ಕಾಂಗ್ರೆಸ್ ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳ ವಿರುದ್ಧ ಸಚಿವ ಬಿಸಿ ಪಾಟೀಲ್ ವ್ಯಂಗ್ಯ
ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆಯ ವಿರುದ್ಧ ಕೃಷಿ ಸಚಿವ ಬಿಸಿ ಪಾಟೀಲ್ ವ್ಯಂಗ್ಯವಾಡಿದರು.
ಚಿತ್ರದುರ್ಗ, ಫೆಬ್ರವರಿ 25: ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆಯ ವಿರುದ್ಧ ಕೃಷಿ ಸಚಿವ ಬಿಸಿ ಪಾಟೀಲ್ ವ್ಯಂಗ್ಯವಾಡಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಸೇರಿ ಅನೇಕ ಕೆಲಸ ಹೇಳದೆ ಮಾಡಿದ್ದೇವೆ. "ಆಡದೆ ಕೊಡುವವನು ಉತ್ತಮ, ಆಡಿ ಕೊಡುವವ ಮಧ್ಯಮ, ಆಡಿಯೂ ಕೊಡದವ ಅಧಮ", ಕಾಂಗ್ರೆಸ್ ಪಕ್ಷದವರು ಅಧಮರು ಆಗುತ್ತಾರೆಂದು ವಚನದ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ.

ಕಾಂಗ್ರೆಸ್ ನಾಯಕರು ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ್ದಾರೆ. ಆದರೆ ಜನರಿಗೆ ಯೋಜನೆ ಕೊಡುವ ಯಾವುದೇ ಗ್ಯಾರಂಟಿ ಇಲ್ಲ. ಅಲ್ಲದೇ ಪುಕ್ಕಟೆ ಕಾರ್ಡ್ ಬಿಡುಗಡೆ ಮಾಡುವುದು ದೊಡ್ಡ ವಿಷಯ ಅಲ್ಲ, ನುಡಿದಂತೆ ನಡೆಯಬೇಕು, ಕಾಂಗ್ರೆಸ್ಸಿಗರಿಗೆ ನುಡಿದಂತೆ ನಡೆಯಲಾಗದು ಎಂದು ಕಾಂಗ್ರೆಸ್ ವಿರುದ್ಧ ಕುಟುಕಿದರು.
ಇನ್ನು ಮಾಜಿ ಸಿಎಂ ಸಿದ್ಧರಾಮಯ್ಯ ಬಹಳ ದೊಡ್ಡವರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬಾಯಿಗೆ ಬಂದಂತೆ ಬೈದು ಮಾತಾನಾಡುತ್ತಾರೆ. ಭಾರತ ದೇಶವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದಿರುವ ಪ್ರಧಾನಿ ಬಗ್ಗೆಯೇ ಮಾತಾಡುವುದು ಸರಿಯಲ್ಲ ಎಂದರು.

ರಾಜ್ಯದಲ್ಲಿ ಕೆಲ ಶ್ರೀಗಳಿಗೆ ಕಾಂಗ್ರೆಸ್ ಪರ ಒಲವು ವಿಚಾರ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸ್ವಾಮೀಜಿಗಳು ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ನಿಂತುಕೊಳ್ಳಲಿ, ಕಾಂಗ್ರೆಸ್ ಪರ ಬ್ಯಾಟಿಂಗ್ ಏಕೆ, ಬ್ಯಾಟಿಂಗ್, ಬಾಲಿಂಗ್ ಎರಡೂ ಮಾಡಲಿ. ನಮ್ಮ ಪರವಾಗಿರಿ ಎಂದು ನಾವು ಕೇಳಲ್ಲ. ಬದಲಿಗೆ ನಮ್ಮಕೆಲಸ ನೋಡಿ ಮತ ನೀಡುತ್ತಾರೆ ಎಂದರು.
ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲದ ಅರ್ಕಾವತಿ ಹಗರಣವನ್ನು ಮುಖ್ಯಮಂತ್ರಿಗಳು ಬಿಚ್ಚಿಟ್ಟಿದ್ದಾರೆ. ಸುಮಾರು 8 ಸಾವಿರ ಕೋಟಿ ಹಗರಣವನ್ನು ಬಿಚ್ಚಿಟ್ಟಿದ್ದಾರೆ. ಇಂತಹ ಪ್ರಕರಣವನ್ನು ಮುಚ್ಚಿ ಹಾಕಲು ಲೋಕಾಯುಕ್ತವನ್ನು ಮುಚ್ಚಿದರು. ಬಿಜೆಪಿ ಬಗ್ಗೆ ಕಾಂಗ್ರೆಸ್ ಮಾತಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ, ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಕೂಸು ಎಂದು ಸಚಿವರು ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದರು.












Click it and Unblock the Notifications