ಚಿತ್ರದುರ್ಗ: ಜಿಪಂ ಅಧ್ಯಕ್ಷೆ, ಮಹಿಳಾ ಸದಸ್ಯರ ಬೀದಿ ಜಗಳ
ಚಿತ್ರದುರ್ಗ ಜಿ.ಪಂ. ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ವಿರುದ್ಧ ಪ್ರತಿಭಟನೆ. ಒಪ್ಪಂದದ ಪ್ರಕಾರ, ಅಧಿಕಾರ ಹಸ್ತಾಂತರಿಸಲು ಕೆಲ ಮಹಿಳಾ ಸದಸ್ಯರಿಂದ ಆಗ್ರಹ.
ಚಿತ್ರದುರ್ಗ, ಸೆಪ್ಟೆಂಬರ್ 11: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಗೆ ಒತ್ತಾಯಿಸಿ, ಸೋಮವಾರ (ಸೆ. 11) ಜಿಲ್ಲಾ ಪಂಚಾಯ್ತಿಯ ಕೆಲ ಮಹಿಳಾ ಸದಸ್ಯರು ಹಾಗೂ ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ನಡುವೆ ವಾಗ್ವಾದ, ತಳ್ಳಾಟವೂ ನಡೆಯಿತು.
ಜಿಲ್ಲಾ ಪಂಚಾಯತ್ ನಲ್ಲಿ ಇಂದು ತಿಂಗಳ ಕೆಡಿಪಿ ಸಭೆಗೆ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಬರುತ್ತಿದ್ದಂತೆ ಅವರನ್ನು ಜಿಲ್ಲಾ ಪಂಚಾಯ್ತಿ ಮಹಿಳಾ ಸದಸ್ಯರು ತಡೆಯಲು ಮುಂದಾದರು. ಆಗ ತಕ್ಷಣ ಸೌಭಾಗ್ಯ ಅವರು ಪೊಲೀಸರ ಭದ್ರತೆಯಲ್ಲಿ ಸಭೆಗೆ ನಡೆದರು. ಆದರೆ, ಪೊಲೀಸರು ಬರುವುದಕ್ಕೂ ಮುನ್ನ ಪ್ರತಿಭಟನಾಕಾರರು ಹಾಗೂ ಸೌಭಾಗ್ಯ ಬಸವರಾಜನ್ ನಡುವೆ ವಾಗ್ವಾದ, ಎಳೆದಾಟ ನಡೆಯಿತು.

ಕೊನೆಗೂ ಪೊಲೀಸ್ ಭದ್ರತೆಯಲ್ಲಿ ಸೌಭಾಗ್ಯ ಅವರು ಸಭೆಗೆ ಹಾಜರಾಗಿದ್ದಕ್ಕೆ ಸಿಟ್ಟುಗೊಂಡ ಪ್ರತಿಭಟನಾಗಾರರು, ಜಿಲ್ಲಾ ಪಂಚಾಯತ್ ಕಟ್ಟಡದ ಮುಂದೆ ಪ್ರತಿಭಟನೆ ನಡೆಸಿದರು. ಇದರಲ್ಲಿ ಜಿ ಪಂ ಸದಸ್ಯೆಯರಾದ ಬಾಗೂರು ಕ್ಷೇತ್ರದ ವಿಶಾಲಾಕ್ಷಿ, ಮಸ್ಕಲ್ ಕ್ಷೇತ್ರದ ಶಶಿಕಲಾ ಹಾಗೂ ಅವರ ಬೆಂಬಲಿಗರು ಇದ್ದರು.
ಪ್ರತಿಭಟನೆಯ ಹಿನ್ನೆಲೆ: ಜಿಲ್ಲಾ ಪಂಚಾಯತ್ ಗೆ ಹೊಸ ಸದಸ್ಯರು ಆಯ್ಕೆಗೊಂಡಾಗ ಅಧ್ಯಕ್ಷ ಸ್ಥಾನ ಮಹಿಳೆಗೆ ಬಂದಿತ್ತು. ಆಗ ಅಧ್ಯಕ್ಷ ಸ್ಥಾನವನ್ನು 15 ತಿಂಗಳಿಗೊಬ್ಬರಂತೆ ಅಧ್ಯಕ್ಷ ಸ್ಥಾನವನ್ನು ಹಂಚಿಕೊಳ್ಳಲಾಯಿತು.
ಮೊದಲಿಗೆ ಸೌಭಾಗ್ಯ ಬಸವರಾಜನ್ ಅಧ್ಯಕ್ಷರಾದರೆ ಅವರು 15 ತಿಂಗಳವರೆಗೆ ಅಧಿಕಾರ ನಡೆಸಿ, ಆನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಆನಂತರ, ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗಕ್ಕೆ ಸೇರಿದ ಮಸ್ಕಲ್ ಕ್ಷೇತ್ರದ ಶಶಿಕಲಾ ಅವರಿಗೆ ಬಿಟ್ಟು ಕೊಡಬೇಕೆಂಬ ಒಡಂಬಡಿಕೆಯಾಗಿತ್ತು. ಈ ಒಪ್ಪಂದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆಂಜನೇಯ ಹಾಗೂ ಶಾಸಕ ತಿಪ್ಪಾರೆಡ್ಡಿ ಅವರೂ ಸಾಕ್ಷಿಯಾಗಿದ್ದಾರೆಂದು ಹೇಳಲಾಗಿದೆ.
ಆದರೆ, ಇದೀಗ 15 ತಿಂಗಳ ಕಾಲ ಅಧಿಕಾರದಲ್ಲಿದ್ದ ಸೌಭಾಗ್ಯ ಬಸವರಾಜನ್ ಅಧಿಕಾರ ಮುಗಿದು ನಾಲ್ಕು ತಿಂಗಳಾದರೂ ಅಧ್ಯಕ್ಷ ಸ್ಥಾನ ಬಿಟ್ಟು ಕೊಟ್ಟಿಲ್ಲ. ಇದೇ ವಿವಾದಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕಾಗಿಯೇ, ಸೋಮವಾರದಂದು (ಸೆ. 11) ಸೌಭಾಗ್ಯ ಬಸವರಾಜನ್ ಕೆಡಿಪಿ ಸಭೆಗೆ ಹೋಗದಂತೆ ಮುತ್ತಿಗೆ ಹಾಕಲಾಗಿತ್ತು.
ಇದೇ ಮೊದಲೇನಲ್ಲ: ಸೌಭಾಗ್ಯ ಬಸವರಾಜನ್ ಅವರಿಗೆ ಒಡಂಬಡಿಕೆ ಮುರಿಯುವುದು ಹೊಸತೇನಲ್ಲ. ಈ ಹಿಂದೆಯೂ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದಾಗಲೂ ಸಹ ಇದೇ ರೀತಿ ಅಧಿಕಾರಾವಧಿ ಹಂಚಿಕೆಯ ಒಡಂಬಡಿಕೆ ಆಗಿತ್ತು. ಆಗಲೂ, ಮೊದಲು ಪದಗ್ರಹಣ ಮಾಡಿದ್ದ ಸೌಭಾಗ್ಯ ಅವರು, ಒಡಂಬಡಿಕೆ ಮರೆತಿದ್ದರು ಎನ್ನುತ್ತಿವೆ ಮೂಲಗಳು.












Click it and Unblock the Notifications