ಕೋವಿಡ್ ನಿಯಂತ್ರಣದಲ್ಲಿ ಕರ್ನಾಟಕದಲ್ಲಿ ಉತ್ತಮ ಕೆಲಸ; ಪೂರ್ಣಿಮಾ
ಚಿತ್ರದುರ್ಗ, ಜೂನ್ 15; "ರಾಜ್ಯದಲ್ಲಿ ಕೋವಿಡ್ 2ನೇ ಅಲೆ ತಡೆಗಟ್ಟುವಲ್ಲಿ ನಮ್ಮ ಸರ್ಕಾರ, ನಮ್ಮ ಮುಖ್ಯಮಂತ್ರಿಗಳು ಬೇರೆ ರಾಜ್ಯಗಳಿಗಿಂತ ಉತ್ತಮವಾಗಿ ಕೆಲಸ ಮಾಡಿದ್ದಾರೆ" ಎಂದು ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಮಂಗಳವಾರ ಹಿರಿಯೂರು ನಗರದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರು, ಕುಂಬಾರು, ಮಡಿವಾಳರಿಗೆ, ಟ್ಯಾಕ್ಸಿ ಚಾಲಕರು ಸೇರಿದಂತೆ ಇತರೆ ವರ್ಗದ ಬಡವರಿಗೆ ದಿನಸಿ ಕಿಟ್ಗಳನ್ನು ಶಾಸಕಿ ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಅವರು, "ಹಿರಿಯೂರು ತಾಲ್ಲೂಕಿನಲ್ಲಿ ಎಲ್ಲಾ ಕೊರೊನಾ ವಾರಿಯರ್ಸ್ಗಳ ಕೆಲಸದಿಂದ ಕೋವಿಡ್ ಸೋಂಕು ಗಣನಿಯವಾಗಿ ಇಳಿಕೆ ಕಂಡಿದೆ" ಎಂದರು.
"ಲಸಿಕೆ ನೀಡಲಾಗುತ್ತಿದ್ದು ಈಗಾಗಲೇ ಕ್ಷೇತ್ರದಲ್ಲಿ 80 ಸಾವಿರಕ್ಕೂ ಅಧಿಕ ಮಂದಿ ಲಸಿಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೊರೊನಾ ಮೂರನೇ ಅಲೆ ತಡೆಯಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಲೂಕಿನಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಶೀಘ್ರದಲ್ಲೇ ಭೂಮಿ ಪೂಜೆ ನೆರವೇರಿಸಲಾಗುತ್ತದೆ" ಸಹ ಶಾಸಕಿ ಭರವಸೆ ನೀಡಿದರು.

"ಸೋಂಕು ಇಳಿಕೆಯಾಗಿದೆ ಎಂದು ಯಾರೂ ಕೂಡ ಮೈಮರೆಯಬಾರದು. ಕ್ಷೇತ್ರದ ಎಲ್ಲರಿಗೂ ಹಂತ ಹಂತವಾಗಿ ಲಸಿಕೆ ನೀಡಲಾಗುತ್ತದೆ. ತಾಲೂಕಿನಲ್ಲಿ 28 ಸಾವಿರ ಶಾಲಾ ಮಕ್ಕಳಿಗೆ ಬಿಸಿಯೂಟ ಪದಾರ್ಥ ವಿತರಣೆ ಮಾಡಲಾಗಿದೆ" ಎಂದರು.
"ರಾಜ್ಯದಲ್ಲಿ 2ನೇ ಅಲೆ ಭೀಕರವಾಗಿ ಅಪ್ಪಳಿಸಿತ್ತು. ಒಬ್ಬೊಬ್ಬ ವ್ಯಕ್ತಿಯಿಂದ, ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ರೀತಿ ಇತ್ತು. ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು ಸಮೀಕ್ಷೆ ಮಾಡಿ ಸೋಂಕು ನಿಯಂತ್ರಿಸುವಲ್ಲಿ ಕಾರಣಿಕರ್ತರಾದರು" ಎಂದು ಬಣ್ಣಿಸಿದರು.
"ಸರ್ಕಾರ ಕೋವಿಡ್ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದುದ ವಿರೋಧ ಪಕ್ಷಗಳು ಟೀಕೆ ಮಾಡಬಹುದು. ಒಂದು ಮನೆಯಲ್ಲಿ ಇಪ್ಪತ್ತು ಜನಕ್ಕೆ ಅಡುಗೆ ಮಾಡಿದಾಗ ಮೂವತ್ತು ಜನ ಬಂದರೆ ಅನುಸರಿಸಿ ಊಟ ಬಡಿಸಬಹುದು. ಆದರೆ 150 ಜನರು ಬಂದರೆ ಬಡಿಸೋಕೆ ಸಾಧ್ಯಾನಾ?" ಎಂದು ಪ್ರಶ್ನಿಸಿದರು.
"ಕೊರೊನಾ ವೇಗವಾಗಿ ಹೆಚ್ಚುತ್ತಿರುವಾಗ ಸ್ವಲ್ಪ ದಿನ ಕಷ್ಟವಾಗಿದೆ. ಆದರೆ ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದೆ" ಎಂದು ತಿಳಿಸಿದರು.
"ಮೊದಲ ಅಲೆಯಲ್ಲಿ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಅದರಂತೆ ಎರಡನೇ ಅಲೆಯ ಲಾಕ್ಡೌನ್ ಸಂದರ್ಭದಲ್ಲಿ ನಮ್ಮ ಮುಖ್ಯಮಂತ್ರಿಗಳು ಹೂ ಬೆಳೆಗಾರರಿಗೆ, ಟ್ಯಾಕ್ಸಿ ಚಾಲಕರಿಗೆ, ಹಣ್ಣು ಬೆಳೆಗಾರರಿಗೆ ಹೀಗೆ ಎಲ್ಲಾ ವರ್ಗದವರಿಗೂ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ" ಎಂದು ಶಾಸಕಿ ವಿವರಿಸಿದರು.











Click it and Unblock the Notifications