ಹಿರಿಯೂರು; ಹಿರಿಯ ಸಾಹಿತಿ ಭೀಮಯ್ಯ ವಿಧಿವಶ
ಚಿತ್ರದುರ್ಗ, ಮೇ 31; ಕನ್ನಡ ಕಿಂಕರ, ಭೀಮಯ್ಯ ಮೇಷ್ಟ್ರು ಎಂದೇ ಪ್ರಸಿದ್ಧಿ ಪಡೆದಿದ್ದ ಹಿರಿಯ ಸಾಹಿತಿ ಭೀಮಯ್ಯ (96) ವಿಧಿವಶರಾದರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇದರಿಂದ ತುಂಬಲಾರದ ನಷ್ಟವಾಗಿದ್ದು, ಸಾಹಿತ್ಯ ಕ್ಷೇತ್ರದ ಹಿರಿಯ ಕೊಂಡಿಯೊಂದು ಕಳಚಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಾರೇನಹಳ್ಳಿ ಗ್ರಾಮದ ಕೃಷಿ ಕುಟುಂಬದಲ್ಲಿ 1925ರಲ್ಲಿ ಭೀಮಯ್ಯ ಜನಿಸಿದ್ದರು. ಇವರ ತಾತ ಸಣ್ಣಲಿಂಗೇಗೌಡ ಪ್ರಭಾವಕ್ಕೆ ಒಳಗಾಗಿ ಆಧ್ಯಾತ್ಮ ಮತ್ತು ತತ್ವ ಸಾಧನೆಯನ್ನೇ ಧ್ಯಾನಿಸಿ ಸಾಧಕರಾದರು. ರಾಮಾಯಣ, ಗದುಗಿನ ಭಾರತ, ದೇವಿ ಮಹಾತ್ಮೆ ಇವರ ಪಾಲಿಗೆ ಆಧ್ಯಾತ್ಮ ಪಠ್ಯಗಳಾಗಿದ್ದವು.
ಭೀಮಯ್ಯ 1950ರ ಕಾಲದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿ ಪಡೆದಿದ್ದರು. ಸರ್ಕಾರಿ ಕೆಲಸಕ್ಕೆ ಸೇರದೆ ಹಳ್ಳಿಗೆ ಬಂದು ನೆಲೆಸಿದ್ದರು. ನೈತಿಕ ಮೌಲ್ಯಗಳ ಬಗ್ಗೆ ಮಾರ್ಗದರ್ಶಕ "ಮೇಷ್ಟ್ರು" ಆಗಿದ್ದರಿಂದ ಎಲ್ಲರ ಬಾಯಲ್ಲೂ 'ಭೀಮಯ್ಯ ಮೇಷ್ಟ್ರು' ಎಂದು ಪ್ರಸಿದ್ಧಿಯಾದರು.

'ಆನಂದ ಮಠ' ಎಂಬ ಸಂಘವನ್ನು ಸ್ಥಾಪಿಸಿದ್ದರು. ನಾಟಕ, ಕಾವ್ಯ, ವಚನಗಳಲ್ಲಿ ನೆಮ್ಮದಿ ಕಂಡುಕೊಂಡರು. ಭೀಮಯ್ಯ 'ಸತ್ವ ಪರೀಕ್ಷೆ', 'ಜೀವನಾಮೃತ', ದೇವಿ ಮಹಾತ್ಮೆ ಕಥೆಯನ್ನು ಆಧರಿಸಿದ 'ಚಿದಾನಂದ ಲೀಲೆ' ಎಂಬ ನಾಟಕಗಳನ್ನು ರಚಿಸಿದ್ದರು. ರಾಮಾಯಣ ದರ್ಶನಂ ಮಹಾಕಾವ್ಯದ ಸರಳ ಗದ್ಯಾನುವಾದ 'ರಾಮಾಯಣ ಸಂದರ್ಶನ', 'ಮಂಕು ಭೀಮನ ಬೊಗಳೆ' ಎಂಬ ಕೃತಿಗಳನ್ನು ರಚಿಸಿದ್ದಾರೆ.
ಹಿರಿಯೂರಿನಲ್ಲಿ ನಡೆದಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು. ಪಟ್ಟನಾಯಕನಹಳ್ಳಿ ಮಠದ 'ಸ್ಪಟಿಕಶ್ರೀ' ಪ್ರಶಸ್ತಿ (2010), ತತ್ವಜ್ಞಾನಿ ಪಟೇಲ್ ಬೊಮ್ಮೆಗೌಡ ಸ್ಮಾರಕದ ತತ್ವಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.
ಯುವಕರು ಪ್ರೀತಿಯಿಂದ 'ತಾತ' ಎಂಬ ಬಿರುದು ನೀಡಿದ್ದರು. ಮೃತರು ಇಬ್ಬರು ಪುತ್ರಿಯರು, ಮೂವರು ಪುತ್ರರು ಸೇರಿದಂತೆ ಅನೇಕ ಬಂಧು ಬಳಗವನ್ನು ಅಗಲಿದ್ದಾರೆ. ಮಾರೇನಹಳ್ಳಿ ಗ್ರಾಮ ಸೇರಿದಂತೆ ಜಿಲ್ಲೆಯ ಅನೇಕರು ಮೃತರ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.












Click it and Unblock the Notifications