ಅಕಾಲಿಕ ಮಳೆಗೆ ತುತ್ತಾದ ಬಾಳೆ: ಆಸಕ್ತಿ ತೋರದ ಖರೀದಿದಾರರು
ಚಿತ್ರದುರ್ಗ,ಡಿ.6: ಉತ್ಸಾಹಿ ಯುವ ರೈತನೊಬ್ಬ ಒಂದು ಎಕರೆಗೆ 15 ಸಾವಿರ ರೂಪಾಯಿಯಂತೆ ಜಮೀನು ಗುತ್ತಿಗೆ ಪಡೆದು ಸುಮಾರು 3.10 ಲಕ್ಷ ಖರ್ಚು ಮಾಡಿ ಬಾಳೆ ನಾಟಿ ಮಾಡಿದ್ದ. ಬೆಳೆ ಉತ್ತಮವಾಗಿ ಬಂದಿತ್ತು. ಲಕ್ಷಾಂತರ ರೂಪಾಯಿ ಆದಾಯ ಬರುವ ನಿರೀಕ್ಷೆ ಕಂಡಿದ್ದ ಯುವ ರೈತ. ಆದರೆ ಎರಡು ಬಾರಿ ಸುರಿದ ಅಕಾಲಿಕವಾಗಿ ಮಳೆಗೆ ಬಾಳೆ ಬೆಳೆಯನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ತಾಲ್ಲೂಕಿನ ತವಂದಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
'ಹಿಂದಿನ ವರ್ಷ ಅಕ್ಟೋಬರ್ 1 ರಂದು ಬೆಂಗಳೂರಿನಿಂದ 1500 ಏಲಕ್ಕಿ ಬಾಳೆ, 1000 ಜಿ-9 ಬಾಳೆ ಸಸಿ ತರಿಸಿಕೊಂಡು ಪರಿಚಯದವರಿಂದ ಗುತ್ತಿಗೆ ಪಡೆದಿದ್ದ ಮೂರು ಎಕರೆ ಭೂಮಿಯಲ್ಲಿ ನಾಟಿ ಮಾಡಿದ್ದೆ. ನಾಟಿ ಮಾಡಿದ್ದ ಸಸಿಗಳು ಹಾದಿಯಲ್ಲಿ ಹೋಗುವವರ ದೃಷ್ಟಿ ತಾಗುವಂತೆ ಬೆಳೆದಿದ್ದವು. ಮೇ ತಿಂಗಳಲ್ಲಿ ಇದ್ದಕ್ಕಿದ್ದಂತೆ ಸುರಿದ ಬಿರುಮಳೆಯ ನಂತರ ಬಾಳೆ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಗಿಡದಗುಂಟ ಎಲೆಗಳು ಇಳಿ ಬೀಳತೊಡಗಿದವು. ಜೂನ್ ವೇಳೆಗೆ ಗಿಡದಲ್ಲಿ ಮೂರ್ನಾಲ್ಕು ಎಲೆಗಳು ಮಾತ್ರ ಉಳಿದಿದ್ದವು. 11 ತಿಂಗಳಿಗೆ ಬಾಳೆ ಕೊಯ್ಲಿಗೆ ಬರುತ್ತದೆಂಬ ನಿರೀಕ್ಷೆಯಲ್ಲಿದ್ದ ನನಗೆ ಬಾಳೆಯಲ್ಲಿ ಕಾಣಿಸಿಕೊಂಡ ರೋಗ ಆತಂಕ ಸೃಷ್ಟಿಸಿತು' ಎಂದು ಯುವ ರೈತ ಅರುಣ್ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

'ರೋಗದ ಕಾರಣಕ್ಕೆ ಬಾಳೆ ಕಾಯಿ ನಿಧಾನಕ್ಕೆ ಬಲಿಯುತ್ತಿದ್ದು, ಕೊಯ್ಲು ಮುಗಿಯುವುದು ಎರಡು ತಿಂಗಳು ತಡವಾಯಿತು. ಏಲಕ್ಕಿ ಬಾಳೆಗೂ ರೋಗ ಕಾಣಿಸಿಕೊಂಡು, 15-20 ಕೆಜಿ ತೂಕ ಬರಬೇಕಿದ್ದ ಗೊನೆಗಳು ಕೇವಲ 6-7 ಕೆಜಿ ತೂಕ ಬಂದವು. ಜಿ-9 ತಳಿಯ ಬಹಳಷ್ಟು ಬಾಳೆ ಗಿಡಗಳು ಕೊಳೆತು ಬಿದ್ದವು. ನವಂಬರ್ ತಿಂಗಳು ಪೂರ್ಣ ಎಡೆಬಿಡದೆ ಸುರಿದ ಮಳೆಗೆ ಬೆಳೆ ಮತ್ತಷ್ಟು ಹಾಳಾಯಿತು. ಜಿ-9 ಬಾಳೆಯನ್ನು ಪ್ರತಿ ಕೆಜಿಗೆ ನಾಲ್ಕು ರೂಪಾಯಿಯಂತೆ ಕೇಳುತ್ತಿದ್ದಾರೆ. ಗೊನೆಯಲ್ಲಿ ಹಣ್ಣು ಕಾಣಿಸಿಕೊಂಡಲ್ಲಿ ಅಂತಹದ್ದನ್ನು ವರ್ತಕರು ಖರೀದಿಸುವುದಿಲ್ಲ. ಹಿರಿಯೂರು ಅಥವಾ ಚಿತ್ರದುರ್ಗ ಹಾಗೂ ಬೇರೆ ಕಡೆಗೆ ಹಣ್ಣು ಕೊಂಡೊಯ್ದು ನಾವೇ ಮಾರಾಟ ಮಾಡುವುದು ತುಂಬಾ ಕಷ್ಟವಾಗುತ್ತದೆ' ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

'ಸ್ವಂತ ಎರಡು ಎಕರೆ ಜಮೀನಿನಲ್ಲಿ ಜಿ-9 ಬಾಳೆ ಹಾಕಿದ್ದೆ. ಅದೂ ಕೂಡ ಹಾಳಾಗಿ ಕೈಕೊಟ್ಟಿದೆ. ಮೂರು ಎಕರೆಗೆ 45 ಸಾವಿರ ಗುತ್ತಿಗೆ ಹಣ, ಡ್ರಿಪ್ ಅಳವಡಿಸಲು 45 ಸಾವಿರ, ಸಸಿ, ಗೊಬ್ಬರ, ನಿರ್ವಹಣೆಗೆಂದು 2.50 ಲಕ್ಷ ರೂಪಾಯಿ ಖರ್ಚಾಗಿದೆ. ಸ್ವಂತ ಭೂಮಿಗೆ 2 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ಗುತ್ತಿಗೆ ಭೂಮಿಯಿಂದ 2 ಲಕ್ಷ ರೂಪಾಯಿ ಆದಾಯ ಬಂದಿದೆ. ವ್ಯವಸಾಯ ಮಾಡಲು ಹೋಗಿದ್ದಕ್ಕೆ ಗುತ್ತಿಗೆ ಭೂಮಿಯೊಂದರಲ್ಲೇ ಒಂದು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಬಾಳೆ ಬೆಳೆಯಲು ಮಾಡಿರುವ ಸಾಲ, ಅದರ ಬಡ್ಡಿ ತೀರಿಸುವುದು ಹೇಗೆಂದು ದಿಕ್ಕು ತೋಚದಂತಾಗಿದೆ. ಮೇ ಮತ್ತು ನವಂಬರ್ ತಿಂಗಳಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಸುಧಾರಿಸಿಕೊಳ್ಳಲು ಆಗದಷ್ಟು ನಷ್ಟವಾಗಿದೆ. ಸರ್ಕಾರ ಮಳೆಯಿಂದ ಹಾನಿಗೊಳಗಾಗಿರುವ ತೋಟದ ಬೆಳೆಗಳಿಗೂ ಪರಿಹಾರ ನೀಡಬೇಕು' ಎಂದು ಅರುಣ್ ಆಗ್ರಹಿಸಿದ್ದಾರೆ.

ಸಹಾಯಧನಕ್ಕೆ ಅರ್ಜಿ ಸಲ್ಲಿಸಿ
ಒನ್ ಇಂಡಿಯಾ ಪ್ರತಿನಿಧಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಹಿರಿಯೂರು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅಧಿಕಾರಿ ಲೋಕೇಶ್ ಅವರು "ಅಕಾಲಿಕ ಮಳೆ ಸುರಿದ ಹಿನ್ನೆಲೆಯಲ್ಲಿ ಬೆಳೆ ನಷ್ಟದ ಬಗ್ಗೆ, ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ತೋಟಗಾರಿಕೆ ಬೆಳೆ ನಷ್ಟದ ಬಗ್ಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿತ್ತು. ಅವರು ಅರ್ಜಿ ಸಲ್ಲಿಸಿಲ್ಲವೆಂದರೆ ಬೇಗನೆ ಅರ್ಜಿ ಸಲ್ಲಿಸಬೇಕು ಅವರಿಗೆ ಸರ್ಕಾರದಿಂದ ಇಂತಿಷ್ಟು ಸಹಾಯ ಧನ ನೀಡಲು ಅವಕಾಶ ಇದೆ ಎಂದರು.












Click it and Unblock the Notifications