ಮೀಸಲಾತಿ ಹೋರಾಟ; ಒಂದು ಸಮಾಜಕ್ಕೆ ವರದಿ ಕೇಳಿರುವುದು ಸರಿಯೇ?
ಚಿತ್ರದುರ್ಗ, ಫೆಬ್ರವರಿ 19; "ರಾಜ್ಯದಲ್ಲಿ ಬರುವ ಸುಮಾರು 42 ಸಮಾಜಗಳಿಗೆ ದ್ರೋಹ ಮಾಡಿ, ಕೇವಲ ಒಂದು ಸಮಾಜಕ್ಕೆ ವರದಿ ಕೇಳುವುದು ಸರಿಯೇ?" ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಂ. ಡಿ. ಲಕ್ಷ್ಮೀನಾರಾಯಣ ಸರ್ಕಾರವನ್ನು ಪ್ರಶ್ನಿಸಿದರು.
ಶುಕ್ರವಾರ ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, "102 ಸಮಾಜಗಳು ಮೀಸಲಾತಿಗೆ ಸೀಮಿತವಾಗಿವೆ. ಅದರಲ್ಲೂ ಕೂಡ ಬಡ ಸಮಾಜಗಳು, ದುಡಿಯುವ ಸಮಾಜಗಳಿಗೆ ಹಿಂದುಳಿದ ವರ್ಗದಲ್ಲಿ ಸ್ಥಾನ ಮಾನಗಳೂ ಇಂದಿಗೂ ಸಿಕ್ಕಿಲ್ಲ" ಎಂದರು.
"ಹಿಂದುಳಿದ ವರ್ಗಗಳ 2ಎಗೆ ಸೇರಲಿಕ್ಕೆ ಅಪೇಕ್ಷೆ ಪಟ್ಟಿರುವ ಸಮಾಜಗಳ ಬಗ್ಗೆ ಪ್ರಶ್ನೆ ಕೇಳಿದಾಗ ಸುಮಾರು 43 ಸಮಾಜಗಳು, ಸುಮಾರು 20 ವರ್ಷಗಳಿಂದ 2ಎಗೆ ಸೇರಿಸಬೇಕೆಂದು ಅರ್ಜಿ, ಮನವಿಯನ್ನು ಸಲ್ಲಿಸುತ್ತಾ ಬಂದಿವೆ. ಇಂತಹ ಸಂದರ್ಭದಲ್ಲಿ ಅದಕ್ಕೆ ಆದ ಒಂದು ಕುಲಶಾಸ್ತ್ರೀಯ ಅಧ್ಯಯನ ಮಾಡಬೇಕಾದ ಕರ್ತವ್ಯ ಸರ್ಕಾರದ್ದಾಗಿದೆ" ಎಂದರು.

"ಸರ್ಕಾರ ಏಕಾಏಕಿ ಮುಂದುವರಿದ ಸಮಾಜಗಳನ್ನು 2ಎಗೆ ಸೇರಿಸಲಿಕ್ಕೆ ಶಿಫಾರಸು ಮಾಡಲಿಕ್ಕೆ ಒತ್ತಡ ತರುವುದು ಒಂದು ಕಡೆಯಾಗಿದೆ. 2ಎಗೆ ಇರುವ 15% ಮೀಸಲಾತಿ ಹೆಚ್ಚಳ ಮಾಡಲಿಕ್ಕೆ ಯಾವುದೇ ಕಾರಣಕ್ಕೂ ಕೂಡ ಸರ್ಕಾರ ಕೈಯಲ್ಲಿ ಆಗುವುದಿಲ್ಲ" ಎಂದು ಹೇಳಿದರು.
"ಮುಂದುವರಿದ ಸಮಾಜಗಳು ಮೀಸಲಾತಿ ಕೇಳುತ್ತಿರುವ ಸರಿಯಲ್ಲ. ನಾನು ರಾಜ್ಯ ಸುತ್ತುವ ಸಂದರ್ಭದಲ್ಲಿ ಎಲ್ಲಾ ಜಿಲ್ಲಾ, ತಾಲೂಕುಗಳಲ್ಲಿ ಸಣ್ಣ ಸಮಾಜಗಳು ಧ್ವನಿ ಎತ್ತದೆ ಆಗದೇ ಇರುವಂತರು ನಮ್ಮ ಮೂಲಕ ಹೇಳುತ್ತಿದ್ದಾರೆ" ಎಂದು ತಿಳಿಸಿದರು.
"ಬಿಜೆಪಿ ಪಕ್ಷದ ಯಾವುದೇ ಸರ್ಕಾರ ಎಲ್ಲ ಸಮಾಜವನ್ನು ನಾವು ಸಮಾನತೆಯಿಂದ ನೋಡ್ತಿವಿ ಎನ್ನುವ ವ್ಯಾಖ್ಯಾನವನ್ನು ಭಾಷಣದಲ್ಲಿ ಹೇಳುತ್ತಾರೆ. ಆದರೆ, ಇಂದು ಸಮಾಜವನ್ನು ಒಡೆದು ಆಳುವ ವ್ಯವಸ್ಥೆ ಮಾಡಿದ್ದಾರೆ. ಎಲ್ಲಾ ಸಮುದಾಯಗಳಿಗೂ ಸಮಾನ ಅಭಿವೃದ್ಧಿ ನಿಗಮ ಘೋಷಣೆ ಮಾಡಲಿ ಹಾಗೂ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿ, ಅನುದಾನ ಬಿಡುಗಡೆ ಮಾಡಬೇಕು" ಎಂದು ಒತ್ತಾಯಿಸಿದರು.












Click it and Unblock the Notifications