ಕೋವಿಡ್ -19 ಗೆ ಹಿರಿಯೂರು ಹಾಲಿ ನಗರಸಭಾ ಸದಸ್ಯ ಸಾವು
ಚಿತ್ರದುರ್ಗ, ಆಗಸ್ಟ್ 16: ರಾಜ್ಯ ಸೇರಿದಂತೆ ದೇಶದಲ್ಲಿ ಪ್ರತಿದಿನ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಮಹಾಮಾರಿ ಕೊರೊನಾ ಸೋಂಕಿಗೆ ಹಿರಿಯೂರಿನ ಕಾಂಗ್ರೆಸ್ ಹಾಲಿ ನಗರಸಭಾ ಸದಸ್ಯ ಸಾವನ್ನಪ್ಪಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರಸಭೆಯ 15ನೇ ವಾರ್ಡಿನ ಸದಸ್ಯ ಎಸ್.ಪಿ.ಟಿ ದಾದಾಪೀರ್ (45) ತಡರಾತ್ರಿ ನಿಧನರಾಗಿದ್ದಾರೆ. ಆಗಸ್ಟ್ 07 ರಂದು ಕೊರೊನಾ ಸೋಂಕು ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಚಿತ್ರದುರ್ಗ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು.
ದಾದಾಪೀರ್ ಜೊತೆಗೆ ಅವರ ಪತ್ನಿ, ಮಗ, ಮಗಳಿಗೂ ಸಹ ಕೊರೊನಾ ಸೋಂಕು ಪಾಸಿಟಿವ್ ಕೇಸ್ ದೃಢಪಟ್ಟಿತ್ತು. ಕಳೆದ ನಾಲ್ಕೈದು ದಿನಗಳಿಂದ ದಾದಾಪೀರ್ ಚಿತ್ರದುರ್ಗ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಹೆಚ್ಚಿನ ಚಿಕಿತ್ಸೆಗಾಗಿ ಶನಿವಾರ ಚಿತ್ರದುರ್ಗ ಕೋವಿಡ್ ಆಸ್ಪತ್ರೆಯಿಂದ ಬೆಂಗಳೂರಿಗೆ ಹೋಗಲು ಬಿಡುಗಡೆ ಮಾಡಿಕೊಂಡು ಹೋಗುವಾಗ ಹಿರಿಯೂರು ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ದಾದಾಪೀರ್ ಎರಡನೇ ಬಾರಿಗೆ ನಗರಸಭೆಗೆ ಆಯ್ಕೆಯಾಗಿದ್ದರು. ಮೃತರ ಆತ್ಮಕ್ಕೆ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್, ಮಾಜಿ ಸಚಿವ ಡಿ. ಸುಧಾಕರ್ ಸೇರಿದಂತೆ ಮತ್ತಿತರರು ಸಂತಾಪ ಸೂಚಿಸಿದ್ದಾರೆ.











Click it and Unblock the Notifications