ಮಂಗಳೂರು ಸ್ಫೋಟ ಪ್ರಕರಣ: ಭಯೋತ್ಪಾದಕರಿಂದ ಹಿಂದುಗಳ ಟಾರ್ಗೆಟ್ ಎಂದ ಸಿಎಂ
ಚಿತ್ರದುರ್ಗ, ನವೆಂಬರ್ 22: ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿತ್ರದುರ್ಗದಲ್ಲಿ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದ ಹಿಂದುಗಳನ್ನು ಭಯೋತ್ಪಾದಕರು ಟಾರ್ಗೆಟ್ ಮಾಡಿದ್ದಾರೆ. ಹಾಗಾಗಿ ಈ ಕುಕ್ಕರ್ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈಗಾಗಲೇ ಕರ್ನಾಟಕ ಪೋಲಿಸ್ 18 ಸ್ಲಿಪರ್ ಸೇಲ್ ಹಿಡಿದು ತಿಹಾರ್ ಜೈಲಿಗೆ ಕಳಿಸಿದ್ದಾರೆ. ಆದರೂ ಕೂಡ ಇದು ನಿರಂತರವಾಗಿ ನಡೆಯುತ್ತಿದೆ ಎಂದರು. ಭಯೋತ್ಪಾದಕರು ಹೊರ ರಾಜ್ಯಗಳ ಸಂಪರ್ಕ ಇಟ್ಟುಕೊಂಡು ರಾಜ್ಯಕ್ಕೆ ನುಸುಳುತಿದ್ದಾರೆ. ಅಂತಹವರನ್ನು ನಿಯಂತ್ರಣ ಮಾಡಲಾಗಿದೆ. ದೇಶದ ಸುರಕ್ಷತೆ ಇಟ್ಟುಕೊಂಡು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು. ಕುಕ್ಕರ್ ಸ್ಫೋಟ ಪ್ರಕರಣಕ್ಕೆ ಬಂಧಿಸಿದ ಆರೋಪಿಯ ಬಗ್ಗೆ 24 ಗಂಟೆಯೊಳಗೆ ನಿಜವಾದ ಮಾಹಿತಿ ತಿಳಿದುಬರಲಿದೆ. ಇದರ ಹಿಂದೆ ರಾಷ್ಟ್ರ ಅಥವಾ ಅಂತಾರಾಷ್ಟ್ರೀಯ ಮಟ್ಟದ್ದು ಯಾವುದೇ ಆಗಿದ್ದರೂ ಅದನ್ನು ಭೇದಿಸಲು ಎನ್ಐಎ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಸ್ಫೋಟ ಪ್ರಕರಣ
ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ದೊಡ್ಡ ಮಟ್ಟದಲ್ಲಿ ಕೃತ್ಯ ನಡೆಸಲು ಶಾರಿಕ್ ಯೋಜನೆ ರೂಪಿಸಿದ್ದು, ಉಗ್ರರ ಲಿಂಕ್ ಇರುವ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ ಅನುಮಾನ ಮೂಡಿದೆ ಬಂದಿದೆ. ಶಾರಿಕ್ನೊಂದಿಗೆ ಮತ್ತಷ್ಟು ಯುವಕರು ಇರುವ ಸಾಧ್ಯತೆ ಇದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ಚುರುಕುಗೊಂಡಿದೆ. ಆಟೋದಲ್ಲಿ ಸ್ಪೋಟಕ್ಕೆ ಕಾರಣಕರ್ತನಾಗಿದ್ದಾನೆ ಎನ್ನಲಾದ ಶಾರಿಕ್ ಇದೀಗ ಪೊಲೀಸರ ವಶದಲ್ಲಿದ್ದಾನೆ. ಸ್ಫೋಟದಲ್ಲಿ ಗಾಯಗೊಂಡ ಕಾರಣ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನುವ ಮಾಹಿತಿ ಹೊರಬಿದ್ದಿದೆ. ಸ್ಪೋಟದ ಹಿಂದೆ ದೊಡ್ಡದಾದ ಜಾಲ ಇರಬಹುದು ಎಂಬ ಅನುಮಾನ ಪೊಲೀಸರಿಗೆ ಮೂಡಿದೆ. ಈ ಹಿನ್ನೆಲೆ ಕಳೆದ ಎರಡು ದಿನಗಳಿಂದ ಪೊಲೀಸರು ಅಲರ್ಟ್ ಆಗಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲಿ ರಾಷ್ಟ್ರೀಯ ತನಿಖಾದಳ ಮಾಹಿತಿಗಳನ್ನು ಕಲೆ ಹಾಕುತ್ತಿದೆ. ಮುಂದೆ ಆಗಬಹುದಾದ ಅವಘಡಗಳನ್ನು ತಪ್ಪಿಸಲು ರಾಜ್ಯ ಹಾಗೂ ಕೇಂದ್ರ ಪೊಲೀಸ್ ಇಲಾಖೆ ಸೂಕ್ರ ಕ್ರಮಕ್ಕೆ ಮುಂದಾಗಿದೆ. ಹೀಗೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕಿತ ಉಗ್ರ ಶಾರಿಕ್ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲು ರಾಷ್ಟ್ರೀಯ ತನಿಖಾ ದಳ ಕಾತುರದಿಂದ ಕುಳಿತಿದೆ.

ಶಿವಮೊಗ್ಗದಲ್ಲಿ ಟ್ರಯಲ್ ಬ್ಲಾಸ್ಟ್ ಪ್ರಕರಣ
ಕುಕ್ಕರ್ ಸ್ಪೋಟ ಪ್ರಕರಣದಲ್ಲಿ ತೀರ್ಥಹಳ್ಳಿಯ ಶಾರಿಕ್ ಎಂಬಾತನಿಗೆ ಶೇಕಡಾ 40ರಷ್ಟು ಸುಟ್ಟ ಗಾಯವಾಗಿದೆ. ಈಗಾಗಲೇ ಶಿವಮೊಗ್ಗದಲ್ಲಿ ಟ್ರಯಲ್ ಬ್ಲಾಸ್ಟ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಶಾರಿಕ್ಗಾಗಿ ಪೊಲೀಸರು, ರಾಷ್ಟ್ರೀಯ ತನಿಖಾ ಸಂಸ್ಥೆ, ಗುಪ್ತಚರ ಇಲಾಖೆ ಅಧಿಕಾರಿಗಳು ಶೋಧ ಮಾಡುತ್ತಿದ್ದರು. ಶಂಕಿತ ಉಗ್ರ ವಿಧ್ವಂಸಕರ ಜೊತೆ ಸೇರಿ ಹಲವುಕಡೆ ಕುಕೃತ್ಯ ನಡೆಸುವ ಸಾಧ್ಯತೆ ಇತ್ತು. ಇದೆ ಕಾರಣಕ್ಕೆ ತೀರ್ಥಹಳ್ಳಿಯ ಶಾರಿಕ್ ಪೊಲೀಸರ ಪಾಲಿಗೆ ಮೋಸ್ಟ್ ವಾಂಟೆಡ್ ಆಗಿದ್ದ. ಅಲ್ಲೆಲ್ಲಾ ತಲೆಮರೆಸಿಕೊಂಡು ತಿರುಗುತ್ತಿದ್ದ. ಹುಬ್ಬಳ್ಳಿಯ ರೈಲ್ವೆ ಉದ್ಯೋಗಿಯೊಬ್ಬರ ಆಧಾರ್ ಕಾರ್ಡ್ಗೆ ತನ್ನ ಫೋಟೋ ಹಾಕಿಕೊಂಡು ಮೈಸೂರಿನಲ್ಲಿ ಅದೇ ವಿಳಾಸ ನೀಡಿ ರೂಮ್ ಬಾಡಿಗೆ ತೆಗೆದುಕೊಂಡಿದ್ದ. ಈತ ಇದೀಗ ಮಂಗಳೂರಲ್ಲಿ ಶನಿವಾರ ನಡೆದ ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಮತ್ತೆ ಸುದ್ದಿಯಾಗಿದ್ದಾನೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಭಾರಿ ಆತಂಕ ಹುಟ್ಟು ಹಾಕಿದ ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದ ಬಗ್ಗೆ ಇಂಚಿಚ್ಚು ಮಾಹಿತಿ ಕಲೆ ಹಾಕಲು ಎನ್ಐಎ ಮುಂದಾಗಿದೆ.












Click it and Unblock the Notifications