿನ ಕ್ಯಾಸಿನೊ, ಹುಬ್ಬಳ್ಳಿಯ ಕಚೇರಿ ಸೇರಿದಂತೆ 15 ಕಡೆ ದಾಳಿ ನಡೆದಿತ್ತು.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೆ.ಸಿ.ವೀರೇಂದ್ರ ವಿರುದ್ಧ ದಾಖಲಿಸಿದ್ದ ಪ್ರಕರಣದ ತನಿಖೆ ನಡೆಸಿದ್ದ ಎ.ಅನ್ಬಳಗನ್ ಸೂಕ್ತ ಸಾಕ್ಷ್ಯಧಾರಗಳ ಕೊರತೆಯಿಂದ ಪ್ರಕರಣವನ್ನು ಮುಕ್ತಾಯಗೊಳಿಸುವುದಾಗಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್ ಸಲ್ಲಿಸಿದ್ದರು. ಅದರಂತೆ ಪ್ರಕರಣವನ್ನು ಇತ್ಯರ್ಥಗೊಳಿಸಿತು.
ಕೆ.ಸಿ.ವೀರೇಂದ್ರ ಅವರ ಮನೆ ಮೇಲೆ ದಾಳಿ ನಡೆಸಿದಾಗ ವಶಪಡಿಸಿಕೊಂಡಿರುವ ದಾಖಲೆಗಳನ್ನು ಮರಳಿಸುವಂತೆ ನ್ಯಾಯಾಧೀಶ ಸದಾಶಿವ ಎಸ್.ಸುಲ್ತಾನ್ಪುರಿ ಸಿಬಿಐ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೆ.ಸಿ.ವೀರೇಂದ್ರ ಮನೆ ಮೇಲೆ ದಾಳಿ
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಿಬಿಐ ಅಧಿಕಾರಿಗಳು ಚಳ್ಳಕೆರೆಯಲ್ಲಿರುವ ಕೆ.ಸಿ.ವೀರೇಂದ್ರ ಮನೆ ಮೇಲೆ 2016ರ ಡಿಸೆಂಬರ್ 10ರಂದು ದಾಳಿ ನಡೆಸಿದ್ದರು. ಗೋವಾದಲ್ಲಿನ ಕ್ಯಾಸಿನೊ, ಹುಬ್ಬಳ್ಳಿಯ ಕಚೇರಿ ಸೇರಿದಂತೆ ಒಟ್ಟು 15 ಕಡೆ ದಾಳಿ ನಡೆದಿತ್ತು.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೆ.ಸಿ.ವೀರೇಂದ್ರ ವಿರುದ್ಧ ಸಿಬಿಐ ಪ್ರಕರಣ ದಾಖಲು ಮಾಡಿತ್ತು. ಈಗ ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆಯಲ್ಲಿ 'ಬಿ' ರಿಪೋರ್ಟ್ ಸಲ್ಲಿಸಲಾಗಿದ್ದು, ಪ್ರಕವರಣವನ್ನು ನ್ಯಾಯಾಲಯ ಇತ್ಯರ್ಥಗೊಳಿಸಿದೆ.

ಹಣ, ಚಿನ್ನದ ಬಿಸ್ಕತ್ ಸಿಕ್ಕಿತ್ತು
ಕೆ.ಸಿ.ವೀರೇಂದ್ರ ಅವರ ಮನೆಯ ಮೇಲೆ ದಾಳಿ ಮಾಡಿದಾಗ 500 ಮತ್ತು 2000 ರೂ. ಮುಖಬೆಲೆಯ 90 ಲಕ್ಷ ನಗದು, 28 ಕೆಜಿ ಚಿನ್ನದ ಬಿಸ್ಕತ್, 4 ಕೆಜಿ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿತ್ತು. ಇದರ ಒಟ್ಟು ಮೌಲ್ಯ 5.76 ಕೋಟಿ ಎಂದು ಸಿಬಿಐ ಹೇಳಿತ್ತು.
ಸಿಬಿಐ ದಾಳಿ ಬಳಿಕ ಕೆ.ಸಿ.ವೀರೇಂದ್ರ ಅವರನ್ನು ಬಂಧಿಸಲಾಗಿತ್ತು. 42 ದಿನಗಳ ಬಳಿಕ ಜಾಮೀನಿನ ಮೇಲೆ ಅವರನ್ನು ಬಿಡುಗಡೆಗೊಂಡಿದ್ದರು.

ಸಾಕ್ಷ್ಯಾಧಾರಗಳ ಕೊರತೆ
ಈ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳ ಪಾತ್ರವಿದೆ ಎಂಬ ಆರೋಪ ಪುಷ್ಟೀಕರಿಸುವ ದಾಖಲೆಗಳು ಇಲ್ಲ. ಆರೋಪಿ ದಾಖಲೆ ತಿದ್ದಿದ್ದಾರೆ ಅಥವ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ ಎಂಬುದಕ್ಕೂ ಪುರಾವೆ ಇಲ್ಲ ಎಂದು ಸಿಬಿಐ ಹೇಳಿದೆ. ಆದ್ದರಿಂದ ಸಾಕ್ಷ್ಯಾಧಾರಗಳ ಕೊರತೆಯ ಕಾರಣ ನೀಡಿ ಬಿ.ರಿಪೋರ್ಟ್ ಸಲ್ಲಿಸಿದೆ.
ಕೆ.ಸಿ.ವೀರೇಂದ್ರ ಅವರ ಮನೆ ಮೇಲೆ ದಾಳಿ ನಡೆಸಿದಾಗ ವಶಪಡಿಸಿಕೊಂಡಿರುವ ದಾಖಲೆಗಳನ್ನು ಮರಳಿಸುವಂತೆ ಸಿಬಿಐ ಕೋರ್ಟ್ ಆದೇಶ ನಿಡಿದೆ.

ಡಾನ್ ತರಹ ಬಿಂಬಿಸಿದ್ದರು
ಕೆ.ಸಿ.ವೀರೇಂದ್ರ ಅವರ ಪರ ವಕೀಲ ಎಚ್.ಎಸ್.ಚಂದ್ರಮೌಳಿ ಅವರು ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ವೀರೇಂದ್ರ ಅವರನ್ನು ಡಾನ್ ತರಹ ಸಿಬಿಐ ತನಿಖಾಧಿಕಾರಿಗಳು ಬಿಂಬಿಸಿದ್ದರು. ಆರೋಪದ ಬೋಗಿಗಳನ್ನು ಜೋಡಿಸಿದ್ದರು. ಕಡೆಗೂ ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ' ಎಂದು ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು
ಚಳ್ಳಕೆರೆ ಮೂಲದ ಕೆ.ಸಿ.ವಿರೇಂದ್ರ 2018ರ ವಿಧಾನಸಭೆ ಚುನಾವಣೆಗೆ ಚಿತ್ರದುರ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 49,911 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಜಿ.ಎಚ್.ತಿಪ್ಪಾರೆಡ್ಡಿ ಅವರ ವಿರುದ್ಧ ಸೋಲು ಅನುಭವಿಸಿದ್ದರು.












Click it and Unblock the Notifications