ಖಾಸಗಿ ಬಸ್ ಅಗ್ನಿ ದುರಂತ: ಒಂದೇ ಕುಟುಂಬದ ಮೂರು ಮಕ್ಕಳು, ಇಬ್ಬರು ಮಹಿಳೆಯರ ಸಾವು
ಚಿತ್ರದುರ್ಗ, ಆಗಸ್ಟ್ 12: ಚಲಿಸುತ್ತಿದ್ದ ಖಾಸಗಿ ಬಸ್ ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಐವರು ಸಜೀವ ದಹನವಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದ್ದು, ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೆ.ಆರ್. ಹಳ್ಳಿ ಗೇಟ್ ಬಳಿ ಇಂದು ಮುಂಜಾನೆ ಈ ಅವಘಡ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಇಂದು ಮುಂಜಾನೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಮೂವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ವಿಜಯಪುರದ ನಿಡಗುಂದಿಯಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಈ ಘಟನೆ ಹಿರಿಯೂರು ಬಳಿ ಸಂಭವಿಸಿದೆ. ಬೆಂಗಳೂರಿನಿಂದ ವಿಜಯಪುರದ ತವರು ಮನೆಗೆ ಹೋಗಿ ಬೆಂಗಳೂರಿಗೆ ವಾಪಸ್ ಆಗಿ ಮನೆ ತಲುಪುವ ಮುನ್ನವೇ ಒಂದೇ ಕುಟುಂಬದ ಐವರು ಸಜೀವ ದಹನವಾಗಿದ್ದಾರೆ.

ಎ. 51 ಎಡಿ 7449 ನಂಬರಿನ ಕುಕ್ಕೆಶ್ರೀ ಟ್ರಾವೆಲ್ಸ್ ಖಾಸಗಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಹಿರಿಯೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೋಲಿಸರು ತನಿಖೆ ಮುಂದುವರೆಸಿದ್ದಾರೆ.
ಕವಿತಾ(28), ಕವಿತಾಳ ಅಕ್ಕ ಶೀಲಾ (33), ಶೀಲಾ ಅವರ ಮಕ್ಕಳಾದ ಸ್ಪರ್ಷ(08), ಸಮೃದ್ (05), ಕವಿತಾಳ ಮಗಳು ನಿಶ್ವಿತಾ(03) ಮೃತರು ಎಂದು ಗುರುತಿಸಲಾಗಿದೆ. 5 ಮಂದಿ ಸಜೀವ ದಹನವಾದ ಮೃತ ದೇಹಗಳು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.

ಮಂಗಳವಾರ ರಾತ್ರಿ ವಿಜಯಪುರದಿಂದ ಬೆಂಗಳೂರಿಗೆ ವಾಪಸ್ ಆಗುವ ಸಂದರ್ಭದಲ್ಲಿ ನಸುಕಿನ ಜಾವ 3:30ಕ್ಕೆ ಚಿತ್ರದುರ್ಗ ಬಳಿ ಬರ್ತಿದ್ದೇವೆ ಎಂದು ಪತಿ ವಿನಯ್ ಗೆ ಕವಿತಾ ಸಂದೇಶ ಮಾಡಿದ್ದರು. ಆದರೆ ಮನೆ ಸೇರುವ ಅರ್ಧ ದಾರಿಯಲ್ಲಿ ಮೃತಪಟ್ಟಿದ್ದಾರೆ. ಮೃತರು ಬೆಂಗಳೂರಿನ ಕಾಟನ್ ನಲ್ಲೂರಲ್ಲಿ ವಾಸವಿದ್ದರು ಎನ್ನಲಾಗಿದೆ.












Click it and Unblock the Notifications