ಬಿಜೆಪಿಯ 25 ಸಂಸದರಿಗೆ ಮೋದಿ ಬಳಿ ದುಡ್ಡು ಕೇಳುವ ಧೈರ್ಯವಿಲ್ಲ: ಸಲೀಂ ಅಹ್ಮದ್ ವ್ಯಂಗ್ಯ
ಚಿತ್ರದುರ್ಗ, ಸೆಪ್ಟೆಂಬರ್ 1: "ರಾಜ್ಯದಲ್ಲಿ 25 ಜನ ಬಿಜೆಪಿ ಸಂಸದರಿದ್ದಾರೆ. ಆದರೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಕೇಳುವ ಧೈರ್ಯವಿಲ್ಲ," ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಬಿಜೆಪಿ ಸಂಸದರ ವಿರುದ್ಧ ಗುಡುಗಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಗೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಅವರು, "ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಸ್ಥಳೀಯ ಎಂಎಲ್ಸಿ ಚುನಾವಣೆ ಬಗ್ಗೆ ತಯಾರಿ ಮಾಡಿಕೊಳ್ಳಲು ಪಕ್ಷ ಸಂಘಟನೆಯಲ್ಲಿ ತೊಡೆಗಿದ್ದೇವೆ. ಜಿಲ್ಲೆಯ ಸಮಸ್ಯೆಗಳು ಹಾಗೂ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಈ ಕಾರ್ಯಕಾರಿ ಸಭೆ ಹಮ್ಮಿಕೊಂಡು ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು. ಹುಬ್ಬಳ್ಳಿ- ಧಾರವಾಡ, ಕಲಬುರಗಿ, ಬೆಳಗಾವಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಸಿದ್ಧಾಂತ ತಿಳಿಸಲಾಗುವುದು
"ಬಿಜೆಪಿ ಸರ್ಕಾರದ ವಿರುದ್ಧ ಬೇಸತ್ತಿರುವ ಜನರು, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ. ಅದೇ ರೀತಿ ಪಕ್ಷ ಸಂಘಟನೆ ನಿಟ್ಟಿನಲ್ಲಿ ಮುಂದಿನ ಮೂರು ತಿಂಗಳ ಒಳಗಡೆ ಪಂಚಾಯತಿ ಚುನಾವಣೆ ಬರಲಿದ್ದು, ವಾರ್ಡ್ ಕಮಿಟಿಗಳನ್ನು ಈ ತಿಂಗಳ ಒಳಗಾಗಿ ಸಂಘಟನೆ ಮಾಡಿ ಮುಂದಿನ ಎರಡು ತಿಂಗಳಲ್ಲಿ ಬೂತ್ ಕಮಿಟಿ ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಿ ಮುಂದಿನ ಜಿ.ಪಂ ಹಾಗೂ ತಾ.ಪಂ ಚುನಾವಣೆಗೆ ಪಕ್ಷ ಸಂಘಟನೆಗೆ ಒತ್ತು ನೀಡಿ ಪದಾಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಜಿಲ್ಲೆ ಹಾಗೂ ಕ್ಷೇತ್ರದ ಮೂಲಕ ತಿಳಿಸಲಾಗುವುದು," ಎಂದು ಹೇಳಿದರು.

ಜನಾಶೀರ್ವಾದ ಯಾತ್ರೆ ಯಾಕೆ ಮಾಡಿದ್ದಾರೋ ಗೊತ್ತಿಲ್ಲ
"ರಾಜ್ಯದ ನಾಲ್ಕು ಜನ ಕೇಂದ್ರ ಮಂತ್ರಿಗಳು ಯಾವ ಪುರುಷಾರ್ಥಕ್ಕೆ ಜನಾಶೀರ್ವಾದ ಮಾಡಿದ್ದಾರೋ ಗೊತ್ತಿಲ್ಲ. ಈ ಬದಲಿಗೆ ಅವರು ಜನರ ಕ್ಷಮೆ ಯಾತ್ರೆ ಮಾಡಬೇಕಿತ್ತು. ಏಕೆಂದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿರುವ ಬಗ್ಗೆ ರಾಜ್ಯ ಜನತೆಯ ಕ್ಷಮೆ ಕೇಳುವ ಯಾತ್ರೆ ಕೈಗೊಳ್ಳಬೇಕಾಗಿತ್ತು," ಎಂದರು.
"ರಾಜ್ಯದ ಸಚಿವರು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿದ್ದ ಹಣ, ತೆರಿಗೆ ಹಣ ತೆಗೆದುಕೊಂಡು ಬಂದಿದ್ದರೆ ಜನರು ಆಶೀರ್ವಾದ ಮಾಡುತ್ತಿದ್ದರು. 2019-20 ರಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ಹಣ 35 ಸಾವಿರ ಕೋಟಿ ರೂ. ಬರಬೇಕಿತ್ತು. ಆದರೆ 1800 ಕೋಟಿ ರೂ. ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ," ಎಂದು ತಿಳಿಸಿದರು.

ಕೊರೊನಾ ಹೆಚ್ಚಾದರೆ ಸರ್ಕಾರವೇ ನೇರ ಹೊಣೆ
"ರಾಜ್ಯಕ್ಕೆ ಹಣ ತರಲು ಬಿಜೆಪಿಯ ಕೇಂದ್ರ ಮಂತ್ರಿಗಳು, ಸಂಸದರು ವಿಫಲರಾಗಿದ್ದು, ಇವರಿಗೆ ಪ್ರಧಾನಿ ಮೋದಿ ಹತ್ತಿರ ಹೋಗಿ ಹಣ ಕೇಳುವ ಧೈರ್ಯ ಇಲ್ಲ. ರಾಜ್ಯದಲ್ಲಿ ಇಲಿಗಳಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಯಾದಗಿರಿಯಲ್ಲಿ ಬಿಜೆಪಿ ಮುಖಂಡರು ಕೇಂದ್ರ ಮಂತ್ರಿಯನ್ನು ನಾಡ ಬಂದೂಕು ಹಾರಿಸಿ ಸ್ವಾಗತಿಸಿದ್ದಾರೆ, ಅವರ ಮೇಲೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಮೂರು ಜನ ಅಮಾಯಕ ಪೊಲೀಸರನ್ನು ಅಮಾನತು ಮಾಡಲಾಗಿದೆ. ಇಂತಹ ಸಂಸ್ಕೃತಿ ರಾಜ್ಯಕ್ಕೆ ಬರಬಾರದು," ಎಂದರು.
"ಕಳೆದ ಆ.20 ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ರಾಜೀವ್ ಗಾಂಧಿ ಜನ್ಮದಿನಾಚರಣೆ ಮಾಡಲು ಕೊರೊನಾ ನೆಪ ಹೇಳಿ ಸರ್ಕಾರ ಅನುಮತಿ ನೀಡಲಿಲ್ಲ. ಆದರೆ ಕೇಂದ್ರ ಮಂತ್ರಿಗಳಿಗೆ ಜನಾಶೀರ್ವಾದ ಯಾತ್ರೆ ಮಾಡಲು ಅನುಮತಿ ನೀಡಿದ್ದಾರೆ. ಕೊರೊನಾ ಹೆಚ್ಚಾದರೆ ಸರ್ಕಾರ ಹಾಗೂ ಕೇಂದ್ರ ಸಚಿವರೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು. ಸರ್ಕಾರ ಕೊರೊನಾದಿಂದ ಮೂವತ್ತು ಸಾವಿರ ಜನರು ಮರಣ ಹೊಂದಿದ್ದಾರೆಂದು ಲೆಕ್ಕ ಕೊಟ್ಟಿದೆ. ಆದರೆ ನಮ್ಮ ಲೆಕ್ಕದ ಪ್ರಕಾರ ಮೂರು ಲಕ್ಷ ಜನ ಸತ್ತಿದ್ದಾರೆ," ಎಂದು ಆರೋಪಿಸಿದರು.

ಯಡಿಯೂರಪ್ಪರದು ಕಣ್ಣೀರ ಕಥೆ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, "ಅವರದು ಕಣ್ಣೀರ ಕಥೆಯಾಗಿದೆ. ಯಾಕೆ ರಾಜೀನಾಮೆ ನೀಡಿದರು ಎಂದು ಇದುವರೆಗೂ ಬಿಜೆಪಿ ಸ್ಪಷ್ಟನೆ ನೀಡಿಲ್ಲ ಎಂದರು. ಇನ್ನು ಕಾಂಗ್ರೆಸ್ ಪಕ್ಷ ಬಿಎಸ್ವೈ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿತ್ತು, ಅದಕ್ಕೆ ರಾಜೀನಾಮೆ ನೀಡಿರಬಹುದು," ಎಂದರು.
"ನರೇಂದ್ರ ಮೋದಿ ಪ್ರಧಾನಿ ಆಗುವುದಕ್ಕಿಂತ ಮುಂಚೆ ಸ್ವರ್ಗ ಇಳಿಸ್ತೀವಿ ಅಂತ ಹೇಳಿದ್ದರು, ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಜನರಿಗೆ ಈಗ ನರಕ ತೋರಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆ ನಡೆದರೆ ಕಾಂಗ್ರೆಸ್ಗೆ ಜನ ಆಶೀರ್ವಾದ ಮಾಡುತ್ತಾರೆ. ಕೇಂದ್ರ ಹಾಗೂ ರಾಜ್ಯದಲ್ಲಿರುವ ಸರ್ಕಾರ ಭಾರತೀಯ ಜನತಾ ಪಾರ್ಟಿ ಅಲ್ಲ, ಬದಲಿಗೆ ಭ್ರಷ್ಟಾಚಾರದ ಪಾರ್ಟಿ," ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷ ವಾಜಪೇಯಿ ಬಗ್ಗೆ ಟೀಕೆ ಮಾಡಿದೆಯಾ
ಇನ್ನು ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಬಗ್ಗೆ ಸಿ.ಟಿ. ರವಿ ಹೇಳಿಕೆಗೆ ತಿರುಗೇಟು ನೀಡಿದ ಸಲೀಂ ಅಹ್ಮದ್, "ರವಿ ಒಬ್ಬ
ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಸಿ.ಟಿ. ರವಿ ನೆನ್ನೆ ಮೊನ್ನೆ ರಾಜಕೀಯದಲ್ಲಿ ಕಣ್ಣು ಬಿಟ್ಟವರು. ಸ್ವಾತಂತ್ರ್ಯ ಹೋರಾಟಗಾರರಾದ ನೆಹರು, ರಾಜೀವ್ ಗಾಂಧಿ ಮತ್ತು ಇಂದಿರಾ ಗಾಂಧಿ ಬಗ್ಗೆ ಮಾತಾಡಲು ಇವರಿಗೆ ಏನು ಗೊತ್ತಿದೆ ಎಂದು ಪ್ರಶ್ನಿಸಿದರು. ಯಾವತ್ತೂ ಕಾಂಗ್ರೆಸ್ ಪಕ್ಷ ವಾಜಪೇಯಿ ಬಗ್ಗೆ ಟೀಕೆ ಮಾಡಿದೆಯಾ?," ಎಂದು ಪ್ರಶ್ನಿಸಿದರು.
"ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವ ಮುಂಚೆ ದೇಶದಲ್ಲಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಕೊಡುತ್ತೇವೆ ಅಂದರು. ಈಗ ಏಳು ವರ್ಷ ಕಳೆದರೂ ಉದ್ಯೋಗ ಕೊಟ್ಟಿದಾರಾ ಸಿ.ಟಿ. ರವಿಯವರೇ?," ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
Recommended Video

ಉದ್ಯೋಗ ಕೊಡಿ ಅಂದರೆ ಪಕೋಡ ಮಾರಿ ಅಂತಾರೆ
"ಮೋದಿಯವರೆ ಯುವಕರಿಗೆ ಉದ್ಯೋಗ ಕೊಡಿ ಅಂದರೆ ಪಕೋಡ ಮಾರಿ ಅಂತ ಹೇಳುತ್ತಿದ್ದಾರೆ. ಮೋದಿಯವರ ಮಾತಾದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಲ್ಲ, ಸಬ್ ಕಾ ವಿನಾಶ್ ಎಂಬ ಮಾತಾಗಿದೆ. ರಾಜ್ಯದಲ್ಲಿ ಭ್ರಷ್ಟರಿಗೆ ಝೀರೋ ಟ್ರಾಫಿಕ್ ಮೂಲಕ ಸ್ವಾಗತಿಸಿ ಮಂತ್ರಿ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಿ ಹೋಗಿದೆ. ಜನರ ಮತಗಳಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಬದಲಿಗೆ
ಅಪರೇಷನ್ ಕಮಲದ ಮೂಲಕ ನಮ್ಮ ಪಕ್ಕದ ಶಾಸಕರನ್ನು ಖರೀದಿ ಮಾಡಿ ಸರ್ಕಾರ ನಡೆಸುತ್ತಿದ್ದಾರೆ," ಎಂದು ವಾಗ್ದಾಳಿ ನಡೆಸಿದರು.
"ಮುಂದೆ ನಡೆಯಲಿರುವ ಸಿಂದಗಿ, ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಲಿದೆ. ಈಗ ರಾಜ್ಯದಲ್ಲಿ
ಸಿಎಂ ಬದಲಾವಣೆ ಆಗಿರಬಹುದು, ಆದರೆ ಬಹಳ ದಿನ ಸರ್ಕಾರ ಇರುವುದಿಲ್ಲ. ಸಿಎಂ ಬೊಮ್ಮಾಯಿ ಕೆಲವು ಮುಖಂಡರ ಹಿಡಿತದಲ್ಲಿದ್ದು ಆಡಳಿತ ನಡೆಸುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಜಾತಿವಾರು ಜನಗಣತಿ ಸಮೀಕ್ಷೆ ನಡೆಸಿದ್ದು, ಸಮೀಕ್ಷೆ ವರದಿ ಇನ್ನೂ ಬಿಡುಗಡೆಯಾಗಿಲ್ಲ. ಇದಕ್ಕೆ ಸ್ಪಷ್ಟನೆ ಕೇಳಿದರೆ ಬಿಜೆಪಿಯವರು ಇದರಿಂದ ನುಣುಚಿಕೊಳ್ಳುತ್ತಿದ್ದಾರೆ," ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದರು.












Click it and Unblock the Notifications