"ಮೋದಿ, ಶಾ ಬೆಂಬಲ ಇಲ್ಲದೆ ಯತ್ನಾಳ್ ಹೀಗೆ ಹೇಳಲು ಸಾಧ್ಯವಿಲ್ಲ"
ಚಿತ್ರದುರ್ಗ, ಅಕ್ಟೋಬರ್ 28: ಚುನಾವಣೆ ಸಂದರ್ಭಗಳಲ್ಲಿ ಎಲ್ಲಾ ಪಕ್ಷದವರು ಹಣ, ಹೆಂಡ ಸಾರಾಯಿ ಹಂಚುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮತದಾರರು ಮೂರು ಕಡೆ ಹಣ ತೆಗೆದುಕೊಂಡು ಒಬ್ಬರಿಗೆ ಹಾಕುತ್ತಾರೆ. ದುಡ್ಡು ಕೊಟ್ಟು ಗೆದ್ದವರು ಅವಧಿಪೂರ್ಣ ಕೆಲಸ ಮಾಡುವುದಿಲ್ಲ. ಇದು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದ್ದು, ಹೇಸಿಗೆ ತರಿಸಿದೆ. ರಾಜಕಾರಣ ಬೇಡ ಅನ್ನಿಸಿದರೂ ನಾವು ಡ್ರಗ್ ಅಡಿಕ್ಟ್ ಆದಂತಾಗಿದೆ ಎಂದರು.
ಸಿಎಂ ಹುದ್ದೆಗಾಗಿ ಎಲ್ಲರೂ ತಿರುಕನ ಕನಸು ಕಾಣುತ್ತಿದ್ದಾರೆ: ಹೊರಟ್ಟಿ
ಇನ್ನು ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಹೊರಟ್ಟಿ, "ಮೋದಿ, ಶಾ ಬೆಂಬಲ ಇಲ್ಲದೆ ಬಿಜೆಪಿ ಶಾಸಕ ಯತ್ನಾಳ್ ಹೇಳಲು ಸಾಧ್ಯವಿಲ್ಲ. ಮೋದಿ, ಶಾ ಪ್ರಭಾವದ ಕಾರಣವಾಗಿಯೇ ಯತ್ನಾಳ್ ವಿರುದ್ಧ ಇನ್ನೂ ಕ್ರಮ ಆಗಿಲ್ಲ" ಎಂದರು.
Recommended Video
"ನಾನೇ ಸಿಎಂ ಆಗುತ್ತೇನೆ ಎಂದು ಯತ್ನಾಳ್ ನನ್ನ ಬಳಿ ಹೇಳಿದ್ದಾರೆ. ಸಿಎಂ ಬಿಎಸ್ವೈ ಅವರನ್ನು ಅಧಿಕಾರದಿಂದ ಇಳಿಸುತ್ತಾರೋ ಇಲ್ವೋ ಗೊತ್ತಿಲ್ಲ, ಬಿಎಸ್ವೈ ಸಿಎಂ ಬಳಿಕ ಯತ್ನಾಳ್ ಸಿಎಂ ಆಗುತ್ತಾರೋ ಗೊತ್ತಿಲ್ಲ. ಆದರೆ ಕೇಂದ್ರದ ಎಲ್ಲ ನಾಯಕರು ಯತ್ನಾಳ್ ಪರವಾಗಿದ್ದಾರೆ. ಮೂರು ಪಕ್ಷದ ಹೈಕಮಾಂಡ್ ಗಳಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಮೋದಿ ಎದುರು ಯಾರೂ ನಿಲ್ಲೋಕಾಗೋದಿಲ್ಲ. ಇಂಥ ಸಂದರ್ಭದಲ್ಲಿ ಯತ್ನಾಳ್ ನಾನೇ ಸಿಎಂ ಅಂತಿದ್ದಾರೆ. ಯತ್ನಾಳ್ ವಿರುದ್ಧ ಕ್ರಮ ಆಗಿಲ್ಲ ಅಂದರೆ ಹೈಕಮಾಂಡ್ ಅವರ ಪರವಾಗಿದೆ ಎಂದೇ ಅರ್ಥ" ಎಂದು ಬಸವರಾಜ ಹೊರಟ್ಟಿ ತಿಳಿಸಿದರು.