ಚಿತ್ರದುರ್ಗ ಮುರುಘಾ ಶರಣರ ಬಂಧನ, ಕಾರಾಗೃಹವಾಸವರೆಗೆ ಟಾಪ್ 10 ಬೆಳವಣಿಗೆಗಳು
ಚಿತ್ರದುರ್ಗ, ಸೆಪ್ಟೆಂಬರ್ 2: ಇಬ್ಬರು ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದ ಆರೋಪದಲ್ಲಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಕೊನೆಗೂ ಜೈಲಿಗೆ ಕಳುಹಿಸಲಾಗಿದೆ. ಪೋಕ್ಸೋ ಪ್ರಕರಣದಡಿ ಆರೋಪ ಎದುರಿಸುತ್ತಿರುವ ಶ್ರೀಗಳ ವಿರುದ್ಧ ಆರು ದಿನಗಳ ಹಿಂದೆಯೇ ಪ್ರಕರಣ ದಾಖಲಾಗಿತ್ತು. ಅಲ್ಲಿಂದ ಶಿವಮೂರ್ತಿ ಶರಣರ ಸುತ್ತ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದರು. ಎಲ್ಲ ಪ್ರಭಾವ ಮತ್ತು ಒತ್ತಡಗಳ ಹೊರತಾಗಿ ಗುರುವಾರ ತಡರಾತ್ರಿ ಶ್ರೀಗಳನ್ನು ಬಂಧಿಸಲಾಗಿದೆ.
ಚಿತ್ರದುರ್ಗದಲ್ಲಿ ಗುರುವಾರ ಬಂಧನಕ್ಕೊಳಗಾದ ಮುರುಘಾಮಠದ ಶಿವಮೂರ್ತಿ ಶರಣರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೂ ಒಪ್ಪಿಸಿದ್ದು ಆಗಿದೆ. ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಕಾಲ ಕಳೆಯುತ್ತಿರುವ ಶ್ರೀಗಳ ಸುತ್ತ ಸುತ್ತಿಕೊಂಡಿರುವ ಆರೋಪಗಳು ಎಂಥದ್ದು?, ಆರು ದಿನಗಳ ಹಿಂದೆ ನೆಡೆದ ಆ ಮೊದಲ ಬೆಳವಣಿಗೆ ಏನು? ಅಂದಿನಿಂದ ಇಂದಿನವರೆಗೂ ಏನೆಲ್ಲಾ ಬೆಳಣಿವೆಗಗಳು ನಡೆದವು ಎಂಬುದನ್ನು ಈ ವರದಿಯಲ್ಲಿ ಓದಿ ತಿಳಿಯಿರಿ.
Breaking: ಚಿತ್ರದುರ್ಗ ಮುರುಘಾ ಶರಣರಿಗೆ 14 ದಿನ ನ್ಯಾಯಾಂಗ ಬಂಧನ
ಶಿವಮೂರ್ತಿ ಶರಣರ ವಿರುದ್ಧದ ಪೋಕ್ಸೋ ಕೇಸ್ ಸುತ್ತಮುತ್ತ:
* ಅಕ್ಕಮಹಾದೇವಿ ವಸತಿ ನಿಲಯದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಮುರುಘಾ ಮಠದ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
* ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ರಕ್ಷಿಸುವ ಕಾನೂನಿನ ಅಡಿಯಲ್ಲಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಇದರ ಮಧ್ಯೆ ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್) ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಾಗಿದೆ.
* ಕರ್ನಾಟಕದ ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಂತೆ ಗುರುವಾರ ರಾತ್ರಿ 10.22 ಸುಮಾರಿಗೆ ಶಿವಮೂರ್ತಿ ಶರಣರನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದರು.
* ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳ ದೃಷ್ಟಿಯಿಂದ ಪೊಲೀಸರು ತೀವ್ರ ಎಚ್ಚರಿಕೆ ವಹಿಸಿದ್ದು, ಬಂಧನಕ್ಕೆ ಗಂಟೆಗಳ ಮೊದಲು ಮಠದ ಮುಂಭಾಗದ ಬಾಗಿಲಿಗೆ ಬ್ಯಾರಿಕೇಡ್ ಹಾಕಲಾಗಿದ್ದು, ಹಿಂಬಾಗಿಲಿನಿಂದ ಅವರನ್ನು ಹೊರಗೆ ಕರೆದುಕೊಂಡು ಹೋಗಲಾಯಿತು.
* ಗುರುವಾರ ರಾತ್ರಿ ಮುರುಘು ಮಠದ ಶಿವಮೂರ್ತಿ ಶರಣರನ್ನು ಬಂಧಿಸಿದ ಚಿತ್ರದುರ್ಗ ಪೊಲೀಸರು ಅಜ್ಞಾತ ಸ್ಥಳಕ್ಕೆ ಅವರನ್ನು ಕರೆದುಕೊಂಡು ಹೋದರು. ನೇರವಾಗಿ ಮಠದಿಂದ ಚಳ್ಳಕೆರೆಯ ಅಜ್ಞಾತ ಸ್ಥಳದಲ್ಲಿ ಶ್ರೀಗಳನ್ನು ವಿಚಾರಣೆಗೆ ಒಳಪಡಿಸಲಾಯಿತು. ತದನಂತರ ಚಳ್ಳಕೆರೆಯ ಡಿವೈಎಸ್ಪಿ ಕಚೇರಿಗೆ ಕರೆತಂದು ಅಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಡಿವೈಎಸ್ಪಿ ರಮೇಶ್ಕುಮಾರ್ ನೇತೃತ್ವದಲ್ಲಿಯೇ ವಿಚಾರಣೆ ನಡೆಸಲಾಯಿತು.
* ಚಳ್ಳಕೆರೆಯಲ್ಲಿ ಮುರುಘಾ ಶರಣರ ವಿಚಾರಣೆ ಮುಗಿಯುತ್ತಿದ್ದಂತೆ ಅವರನ್ನು ಚಿತ್ರದುರ್ಗಕ್ಕೆ ವಾಪಸ್ ಕರೆದುಕೊಂಡು ಬರಲಾಯಿತು. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಶ್ರೀಗಳನ್ನು ಒಳಪಡಿಸಲಾಯಿತು. ಸಾಮಾನ್ಯ ವೈದ್ಯಕೀಯ ಪರೀಕ್ಷೆಯ ನಂತರವೇ ಪೊಲೀಸರು ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.
* ಗುರುವಾರ ಬಂಧಿಸಲ್ಪಟ್ಟ ಮುರುಘಾ ಶರಣರನ್ನು ಮಧ್ಯರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಚಿತ್ರದುರ್ಗದ 1ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಧೀಶರಾದ ಕೋಮಲಾ ಶ್ರೀಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸುವಂತೆ ಆದೇಶ ನೀಡಿದರು.
* ಚಿತ್ರದುರ್ಗದ 1ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶದ ಬೆನ್ನಲ್ಲೇ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಯಿತು.
* ಶಿವಮೂರ್ತಿ ಶರಣರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದಂತೆ ಚಿತ್ರದುರ್ಗ ಪೊಲೀಸರು ಹಲವು ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಪ್ರಾಥಮಿಕವಾಗಿ ಮುರುಘಾ ಮಠದ ಬಳಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಆ ಮೂಲಕ ಮಠದ ಸುತ್ತಮುತ್ತ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
* ಶಿವಮೂರ್ತಿ ಶರಣರ ಆರೋಗ್ಯ ದೃಷ್ಟಿಯಿಂದ ಮಧ್ಯಂತರ ಜಾಮೀನು ಕೋರಿ ಶ್ರೀಗಳ ಪರ ವಕೀಲರು ಶುಕ್ರವಾರ ಬೆಳಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.