ಚಿತ್ರದುರ್ಗದಲ್ಲಿ ಬಾಗಿಲು ತೆರೆಯಲಿದೆ ಖಾಸಗಿ ಕೃಷಿ ಮಾರುಕಟ್ಟೆ
ಚಿತ್ರದುರ್ಗ, ಫೆಬ್ರವರಿ 23: ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆ ಜಾರಿಗೆ ತಂದಿದೆ. ಕಾಯ್ದೆ ವಿರೋಧಿಸಿ ನವದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಖಾಸಗಿ ಕೃಷಿ ಮಾರುಕಟ್ಟೆ ನಿರ್ಮಾಣ ಮಾಡಲು ಒಪ್ಪಿಗೆ ನೀಡಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹುಚ್ಚವನಹಳ್ಳಿ ಬಳಿ 106 ಎಕರೆ ಪ್ರದೇಶದಲ್ಲಿ ಖಾಸಗಿ ಮಾರುಕಟ್ಟೆ ನಿರ್ಮಾಣವಾಗುತ್ತಿದೆ. ಅಕ್ಷಯ ಫುಡ್ ಪಾರ್ಕ್ ಲಿಮಿಟೆಡ್ ಎಂಬ ಕಂಪನಿಗೆ ಮಾರುಕಟ್ಟೆ ಆರಂಭಕ್ಕೆ ಪರವಾನಿಗೆ ದೊರೆತ್ತಿದ್ದು, ಏಪ್ರಿಲ್ ತಿಂಗಳಲ್ಲಿ ಮಾರುಕಟ್ಟೆ ಕಾರ್ಯಾರಂಭ ಮಾಡಲಿದೆ.
ಎಪಿಎಂಸಿ ಕಾಯ್ದೆ ತಿದ್ದುಪಡಿ ಜಾರಿಗೆ ಬಂದ ನಂತರ ಅಸ್ತಿತ್ವಕ್ಕೆ ಬರುವ ರಾಜ್ಯದ ಮೊದಲ ಖಾಸಗಿ ಕೃಷಿ ಮಾರುಕಟ್ಟೆ ಇದಾಗಿದೆ. ಅಕ್ಷಯ ಫುಡ್ ಪಾರ್ಕ್ ಸಂಸ್ಥೆ ಅಕ್ಟೋಬರ್ ತಿಂಗಳಲ್ಲಿ ಲೈಸೆನ್ಸ್ ಪಡೆದಿದ್ದು, ಆಹಾರ ಧಾನ್ಯ, ಹಣ್ಣು, ತರಕಾರಿ ಹಾಗೂ ಕೃಷಿ ಉತ್ಪನ್ನಗಳ ವರ್ಗೀಕರಣ, ಧಾನ್ಯ ಸಂಗ್ರಹಣೆ ಮಾಡಲು ಗೋದಾಮು, ಹಣ್ಣು-ತರಕಾರಿ ಸಂಗ್ರಹಣೆಗೆ ಕೋಲ್ಡ್ ಸ್ಟೋರೇಜ್, ಸೇರಿದಂತೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕೂಡ ಇಲ್ಲಿದೆ.
ಅಕ್ಷಯ ಫುಡ್ ಪಾರ್ಕ್ ಸಂಸ್ಥೆ ರಾಜ್ಯ ಸರ್ಕಾರ ಅನುಸೂಚಿಸಿರುವ 92 ಉತ್ಪನ್ನಗಳ ವಹಿವಾಟಿಗೆ ಪರವಾನಿಗೆ ಪಡೆದಿದೆ. 106 ಎಕರೆ ಪ್ರದೇಶದಲ್ಲಿ ಖಾಸಗಿ ಮಾರುಕಟ್ಟೆ ಸ್ಥಾಪನೆಯಾಗಲಿದೆ. ರೈತರು ಇಲ್ಲಿ ಉತ್ಪನ್ನಗಳನ್ನು ಸಂಗ್ರಹ ಮಾಡಿ ಉತ್ತಮ ದರ ಸಿಕ್ಕಾಗ ಮಾರಾಟ ಮಾಡಲು ಸಹ ಅವಕಾಶವಿದೆ.

ಈ ಪರಿಕಲ್ಪನೆ ಹೊಸದು
ಅಕ್ಷಯ ಫುಡ್ ಪಾರ್ಕ್ ವ್ಯವಸ್ಥಾಪಕ ನಿರ್ದೇಶಕ ಎಂ. ನಾರಾಯಣ ಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಕರ್ನಾಟಕಕ್ಕೆ ಪರ್ಯಾಯ ಕೃಷಿ ಮಾರುಕಟ್ಟೆ ಪರಿಕಲ್ಪನೆ ಹೊಸದಾಗಿದೆ. ಈಗಾಗಲೇ ಖರೀದಿದಾರರನ್ನು ಆಹ್ವಾನಿಸುವ ಪ್ರಕ್ರಿಯೆ ಆರಂಭಗೊಂಡಿದೆ. ರಾಷ್ಟ್ರೀಯ ಕೃಷಿ ಮಾರುಕಟ್ಟೆ ( ಇ- ನಾಮ್) ವ್ಯವಸ್ಥೆಯ ಅಂತರ್ಜಾಲದ ಮುಖಾಂತರ ಕೃಷಿ ಉತ್ಪನ್ನಗಳ ಮಾರಾಟ ನಡೆಯಲಿದೆ" ಎಂದರು.

92 ಉತ್ಪನ್ನಗಳ ವಹಿವಾಟು
"ಮಾಂಸ, ಮೀನು, ಮೊಟ್ಟೆ ಬಿಟ್ಟು ಉಳಿದ 92 ಕೃಷಿ ಉತ್ಪನ್ನಗಳ ಮಾರಾಟ, ಸಂಗ್ರಹಕ್ಕೆ ಅವಕಾಶ ಕಲ್ಪಿಸಲಾಗಿದೆ. ಪರ್ಯಾಯ ಕೃಷಿ ಮಾರುಕಟ್ಟೆ ಯೋಜನೆ ಆರಂಭವಾದ ಬಳಿಕ ಚಿತ್ರದುರ್ಗ ಜಿಲ್ಲೆಯ ರೈತರಿಗೆ ವಿಶೇಷ ಅನುಕೂಲವಾಗಲಿದೆ" ಎಂದು ಎಂ. ನಾರಾಯಣ ಸ್ವಾಮಿ ಹೇಳಿದ್ದಾರೆ.

ನಾಲ್ಕು ಫುಡ್ ಪಾರ್ಕ್
2010ರಿಂದ ಇಂತಹ ವ್ಯವಸ್ಥೆ ಆರಂಭಿಸಲು ಸರ್ಕಾರಕ್ಕೆ ಮನವಿ ಮಾಡಲಾಗುತ್ತಿತ್ತು. ರಾಜ್ಯದಲ್ಲಿ ನಾಲ್ಕು ಫುಡ್ ಪಾರ್ಕ್ ಅಸ್ತಿತ್ವಕ್ಕೆ ಬಂದವು. ಇದರಲ್ಲಿ ಹಿರಿಯೂರು ತಾಲ್ಲೂಕಿನ ಹುಚ್ಚವ್ವನಹಳ್ಳಿ ಅಕ್ಷಯ ಫುಡ್ ಪಾರ್ಕ್ ಒಂದಾಗಿದೆ. ಈ ಮಾರುಕಟ್ಟೆಯ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಸಹ ಸಂಸ್ಥೆಯೊಂದಕ್ಕೆ ಜವಾಬ್ದಾರಿ ನೀಡಲಾಗಿದೆ.

ಸಚಿವರಿಗೆ ದೂರು
2010ರಲ್ಲಿ ಆರಂಭವಾದ ಸಂಸ್ಥೆ ಸರ್ಕಾರದ ಷರತ್ತುಗಳನ್ನು ಪಾಲಿಸುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ. ಇಂದಿನವರೆಗೂ ಸಂಸ್ಥೆಯಿಂದ ರೈತರು ಮತ್ತು ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಿಲ್ಲ ಎಂದು ಕೃಷಿ ಮತ್ತು ಕೈಗಾರಿಕಾ ಸಚಿವರಿಗೆ ದೂರು ಕೊಡಲಾಗಿದೆ.











Click it and Unblock the Notifications