ಒನ್ ಇಂಡಿಯಾ ಫಲಶ್ರುತಿ; ಅಧಿಕಾರಿಗಳಿಂದ ಮನೆ ಪರಿಶೀಲನೆ
ಚಿತ್ರದುರ್ಗ, ಡಿಸೆಂಬರ್ 21; ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ನಂಜಯ್ಯ ಕೊಟ್ಟಿಗೆಯಲ್ಲಿ ಸ್ಲಂ ಬೋರ್ಡ್ನಿಂದ ನಿರ್ಮಾಣವಾಗುತ್ತಿರುವ ವಸತಿ ಕಾಮಗಾರಿ ಸ್ಥಳಕ್ಕೆ ಕೊನೆಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೋಮವಾರ ಅಸಿಸ್ಟೆಂಟ್ ಇಂಜಿನಿಯರ್ ವೀರೇಶ್ ಬಾಬು ಹಾಗೂ ಹಿರಿಯೂರು ನಗರಸಭೆ ಪೌರಾಯುಕ್ತ ಡಿ. ಉಮೇಶ್ ಭೇಟಿ ನೀಡಿ ಮನೆಗಳನ್ನು ವೀಕ್ಷಣೆ ಮಾಡಿ, ಕಾಮಗಾರಿ ವಿಳಂಬದ ಬಗ್ಗೆ ಮಾಹಿತಿ ಪಡೆದರು, ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ನೀಡಲಿದ್ದಾರೆ.
ಡಿಸೆಂಬರ್ 18ರಂದು ಒನ್ ಇಂಡಿಯಾ ಕನ್ನಡದಲ್ಲಿ 'ನನೆಗುದಿಗೆ ಬಿದ್ದ ಹಿರಿಯೂರಿನ 453 ಸ್ಲಂ ಫಲಾನುಭವಿಗಳ ಜೋಪಡಿ ಕನಸು' ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು. ವರದಿ ಬಳಿಕ ಎಚ್ಚೆತ್ತುಕೊಂಡ ನಗರಸಭೆ ಪೌರಾಯುಕ್ತರು ಹಾಗೂ ಗುತ್ತಿಗೆ ಪಡೆದುಕೊಂಡಿದ್ದ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಫಲಾನುಭವಿಗಳ ಸಮಸ್ಯೆಗಳನ್ನು ಆಲಿಸಿದ್ದು, ಶೀಘ್ರದಲ್ಲೇ ಬಗೆಹರಿಸಿ ನಿಮ್ಮ ಮನೆಯ ಕನಸನ್ನು ನನಸು ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

167 ಮನೆ ಪೂರ್ಣಗೊಂಡಿವೆ; ಸ್ಲಂ ಬೋರ್ಡ್ನಿಂದ 188 ಎಸ್ಸಿ/ ಎಸ್ಟಿ ಹಾಗೂ 289 ಸಾಮಾನ್ಯ ವರ್ಗ ಸೇರಿದಂತೆ 477 ಫಲಾನುಭವಿಗಳಿಗೆ ಮನೆ ಕಟ್ಟಲು ಟೆಂಡರ್ ಆಗಿರುತ್ತದೆ. ಒಂದು ಮನೆ ಕಟ್ಟಲು ತಗಲುವ ವೆಚ್ಚ 5.62 ಲಕ್ಷ ರೂಪಾಯಿ. ಒಂದು ಮನೆಗೆ ಸರ್ಕಾರ ಎಸ್ಸಿ/ ಎಸ್ಟಿ ಗೆ 3.50 ಲಕ್ಷ ಹಾಗೂ ಸಾಮಾನ್ಯರಿಗೆ 2.70 ಲಕ್ಷ ಭರಿಸುತ್ತದೆ. ಮನೆ ಕಾಮಗಾರಿ ಮುಂಚೆ ಎಸ್ಸಿ/ ಎಸ್ಟಿ 50 ಸಾವಿರ ಕಟ್ಟಬೇಕು. ಇದರಲ್ಲಿ 87 ಸಾವಿರ ಬ್ಯಾಂಕ್ ಲೋನ್ ಇರುತ್ತದೆ. ಉಳಿದ 75 ಸಾವಿರ ಎಸ್.ಸಿ.ಪಿ, ಟಿಎಸ್.ಪಿ. ಯೋಜನೆಯಲ್ಲಿ ಹಣ ಬರುತ್ತದೆ. ಸಾಮಾನ್ಯ ವರ್ಗದವರು 75 ಸಾವಿರ ಹಣ ಕಟ್ಟಬೇಕು. 2.17 ಲಕ್ಷ ಬ್ಯಾಂಕ್ ಲೋನ್ ಆಗಬೇಕು ಎಂದು ಗುತ್ತಿಗೆ ಪಡೆದ ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಒಟ್ಟಾರೆ ಫಲಾನುಭವಿಗಳಿಂದ 3.10 ಕೋಟಿ ಕೆಎಸ್ ಡಿಬಿಗೆ ಸಂದಾಯವಾಗಬೇಕು. ಆದರೆ ಇದುವರೆಗೂ 75 ಲಕ್ಷ ಮಾತ್ರ ಸಂದಾಯವಾಗಿರುತ್ತದೆ. ಆದರೂ ಕಾಮಗಾರಿ ಮುಗಿಸುವ ಉದ್ದೇಶದಿಂದ ಇದುವರೆಗೂ ಒಟ್ಟು 167 ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಂಟ್ರಾಕ್ಟರ್ ಕೆಲಸ ಮುಗಿಸಿದ್ದು ಕಾಮಗಾರಿಗಳಲ್ಲಿ ಯಾವುದೇ ಲೋಪದೋಷಗಳು ಆಗದಂತೆ ಫಲಾನುಭವಿಗಳಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ತಲುಪಿಸುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಕಟ್ಟಿರುವ ಬಹುತೇಕ ಮನೆಗಳು ನೆನಗುದಿಗೆ ಬಿದ್ದಿದ್ದವು, ಅವುಗಳು ಸಂಪೂರ್ಣ ಕಳೆಪೆ ಕಾಮಗಾರಿಯಿಂದ ಕೂಡಿದ್ದು, ಯಾವುದೇ ಗುಣಮಟ್ಟದ ವಸ್ತುಗಳನ್ನು ಬಳಸುತ್ತಿಲ್ಲ ಹಾಗೂ ಬಳಸಿಲ್ಲ. ಅದರಲ್ಲಿಯೂ ಮರಳು, ಸಿಮೆಂಟ್, ಇಟ್ಟಿಗೆ, ಕಬ್ಬಿಣ ಮುಂತಾದ ವಸ್ತುಗಳು ಕಡಿಮೆ ಗುಣಮಟ್ಟದಿಂದ ಕೂಡಿದ್ದು, ಮನೆಗಳೆಲ್ಲವೂ ಕಳಪೆ ಕಾಮಗಾರಿಯಿಂದ ಕೂಡಿದೆ.
ಕೆಲವು ಮನೆಗಳಿಗೆ ಕಿಟಕಿ, ಬಾಗಿಲು, ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆಯೇ ಇಲ್ಲ. ಇದ್ದರೂ ಅವುಗಳು ಬೀಳುವ ಸ್ಥಿತಿಯಲ್ಲಿವೆ. ಡಿಡಿ ಕಟ್ಟಲಿಲ್ಲವೆಂದರೂ ಕೆಲವರಿಗೆ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಆದರೆ ಡಿಡಿ ಹಣ ಕಟ್ಟಿದ್ದರೂ ಮನೆ ಪೂರ್ಣಗೊಳಿಸಿಲ್ಲ ಎಂದು ಕೆಲವು ಫಲಾನುಭವಿಗಳು ಆರೋಪಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದರು.
ರತ್ನಮ್ಮ ಎಂಬುವವರು ಮಾತನಾಡಿ, "2018ರಲ್ಲಿ ನಾನೇ ಮೊದಲು ಡಿಡಿ ಕಟ್ಟಿದ್ದೇನೆ. 4 ವರ್ಷವಾದರೂ ಮನೆ ಪೂರ್ಣಗೊಂಡಿಲ್ಲ. ನಮಗೆ ಕಟ್ಟಿಕೊಟ್ಟಿರುವ ಮನೆ ಮಳೆಗೆ ಸೋರುತ್ತಿದೆ. ನಮಗೆ ಯಾವುದೇ ಸೌಲಭ್ಯ ನೀಡಿಲ್ಲ. ನಾನೇ ಹಣ ಖರ್ಚು ಮಾಡಿ ಮನೆಗೆ ಕಿಟಕಿ, ಬಾಗಿಲು ಹಾಕಿಸಿಕೊಂಡಿದ್ದೇನೆ. ಮನೆಯಲ್ಲಿ ನಮಗೆ ಗಂಡು ಮಕ್ಕಳಿಲ್ಲ. ಎಲ್ಲದಕ್ಕೂ ನಾನೇ ಅಲೆದಾಡಬೇಕು. ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮಂತಹ ಬಡವರಿಗೆ ನ್ಯಾಯ ಕೊಡಿಸಿ" ಎಂದು ಮನವಿ ಮಾಡಿದ್ದರು.












Click it and Unblock the Notifications