ಚಿತ್ರದುರ್ಗ: ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳ ಪರದಾಟ; ಶಾಸಕಿ ದಿಢೀರ್ ಭೇಟಿ
ಚಿತ್ರದುರ್ಗ, ಜನವರಿ 9: ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಸರ್ಕಾರಿ ವೈದ್ಯರಿಲ್ಲದೆ ರೋಗಿಗಳು ಪರದಾಡಿದ ಗಂಭೀರ ಪರಿಸ್ಥಿತಿ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಘಟನೆ ಶುಕ್ರವಾರ ತಡರಾತ್ರಿ 9 ರಿಂದ 10 ಗಂಟೆಯಲ್ಲಿ ನಡೆದಿದ್ದು, ಕರ್ತವ್ಯಕ್ಕೆ ಬಾರದ ವೈದ್ಯರ ಕಳ್ಳಾಟ ಬಯಲಾಗಿದೆ. ಇನ್ನು ಚಿಕಿತ್ಸೆಗಾಗಿ ಬಂದ ರೋಗಿಗಳು ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಕಂಗಾಲಾಗಿದ್ದು, ದಿಕ್ಕು ತೋಚದೆ ಚಿಕಿತ್ಸೆ ಪಡೆಯಲು ರೋಗಿಗಳು ಅಂಬುಲೆನ್ಸ್ ನಲ್ಲಿ ಬೇರೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಷಯ ತಿಳಿದ ತಕ್ಷಣ ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿ ಹತ್ತಿರ ಡಾಕ್ಟರ್ ಯಾರು ಇದ್ದಾರೆ ಎಂದು ಕೇಳಿದಾಗ, ಸಿಬ್ಬಂದಿಗಳು ಮೇಲೆ ಇದ್ದಾರೆ, ಕೆಳಗೆ ಇದ್ದಾರೆ ಎಂದು ತಡವರಿಸಿಕೊಂಡು ಉತ್ತರ ನೀಡಿದರು.

ಶಾಸಕರು ನೀವು ಯಾಕೆ ಸುಳ್ಳು ಹೇಳ್ತಿರಾ, ಎಲ್ಲಿ ಕರಿರೀ ಡಾಕ್ಟರ್ ನಾ ಅಂದಾಗ ಸಿಬ್ಬಂದಿಗಳು ಮೌನಕ್ಕೆ ಶರಣಾದರು. ಆಸ್ಪತ್ರೆಯಲ್ಲಿ ಅವ್ಯವಸ್ಥೆ, ಸಿಬ್ಬಂದಿಗಳ ಬೇಜವಾಬ್ದಾರಿ ಕಂಡ ಶಾಸಕಿ ಕೆ.ಪೂರ್ಣಿಮಾ ಅವರು ಅಧಿಕಾರಿಗಳ ವಿರುದ್ಧ ಗರಂ ಆದರು. ಕರ್ತವ್ಯಕ್ಕೆ ಹಾಜರಾಗದ ವೈದ್ಯರಿಗೆ ದೂರವಾಣಿ ಮೂಲಕ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.

ಅಲ್ಲಿನ ಸಿಬ್ಬಂದಿಯ ಹಾಜರಾತಿಯನ್ನು ಪರಿಶೀಲಿಸಿ, ಸಿಬ್ಬಂದಿಗಳ ಕೆಲವು ತಪ್ಪುಗಳನ್ನು ಅಲ್ಲಿಯೇ ಸರಿಪಡಿಸಿದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರ ಹೆರಿಗೆ ವಿಭಾಗಕ್ಕೆ ಭೇಟಿ ನೀಡಿ, ಹಸುಗುಸು ಕಂದಮ್ಮಗಳನ್ನು ಎತ್ತಿಕೊಂಡು ತಾಯಂದಿರ ಜೊತೆ ಮಾತಾಡಿಸಿದರು. ಅಲ್ಲಿನ ಸ್ವಚ್ಛತೆ, ವ್ಯವಸ್ಥೆಗಳ ಗುಣಮಟ್ಟವನ್ನು ಪರೀಕ್ಷಿಸಿ ಮತ್ತು ಅಲ್ಲಿನ ವೈದ್ಯರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿ, ಮತ್ತೊಮ್ಮೆ ಈ ತರ ಘಟನೆ ನಡೆಯದಂತೆ ಆಸ್ಪತ್ರೆ ಸಿಬ್ಬಂದಿಗಳಿಗೆ ತಾಕೀತು ಮಾಡಿದರು.

8 ಜನಕ್ಕೂ ಹೆಚ್ಚು ವೈದ್ಯರನ್ನು ಒಳಗೊಂಡಿರುವ ಹಿರಿಯೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿನಿತ್ಯ ರೋಗಿಗಳು ಪರದಾಡುವ ಸ್ಥಿತಿ ನಿಂತಿಲ್ಲ. ಈ ಆಸ್ಪತ್ರೆಯ ವಿರುದ್ಧ ಪ್ರತಿದಿನ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ ಎನ್ನಲಾಗಿದೆ. ಕರ್ತವ್ಯಕ್ಕೆ ಹಾಜರಾಗಿ ರೋಗಿಗಳಿಗೆ ಚಿಕಿತ್ಸೆ ನೀಡದೇ ಇರುವ ವೈದ್ಯರನ್ನು ಕೂಡಲೇ ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಬೇರೆ ವೈದ್ಯರನ್ನು ನಿಯೋಜಿಸಬೇಕೆಂದು ಸಾರ್ವಜನಿಕರು ಶಾಸಕರನ್ನು ಒತ್ತಾಯಿಸಿದ್ದಾರೆ.












Click it and Unblock the Notifications