ಒಡನಾಡಿ ಸಂಸ್ಥೆ ವಿರುದ್ಧ ಮುರುಘಾ ಮಠದ ಆಪ್ತರ ಆರೋಪವೇನು?
ಚಿತ್ರದುರ್ಗ, ಸೆಪ್ಟೆಂಬರ್ 6 : ಮತಾಂತರ ಮಾಡುವುದು, ಹಿಂದೂ ಧರ್ಮವನ್ನು ಒಡೆಯುವ ಕೆಲಸವನ್ನು ಒಡನಾಡಿ ಸಂಸ್ಥೆಯ ಮಾಡುತ್ತಿದೆ ಎಂದು ಮುರುಘಾ ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಎನ್ ಹುಲಿಕುಂಟೆ ಕಿಡಿಕಾರಿದ್ದಾರೆ.
ಚಿತ್ರದುರ್ಗ ನಗರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮುರುಘಾ ಶರಣರ ಮೇಲಿನ ಆರೋಪ ಕ್ರಿಶ್ಚಿಯನ್ ಮಿಷನರಿಗಳ ಷಡ್ಯಂತ್ರ. ಒಡನಾಡಿ ಸಂಸ್ಥೆಯವರು ಎಲ್ಲಾ ಕಡೆ ಏಜೆಂಟರನ್ನು ಬಿಟ್ಟಿದಾರೆ. ಒಡನಾಡಿ ಸಂಸ್ಥೆ ಶೋಷಿತ ಸಮುದಾಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.
ಮುರುಘಾ ಶ್ರೀ ಪೋಕ್ಸೋ ಪ್ರಕರಣ: 5ನೇ ಆರೋಪಿ ಪೋಲಿಸರಿಗೆ ಶರಣು
ಬಡವರನ್ನು ಟಾರ್ಗೆಟ್ ಮಾಡಲ್ಲ, ಹಣವಂತರೇ ಇವರ ಟಾರ್ಗೆಟ್. ಮಂಡ್ಯ ರಮೇಶ್, ಸಾಧುಕೋಕಿಲ ಸಹ ಒಡನಾಡಿ ಸಂಸ್ಥೆ ಮೇಲೆ ಕೇಸ್ ನಡೆಸುತ್ತಿದ್ದಾರೆ. ಅದು ವಿಚಾರಣೆ ನಡೆಯುತ್ತಿದೆ. ಇದೊಂದು ವ್ಯವಸ್ಥಿತ ಜಾಲ. ಒಡನಾಡಿ ಸಂಸ್ಥೆ ಕ್ರಿಶ್ಚಿಯನ್ ಮಿಷನರಿ ಸಂಸ್ಥೆಗಳ ಕೈಗೊಂಬೆ ಎಂದು ಆರೋಪಿಸಿದರು.
ಒಡನಾಡಿ ಸಂಸ್ಥೆ ಸಾಮಾಜಿಕ ಜವಾಬ್ದಾರಿ ಇರುವವರ ವಿರುದ್ಧ ಷಡ್ಯಂತ್ರ ಮಾಡುತ್ತಾರೆ. ಹಿಂದೂ ಧರ್ಮವನ್ನು ಒಡೆಯುವಂತ ಕೆಲಸ, ಸಾಮರಸ್ಯ ಕೆಡಿಸುವಂತ ಕೆಲಸ ಮಾಡುತ್ತಿದ್ದಾರೆ. ಮೇಲ್ಜಾತಿ, ಕೆಳಜಾತಿ ಎಂಬ ಭೇದ ಸೃಷ್ಟಿ ಮಾಡುತ್ತಿದ್ದಾರೆ. ಶೋಷಿತ ಹೆಣ್ಮಕ್ಕಳನ್ನು ಮತಾಂತರ ಮಾಡುತ್ತಾರೆ. ಮತಾಂತರದ ಮೂಲಕ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಸಂಸ್ಥೆಗೆ ವಿದೇಶದ ಕ್ರಿಶ್ಚಿಯನ್ ಮಿಷಿನರಿಗಳಿಂದ ಹಣ ಬರುತ್ತದೆ. ಒಡನಾಡಿ ಸಂಸ್ಥೆಯ ಅವರನ್ನು ತನಿಖೆಗೆ ಒಳಪಡಿಸಬೇಕು. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಮೂಲಕ ಸೂಕ್ತ ತನಿಖೆ ನಡೆಸಬೇಕು. ಈ ಬಗ್ಗೆ ಗೃಹ ಸಚಿವರನ್ನು ಭೇಟಿಯಾಗಿ ವಿನಂತಿ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಶರಣರನ್ನು ಚಿತ್ರದುರ್ಗದ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಸೆಪ್ಟಂಬರ್ 14 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 2ನೇ ಆರೋಪಿ ರಶ್ಮಿ ಬಂಧನವಾಗಿದ್ದು, ಶಿವಮೊಗ್ಗದಲ್ಲಿರಿಸಲಾಗಿದೆ. 5ನೇ ಆರೋಪಿ ವಕೀಲ ಗಂಗಾಧರಯ್ಯ ಚಿತ್ರದುರ್ಗದ ಪೊಲೀಸರಿಗೆ ಶರಣಾಗಿದ್ದಾರೆ.