ಗ್ರೀನ್ ಝೋನ್ ನಲ್ಲಿ ಚಿತ್ರದುರ್ಗ; ಗರಿಗೆದರಿದೆ ವ್ಯಾಪಾರ ವಹಿವಾಟು
ಚಿತ್ರದುರ್ಗ, ಏಪ್ರಿಲ್ 29: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ತಿಂಗಳಿನಿಂದ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗದ ಹಿನ್ನೆಲೆಯಲ್ಲಿ ಅಧಿಕೃತವಾಗಿ ಗ್ರೀನ್ ಝೋನ್ ಪಟ್ಟಿಯಲ್ಲಿ ಚಿತ್ರದುರ್ಗ ಜಿಲ್ಲೆ ಸೇರಿಕೊಂಡಿದೆ. ಹಸಿರು ವಲಯದ ಕೋಟೆ ನಾಡಿನಲ್ಲಿ ಲಾಕ್ ಡೌನ್ ಸಡಿಲಿಕೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಮುಚ್ಚಿದ್ದ ಅಂಗಡಿ ಮುಂಗಟ್ಟುಗಳು ತೆರೆದಿವೆ.
ಬಂಗಾರ, ಬಟ್ಟೆ, ಫುಟ್ ವೇರ್ ಅಂಗಡಿಗಳಿಗೆ ಮಾತ್ರ ಸದ್ಯಕ್ಕೆ ನಿರ್ಬಂಧ ಹೇರಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಹೋಟೆಲ್ ಗಳು, ಜ್ಯೂಸ್ ಸೆಂಟರ್ ಗಳಲ್ಲಿ ಪಾರ್ಸಲ್ ಗೆ ಅವಕಾಶ ಕೊಡಲಾಗಿದೆ. ರೈತರು ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟನ್ನು ಸುಗಮವಾಗಿ ನಡೆಸಬಹುದಾಗಿದೆ. ರೈತರಿಗೆ ಬೇಕಾಗುವ ಕೃಷಿ ವಹಿವಾಟು ಸೇರಿದಂತೆ ಇತರೆ ಅಂಗಡಿಗಳ ಮೇಲಿನ ನಿರ್ಬಂಧ ಸಡಿಲಿಕೆಯಾಗಿದೆ.
ಇಷ್ಟು ದಿನ ಲಾಕ್ ಡೌನ್ ನಿಂದ ಬಿಕೋ ಎನ್ನುತ್ತಿದ್ದ ರಸ್ತೆಗಳಲ್ಲಿ ಜನರ ಓಡಾಟ ಆರಂಭವಾಗಿದೆ. ವಾಹನ ಸಂಚಾರವೂ ಸಾಗಿದೆ. ಈಗಾಗಲೇ ಅಗತ್ಯ ವಸ್ತುಗಳನ್ನು ಕೊಳ್ಳಲು ಹಳ್ಳಿಗಳಿಂದ ನಗರಕ್ಕೆ ಜನರು ಬರುತ್ತಿದ್ದಾರೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಿಲ್ಲಾಡಳಿತ ಸೂಚನೆ ನೀಡಿದೆ. ಬೈಕ್ ನಲ್ಲಿ ಒಬ್ಬರು, ಕಾರಲ್ಲಿ ಇಬ್ಬರು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಚೆಕ್ ಪೋಸ್ಟ್ ಗಳಲ್ಲಿ ಎಂದಿನಂತೆ ತಪಾಸಣೆ ಕಾರ್ಯ ಮುಂದುವರಿದಿದೆ.

ಜಿಲ್ಲೆಯಲ್ಲಿ ಅಗತ್ಯವಿರುವ ಎಲ್ಲಾ ಚಟುವಟಿಕೆಗಳಿಗೂ ಶರತ್ತುಬದ್ಧವಾಗಿ ಈಗಾಗಲೇ ವಿನಾಯತಿ ನೀಡಲಾಗಿದೆ. ಮೇ.3 ತನಕ ಲಾಕ್ ಡೌನ್ ಜಾರಿ ಕಾರಣ ಸಾಮಾಜಿಕ ಅಂತರ ಪಾಲನೆ ಅಗತ್ಯವಾಗಿದೆ.












Click it and Unblock the Notifications