Get Updates
Get notified of breaking news, exclusive insights, and must-see stories!

Srirangapatna-Bidar National Highway: ಯರಬಹಳ್ಳಿಯ 50ಕ್ಕೂ ಹೆಚ್ಚು ದಲಿತ ಕುಟುಂಬಗಳು ಬೀದಿ ಪಾಲು-ಕಾರಣ ಏನು?

ಹಿರಿಯೂರು, ಜುಲೈ, 27: ಕಳೆದ 9 ತಿಂಗಳಿನಿಂದ ಸುಮಾರು 50ಕ್ಕೂ ಹೆಚ್ಚು ದಲಿತ ಕುಟುಂಬಗಳು ಮೂಲಭೂತ ಸೌಕರ್ಯಗಳ ನಿರೀಕ್ಷೆಯಲ್ಲಿ ಕಾಡು ಜನರಂತೆ ಕತ್ತಲಲ್ಲೇ ಕಾಲ ಕಳೆಯುವ ಘನಘೋರ ಸ್ಥಿತಿ ಬೆಳಕಿಗೆ ಬಂದಿದೆ.

ತಾಲೂಕಿನ ಯರಬಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲಹಳ್ಳಿ ಗ್ರಾಮದ ದಲಿತ ಕಾಲೋನಿಯಲ್ಲಿ ನೆಮ್ಮದಿಯಾಗಿದ್ದ ಕುಟುಂಬಗಳು ಇದೀಗ ಮನೆ ಕಳೆದುಕೊಂಡು ಮೂಲಭೂತ ಸೌಕರ್ಯಗಳಿಲ್ಲದೆ, ಅಪಾಯದಲ್ಲಿ ಕತ್ತಲಲ್ಲಿ ಬದುಕುತ್ತಿರುವುದು ನೋಡುಗರ ಮನ ಕಲಕುವಂತಿದೆ.

More than 50 Dalit families are worried due to without Infrastructures in Yerabahalli

ಶ್ರೀರಂಗಪಟ್ಟಣ-ಬೀದರ್ ಎನ್‌ಹೆಚ್ 150ಎ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಈ ರಾಷ್ಟ್ರೀಯ ಹೆದ್ದಾರಿ ಹಿರಿಯೂರು ನಗರದ ಮೂಲಕ ಹಾದು ಚಳ್ಳಕೆರೆ ತಲುಪಿ ಮುಂದೆ ಹೋಗುತ್ತದೆ. ಆದರೆ ಯರಬಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗೊಲ್ಲಹಳ್ಳಿ ಗ್ರಾಮದ ದಲಿತ ಕಾಲೋನಿಯ ಕುಟುಂಬಗಳು ರಸ್ತೆ ಕಾಮಗಾರಿ ಹಿನ್ನಲೆಯಲ್ಲಿ ವಾಸದ ಮನೆಗಳನ್ನು ಸ್ವಾಧೀನ ಪಡಿಸಿಕೊಂಡಿದ್ದರಿಂದ ಕೆಲವು ದಲಿತ ಕುಟುಂಬಗಳು ಮನೆ ಕಳೆದುಕೊಳ್ಳುವ ಅನಿವಾರ್ಯತೆ ಬಂತು.

ಮನೆ ಕಳೆದುಕೊಂಡ ಕುಟುಂಬಗಳಿಗೆ ಹೆದ್ದಾರಿ ಪ್ರಧಾಕಾರದವರು ಒಂದೊಂದು ಮನೆಗೆ ಮೂರ್ನಾಲ್ಕು ವರ್ಷಗಳ ಹಿಂದೆಯೇ ಸುಮಾರು 10ರಿಂದ 18 ಲಕ್ಷದವರೆಗೆ ಪರಿಹಾರ ನೀಡಿ ಕೈ ತೊಳೆದುಕೊಂಡು, ಮನೆಗಳನ್ನು ಕೆಡವಿ ರಸ್ತೆ ಮಾಡುತ್ತಿದ್ದಾರೆ.

ಆದರೆ ಇವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಲಿಮಿಟೆಡ್ ಅಡಿಯಲ್ಲಿ ಯರಬಳ್ಳಿ ಗ್ರಾಮ ಪಂಚಾಯಿತಿ ಸರ್ವೇ ನಂಬರ್ 20ರಲ್ಲಿ 2021/2022ರಲ್ಲಿ ಗೊಲ್ಲಹಳ್ಳಿ ಗ್ರಾಮದ ಫಲಾನುಭವಿಗಳಿಗೆ ಜಿಲ್ಲಾಧಿಕಾರಿಗಳ ಕಚೇರಿ ಆದೇಶ ಸಂಖ್ಯೆ ಆಶ್ರಯ/ಹೆಚ್.ವೈ.ಆರ್/ಸಿಆರ್/11/2020/21ರಲ್ಲಿ 3 ಹೆಕ್ಟೇರ್‌ ಹಾಗೂ ಯರಬಳ್ಳಿಯ ಫಲಾನುಭವಿಗಳಿಗೆ ಆಶ್ರಯ/ಹೆಚ್.ವೈ.ಆರ್/ಸಿಆರ್/10/2020/21ರಲ್ಲಿ 3 ಹೆಕ್ಟೇರ್‌ ಸೇರಿದಂತೆ ಒಟ್ಟು 6 ಎಕರೆ ಜಮೀನಿನಲ್ಲಿ 75 ಯರಬಳ್ಳಿ ಫಲಾನುಭವಿಗಳು ಹಾಗೂ 56 ಗೊಲ್ಲಹಳ್ಳಿ ಫಲಾನುಭವಿಗಳಿಗೆ ಖಾಲಿ ನಿವೇಶನಗಳನ್ನು ನೀಡಿ ಮಂಜೂರು ಮಾಡಲಾಗಿದೆ.

ಆದರೆ ಅವರಿಗೆ ಯಾವುದೇ ಹಕ್ಕುಪತ್ರ ನೀಡಿಲ್ಲ. ಮನೆ ಕಳೆದುಕೊಂಡವರು ಆಶ್ರಯ ಪಡೆದು ಜೀವನ ಸಾಗಿಸಲು ಬಡಾವಣೆಯಲ್ಲಿ ತೆಂಗಿನ ಗರಿ, ಚಾಪೆಯಿಂದ ಗುಡಿಸಲು ನಿರ್ಮಿಸಿಕೊಂಡು ನರಕಯಾತನೆ ಅನುಭವಿಸುತ್ತಿದ್ದಾರೆ. ಅಲ್ಲಿರುವವರೆಲ್ಲರೂ ಅನಕ್ಷರಸ್ಥರೇ ಹೊರತು ಯಾರೂ ಅಕ್ಷರಸ್ಥರಿಲ್ಲ. ಅದರಲ್ಲೂ ವಯಸ್ಸಾದವರು, ಜೊತೆಗೆ ಕೂಲಿ ಮಾಡಿಕೊಂಡು ಕತ್ತಲಲ್ಲಿ ಕೈಯಲ್ಲಿ ಜೀವ ಹಿಡಿದು ಜೀವನ ಸಾಗಿಸುತ್ತಿದ್ದಾರೆ.

ಇನ್ನು ಅಲ್ಲಿ ಯಾವುದೇ ರೀತಿಯ ವಿದ್ಯುತ್, ರಸ್ತೆ, ಶುದ್ಧ ನೀರಿನ ವ್ಯವಸ್ಥೆ, ಮೂಲಭೂತ ಸೌಕರ್ಯಗಳು ಇಲ್ಲದಿರುವುದು ಅಲ್ಲಿನ ಕುಟುಂಬಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಳಪೆ ಗುಣಮಟ್ಟದ ಬಡಾವಣೆ ಕಾಮಗಾರಿ ಮಾಡಿ ಕೈ ಬಿಟ್ಟಿದ್ದಾರೆ. ಸರಿಯಾದ ರಸ್ತೆಯಿಲ್ಲ, ವಿದ್ಯುತ್ ವ್ಯವಸ್ಥೆ ಇಲ್ಲ. ಶೌಚಾಲಯ, ಚರಂಡಿ ನೀರಿನ ಪೈಪ್‌ಲೈನ್ ವ್ಯವಸ್ಥೆ, ಬೀದಿ ದೀಪ ಇಲ್ಲದೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ.

ಅದರಲ್ಲೂ ಇದೀಗ ಮಳೆಗಾಲ ಆಗಿರುವುದರಿಂದ ಹಾವು, ಚೇಳು ಇನ್ನೀತರ ವಿಷಜಂತುಗಳ ಕಾಟ ಹೆಚ್ಚಾಗಿದೆ. ಕಾಟಾಚಾರಕ್ಕೆ ಒಂದು ಬೋರ್ ವೆಲ್ ಕೊರೆಯಲಾಗಿದೆ. ಅದಕ್ಕೆ ವಿದ್ಯುತ್ ಇಲ್ಲ. ಬದಲಿಗೆ ಮಾನವೀಯತೆ ದೃಷ್ಟಿಯಿಂದ ಬಡಾವಣೆ ಪಕ್ಕದ ರೈತನೊಬ್ಬ ತನ್ನ ಜಮೀನಿನಿಂದ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಟ್ಟಿದ್ದಾರೆ.

ಮನೆ ಕಳೆದುಕೊಂಡು ಇಲ್ಲಿಗೆ ಬಂದು 9 ತಿಂಗಳು ಆಗಿದೆ. ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಸಿಕ್ಕಿಲ್ಲ. ನಾವು ಅನಕ್ಷರಸ್ಥರಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಸೌಕರ್ಯ ಕಲ್ಪಿಸುವಂತೆ ಸ್ಥಳೀಯ ಜಿಲ್ಲಾಡಳಿತದ ಗಮನಕ್ಕೆ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ನಾವು ಎರಡು ದಿನಕ್ಕೊಮ್ಮೆ ಮೊಬೈಲ್ ಚಾರ್ಜ್ ಇಟ್ಟುಕೊಳ್ಳಲು ಎರಡು ಕಿಲೋ ಮೀಟರ್ ದೂರದ ಊರಿಗೆ ಹೋಗಬೇಕೆಂದು ಸ್ಥಳೀಯ ಹಿರಿಯ ಯಜಮಾನ ರಂಗಸ್ವಾಮಿ ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ಒನ್ ಇಂಡಿಯಾ ಕನ್ನಡ ನ್ಯೂಸ್ ಪ್ರತಿನಿಧಿ ಜೊತೆ ದೂರವಾಣಿ ಮೂಲಕ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್ ಅವರು, "ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಅಲ್ಲಿ ತುಂಬಾ ಸಮಸ್ಯೆ ಇದೆ. ಬಡಾವಣೆ ಕಾಮಗಾರಿ ಕಳಪೆಯಿಂದ ಕೂಡಿದೆ. ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಜಿಲ್ಲಾಡಳಿತಕ್ಕೆ ಪಟ್ಟಿ ಕಳಿಸಲಾಗಿದೆ. ಎರಡು ತಿಂಗಳಲ್ಲಿ ಹಕ್ಕುಪತ್ರ ವಿತರಣೆ ಮಾಡಲಾಗುವುದು," ಎಂದು ಭರವಸೆ ನೀಡಿದರು.

ಒಟ್ಟಾರೆಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಕ್ಷೇತ್ರದಲ್ಲಿ ದಲಿತ ಕುಟುಂಬಗಳು ಈ ರೀತಿ ಸಮಸ್ಯೆ ಎದುರಿಸುತ್ತಿದ್ದು, ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಂಡು ದಲಿತ ಕುಟುಂಬಗಳಿಗೆ ಯಾವ ರೀತಿ ನ್ಯಾಯ ಒದಗಿಸುತ್ತಾರೆ ಎಂದು ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+