ನಡು ರಸ್ತೆಯಲ್ಲಿ ಸಿಲುಕಿಕೊಂಡ ಲಾರಿಗಳು: ಹಿರಿಯೂರು- ಶಿವಮೊಗ್ಗ ರಸ್ತೆ ಸಂಪರ್ಕ ಕಡಿತ
ಚಿತ್ರದುರ್ಗ, ಸೆಪ್ಟೆಂಬರ್, 07: ಹಿರಿಯೂರು ತಾಲೂಕಿನ ಭರಮಗಿರಿ ಬೈಪಾಸ್ ಬಳಿ ಲಾರಿಗಳು ನಡು ರಸ್ತೆಯಲ್ಲಿ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಹಿರಿಯೂರು- ಶಿವಮೊಗ್ಗ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ವಾಹನ ಸವಾರರು ಪರದಾಡಿದ್ದಾರೆ.
ಈ ಘಟನೆ ಹಿರಿಯೂರು ತಾಲೂಕಿನ ಭರಮಗಿರಿ ಬೈಪಾಸ್ ಬಳಿ ತಡರಾತ್ರಿ ನಡೆದಿದೆ. ರಸ್ತೆಯಲ್ಲಿ ಸಿಲುಕಿಕೊಂಡ ಲಾರಿಗಳನ್ನು ತೆರವುಗೊಳಿಸಲು ಅಲ್ಲಿನ ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ರಸ್ತೆ ಸಂಪರ್ಕ ಕಡಿತದಿಂದ ಹಿರಿಯೂರಿನಿಂದ ಹೊಸದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ತಲುಪಲು ಚಿತ್ರದುರ್ಗ ಮಾರ್ಗದ ಮೂಲಕ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಭಾರಿ ಮಳೆ ಸುರಿದಿದ್ದು, ಸಂಪೂರ್ಣ ರಸ್ತೆ ಜಲಾವೃತವಾಗಿದ್ದರಿಂದ ಸರಕು ತುಂಬಿಕೊಂಡು ಹೋಗುವಾಗ ಲಾರಿಯ ಟೈರ್ಗಳು ನಡು ರಸ್ತೆಯಲ್ಲಿ ಅರ್ಧಕ್ಕೆ ಸಿಲುಕಿಕೊಂಡಿವೆ. ಲಾರಿ ಗಾಲಿಗಳು ನಡು ರಸ್ತೆಯಲ್ಲಿ ಸಿಲುಕಿಹಾಕಿಕೊಂಡಿದೆ. ಹಾಗೂ ಎದುರಿಗೆ ಬರುತ್ತಿದ್ದ ಲಾರಿಗಳು ಸಹ ಸಿಲುಕಿಕೊಂಡಿದ್ದು, ಸಂಪೂರ್ಣ ರಸ್ತೆ ಜಖಂಗೊಂಡಿದೆ.
ಮತ್ತೊಂದೆಡೆ ವಾಣಿ ವಿಲಾಸ ಸಾಗರ ಜಲಾಶಯದ ಕೋಡಿ ಬಿದ್ದಿದ್ದು, ಸುಮಾರು 10 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ಹೆಚ್ಚುವರಿ ನೀರು ಹೊರ ಹೋಗುತ್ತಿದೆ. ಯಾವುದೇ ಅನಾಹುತಗಳು ಸಂಭವಿಸಬಾರದೆಂದು ರಸ್ತೆಯನ್ನು ಬಂದ್ ಮಾಡಲಾಗಿದೆ. ಎರಡು ಕಡೆಯಿಂದಲೂ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಹಿರಿಯೂರನಿಂದ ಹೊಸದುರ್ಗದ ಕಡೆಗೆ ಹೋಗುವ ಪ್ರಯಾಣಿಕರು ಹಾಗೂ ಶಿವಮೊಗ್ಗ, ಹೊಸದುರ್ಗದಿಂದ ಹಿರಿಯೂರು, ಬೆಂಗಳೂರಿನ ಕಡೆ ತೆರಳುವ ಪ್ರಯಾಣಿಕರು ಚಿತ್ರದುರ್ಗದ ಮೂಲಕವೇ ಬರಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ.

ಹಿರಿಯೂರು ತಾಲೂಕಿನ ವಾಣಿ ವಿಲಾಸಪುರದ ಕಡೆಗೆ ಹೋಗುವ ಕಾರು, ಬಸ್, ಬೈಕ್ ಇತರೆ ವಾಹನಗಳು ಭರಮಗಿ ಕೆರೆ ಏರಿ ಮೂಲಕವೇ ಸಾಗಬೇಕು. ಇದೀಗ ಎಚ್ಚತ್ತುಕೊಂಡ ಸ್ಥಳೀಯ ಅಧಿಕಾರಿಗಳು ಬಿರು ಬಿಟ್ಟ ಕೆರೆ ಏರಿಯನ್ನು ದುರಸ್ಥಿ ಮಾಡಲು ಮುಂದಾಗಿದ್ದಾರೆ.
ವಿವಿ ಸಾಗರ ಜಲಾಶಯದಲ್ಲಿ ನೀರಿನ ಮಟ್ಟ
ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯ 1934ರ ಬಳಿಕ ಇದೀಗ ಮತ್ತೆ ಭರ್ತಿ ಆಗಿ ಕೋಡಿ ಬಿದ್ದಿತ್ತು. ಇಂದಿನ ವರದಿಯಲ್ಲಿ ಜಲಾಶಯಕ್ಕೆ 11,112 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 134 ಅಡಿ ತಲುಪಿದೆ. ಇನ್ನು ಜಲಾಶಯದಿಂದ 10,957 ಕ್ಯೂಸೆಕ್ ಪ್ರಮಾಣದಲ್ಲಿ ನೀರು ಹೊರ ಬಿಡಲಾಗಿದೆ. ಇತ್ತ ವೇದಾವತಿ ನದಿ ಕೂಡ ಮೈದುಂಬಿ ಹರಿಯುತ್ತಿದೆ. ನದಿ ಪಾತ್ರಗಳಲ್ಲಿರುವ ಜಮೀನುಗಳು ಜಲಾವೃತ ಆಗಿದ್ದು, ಬೆಳೆಗಳನ್ನು ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ.
ಉಕ್ಕಿ ಹರಿಯುತ್ತಿರುವ ವೇದಾವತಿ ನದಿ
ಹಿರಿಯೂರಿನಲ್ಲಿ 73.2 ಮಿಲಿ ಮೀಟರ್ ಮಳೆ ಸುರಿದಿದ್ದು, ಈಶ್ವರಗೆರೆ 60.2ಮಿಲಿ ಮೀಟರ್, ಬಬ್ಬೂರಿನಲ್ಲಿ 49 ಮಿಲಿ ಮೀಟರ್, ಸೂಗೂರು 28.4 ಮಿಲಿ ಮೀಟರ್, ಇಕ್ಕನೂರಿನಲ್ಲಿ 22.4 ಮಿಲಿ ಮೀಟರ್ ಮಳೆ ಸುರಿದಿದ್ದು, ಇದರಲ್ಲಿ ಹಿರಿಯೂರು ನಗರದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿದಿದೆ. ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯ ಕೋಡಿ ಬಿದ್ದಿದ್ದು, ವೇದಾವತಿ ನದಿ ಮೈದುಂಬಿ ಹರಿಯುತ್ತಿದೆ. ವೇದಾವತಿ ನದಿ ಮೈದುಂಬಿ ಹರಿಯುತ್ತಿರುವ ಸುದ್ದಿ ತಿಳಿದ ತಕ್ಷಣವೇ, ನಗರದ ಅನೇಕ ಕಡೆಗಳಿಂದ ನಾಗರೀಕರು ನದಿಯನ್ನು ನೋಡಲು ಕಿಕ್ಕಿರಿದು ಜನ ಸೇರುತ್ತಿದ್ದರೆ.
ಹರಿಯುತ್ತಿರುವ ವೇದಾವತಿ ನದಿಯನ್ನು ನೋಡಲು ಜನಸಾಗವೇ ಹರಿದು ಬಂದಿದೆ. ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ. ಪೊಲೀಸ್ ವಾಹನ ಸೈರನ್ ಹಾಕಿಕೊಂಡು ಹೋಡಾಡುವ ಮೂಲಕ ನಾಗರಿಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಹಾಗೂ ಅಧಿಕಾರಿಗಳು ನದಿ ತೀರದಲ್ಲಿದ್ದ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈಗಾಗಲೇ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾದವರಿಗೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಹಾಗೂ ತಾಲೂಕಿನ ಹಲವೆಡೆ ನಿರಾಶ್ರಿತ ಕೇಂದ್ರಗಳನ್ನು ಸಹ ತೆರೆದಿದ್ದಾರೆ.












Click it and Unblock the Notifications