ಸಿದ್ದರಾಮಯ್ಯ, ಡಿಕೆಶಿ, ಎಚ್ಡಿಕೆಗೆ ಒಂದು ಮಾತು ಹೇಳಿದ ಈಶ್ವರಪ್ಪ!
ಚಿತ್ರದುರ್ಗ, ಅಕ್ಟೋಬರ್ 11; " ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಗೆ ಒಂದು ಮಾತು ಹೇಳುತ್ತೇನೆ. ಆರ್. ಎಸ್. ಎಸ್. ಬಗ್ಗೆ ಮಾತಾನಾಡಿದರೆ ಬೆಂಕಿ ಜೊತೆಗೆ ಸರಸವಾಡಿದಂತೆ ಆಗುತ್ತದೆ" ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ಸೋಮವಾರ ಸಚಿವ ಈಶ್ವರಪ್ಪ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು, "ರಾಜಕಾರಣ ಮಾಡೋಕೆ ಬೇಕಾದಷ್ಟು ಜಾಗಗಳು ಇವೆ. ರಾಷ್ಟ್ರೀಯ ವಿಚಾರಗಳ ಜೊತೆಗೆ ರಾಜಕಾರಣ ಬೇಡ" ಎಂದು ಕರೆ ನೀಡಿದರು.
"ರಾಮನ ಬಗ್ಗೆ ರಾವಣನಿಗೆ ಎಲ್ಲಾ ಗೊತ್ತಿತ್ತು. ಶಿವಾಜಿ ಬಗ್ಗೆ ಔರಂಗಜೇಬ್ಗೆ ಏನೂ ಗೊತ್ತಿರಲಿಲ್ಲ. ಛತ್ರಪತಿ ಶಿವಾಜಿ ಮಹಾರಾಜರು ಹುಟ್ಟಿರಲಿಲ್ಲ ಎಂದರೆ ಇವತ್ತು ದೇಶದಲ್ಲಿ ಯಾವ ಹಿಂದೂಗಳು ಉಳಿಯುತ್ತಿರಲಿಲ್ಲ" ಎಂದು ಸಚಿವರು ತಿಳಿಸಿದರು.

"ಇವತ್ತು ದೇಶದಲ್ಲಿ ಆರ್. ಎಸ್. ಎಸ್ ಇರಲಿಲ್ಲ ಎಂದಿದ್ದರೆ ಪ್ರತಿಯೊಬ್ಬರೂ ಯೋಚನೆ ಮಾಡಬೇಕಿತ್ತು. ಪಾಕಿಸ್ತಾನ ಅಥವಾ ಇನ್ನೊಂದೋ ಆಗುತ್ತಿತ್ತು. ಪಾಪ ಸಿದ್ದರಾಮಯ್ಯ ಅವರಿಗೆ ಈಗಲೂ ಕಲ್ಪನೆ ಇದೆ. ಬರೀ ಮುಸ್ಲಿಂ ಮತಗಳನ್ನು ಇಟ್ಟುಕೊಂಡು ಒಂದೇ ಲೆಕ್ಕದಲ್ಲಿ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ" ಎಂದರು.
"ಆರ್. ಎಸ್. ಎಸ್. ಯುವಕರಿಗೆ ರಾಷ್ಟ್ರೀಯ ವಿಚಾರಗಳು ಹಾಗೂ ಸಿದ್ಧಾಂತಗಳನ್ನು ತಿಳಿಸುತ್ತದೆ. ಗಾಂಧೀಜಿ ಅವರೇ ಆರ್. ಎಸ್. ಎಸ್. ಕ್ಯಾಂಪಿಗೆ ಬಂದಿದ್ದರು. ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದಿದ್ದರು" ಎಂದು ಈಶ್ವರಪ್ಪ ತಿಳಿಸಿದರು.
"ಗೋ ಹತ್ಯೆ ನಿಷೇಧ ಮಾಡುವ ಸಂದರ್ಭದಲ್ಲಿ ಗೋವುಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾಗ ತಡೆಯಲು ಹೋದ ಹಿಂದೂ ಯುವಕರನ್ನು ಕಗ್ಗೊಲೆ ಮಾಡಿದ್ದರು. ಇದರಿಂದ ಸಿದ್ದರಾಮಯ್ಯ ಅವರು ಅಧಿಕಾರವನ್ನು ಕಳೆದುಕೊಂಡರು. ಕಾಂಗ್ರೆಸ್ನವರು ಕೊಲೆಗಡುಕರು, ಬಿಜೆಪಿಯವರಲ್ಲ" ಎಂದರು.
ಬೆಂಗಳೂರು ಉಸ್ತುವಾರಿ; ಬೆಂಗಳೂರು ಉಸ್ತುವಾರಿ ಸಚಿವರ ನೇಮಕದ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, "ಒಂದು ಎಂಎಲ್ಎ ಸೀಟು ಬಂದಾಗ ಪೈಪೋಟಿ ಬರುತ್ತದೆ. ಹಾಗೆ ಅಧಿಕಾರ ಬಂದಾಗ ಸ್ವಾಭಾವಿಕವಾಗಿ ಸಣ್ಣ ಪುಟ್ಟವು ಇರುತ್ತವೆ. ಆದರೆ ಇದೆಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಜವಾಬ್ದಾರಿ ಬಿಜೆಪಿ ಪಕ್ಷಕ್ಕೆ ಇದೆ" ಎಂದು ಹೇಳಿದರು.
ಶಂಕು ಸ್ಥಾಪನೆ; ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಪಟ್ಟಣ ಮತ್ತು 346 ಜನವಸತಿಗಳಿಗೆ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಶಂಕುಸ್ಥಾಪನೆ ನೆರವೇರಿಸಿದರು.
"ಪ್ರತಿ ಮನೆ ಮನೆಗೆ ನಲ್ಲಿ ನೀರು ಕೊಡುವ ನಿಟ್ಟಿನಲ್ಲಿ ಹೊಸದುರ್ಗ ತಾಲ್ಲೂಕಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ 480 ಕೋಟಿ ರೂಪಾಯಿ ಬಿಡುಗಡೆ ಮಾಡಿ, ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿ ಟೆಂಡರ್ ಕರೆದು ಗುದ್ದಲಿ ಪೂಜೆ ಮಾಡಲಾಗಿದೆ" ಎಂದು ಸಚಿವರು ವಿವರಣೆ ನೀಡಿದರು.
ಮಾಜಿ ಶಾಸಕರ ಪ್ರತಿಭಟನೆ; ಈ ಕುಡಿಯುವ ನೀರಿನ ಯೋಜನೆಯನ್ನು ನಮ್ಮ ಕಾಂಗ್ರೆಸ್ ಸರ್ಕಾರ ಹಾಗೂ ನಾನು ಶಾಸಕನಾಗಿದ್ದಾಗ ಜಾರಿಗೆ ತರಲಾಗಿತ್ತು. ಹಾಲಿ ಶಾಸಕರು ಕಾಮಗಾರಿ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಬಿ. ಜಿ. ಗೋವಿಂದಪ್ಪ ಪ್ರತಿಭಟನೆ ಕೈಗೊಂಡಿದ್ದರು.
ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, "ಕಳೆದ ಬಾರಿ ಮಾಜಿ ಶಾಸಕರು ಹಾಗೋ ಹಿಗೋ ಒಂದಿಷ್ಟು ಮತಗಳು ಪಡೆದಿದ್ದರು. ಈಗ ಒಳ್ಳೆ 480 ಕೋಟಿ ರೂಪಾಯಿ ಕಾಮಗಾರಿಗೆ ವಿರೋಧ ಮಾಡಿದರೆ ಈಬಾರಿ ಅಷ್ಟು ಮತುಗಳ ಬರಲ್ಲ" ಎಂದು ತಿರುಗೇಟು ನೀಡಿದರು.












Click it and Unblock the Notifications