ಹಿರಿಯೂರು ಬಂದ್ ಗೆ ಉತ್ತಮ ಪ್ರತಿಕ್ರಿಯೆ; ಸಂಘಟನೆಗಳ ಬೆಂಬಲ
ಹಿರಿಯೂರು, ಜುಲೈ 1: ಹಿರಿಯೂರು ವಿವಿ ಸಾಗರ ಹೋರಾಟ ಸಮಿತಿ 'ಡೆಡ್ ಸ್ಟೋರೇಜ್ ನೀರು ಉಳಿಸಿ, ಡ್ಯಾಂ ರಕ್ಷಿಸಿ' ಎಂದು ಕರೆ ಕೊಟ್ಟಿದ್ದ ಬಂದ್ ಗೆ ವಿವಿಧ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು, ಮತ್ತಿತರ ಸಮಾಜದ ಸಂಘಟನೆಗಳು ಬೆಂಬಲ ಕೊಟ್ಟಿದ್ದು, ಉತ್ತಮ ಪ್ರತಿಕ್ರಿಯೆ ದೊರೆತು ಹಿರಿಯೂರು ಬಂದ್ ಯಶಸ್ವಿಯಾಗಿದೆ.
ಹಿರಿಯೂರಿನ ಪ್ರವಾಸಿ ಮಂದಿರದಿಂದ ಬೈಕ್ ಮೂಲಕ ಹೊರಟ ಪ್ರತಿಭಟನಾಕಾರರು ಚಳ್ಳಕೆರೆ ರಸ್ತೆಯ ಕೃಷಿ ಇಲಾಖೆ, ಟಿ.ಬಿ. ಸರ್ಕಲ್ ನ 100 ಅಡಿ ರಸ್ತೆ, ಎನ್.ಎಚ್. 4 ಸರ್ವಿಸ್ ರಸ್ತೆ ಮೂಲಕ ಸಾಗಿದರು. ನಗರ ಮುಖ್ಯ ರಸ್ತೆಯಿಂದ ಗಾಂಧಿ ಸರ್ಕಲ್ ಬಳಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯೂರು ತಾಲ್ಲೂಕು ಸತತ ಬರಗಾಲಕ್ಕೆ ತತ್ತರಿಸಿ ಹೋಗಿದೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ, ಭೂಮಿ ಒಣಗಿ ರೈತರ ಬದುಕು ಹೀನಾಯ ಸ್ಥಿತಿ ತಲುಪಿದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಸರ್ಕಾರದ ವಿರುದ್ಧ ರೈತರು ಗುಡುಗಿದರು. ಮತ್ತೊಂದು ಕಡೆ ಭದ್ರಾ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಒಬ್ಬ ರೈತನ ಸಮಸ್ಯೆಗಾಗಿ ಲಕ್ಷಾಂತರ ರೈತರ ಜೀವನದಲ್ಲಿ ಚೆಲ್ಲಾಟವಾಡಬಾರದು, ಭದ್ರಾ ಅಧಿಕಾರಿಗಳು ಮತ್ತು ಸರ್ಕಾರ ಕೂಡಲೇ ಒಂದು ನಿರ್ಧಾರಕ್ಕೆ ಬರಬೇಕು. ಸಮಸ್ಯೆ ಬಗೆಹರಿಸಿ ಭದ್ರಾ ನೀರನ್ನು ವಿವಿ ಸಾಗರಕ್ಕೆ ಹರಿಸಬೇಕು ಎಂದು ಒತ್ತಾಯಿಸಿದರು.

ಮಂಡ್ಯ, ರಾಮನಗರ, ಮೈಸೂರು ಜಿಲ್ಲೆಯ ಜನ ಮಾತ್ರ ಸ್ವಾಭಿಮಾನಿಗಳಲ್ಲ, ಕೋಟೆನಾಡು ಚಿತ್ರದುರ್ಗದ ಜನರೂ ಸ್ವಾಭಿಮಾನಿಗಳು ಎಂದು ಸಿಎಂಗೆ ಪ್ರತಿಭಟನಾಕಾರರು ಎಚ್ಚರಿಸಿದರು.
ರಾಜ್ಯ ಸರ್ಕಾರ ಕತ್ತೆ ಇದ್ದ ಹಾಗೆ. ಕತ್ತೆಯನ್ನು ಹೊಡೆದರೆ ಎಚ್ಚರಗೊಂಡು ಮುಂದೆ ಹೋಗುತ್ತದೆ. ಹಾಗೇ ಸರ್ಕಾರವನ್ನು ಬಡಿದೆಚ್ಚರಿಸುವ ದೃಷ್ಟಿಯಿಂದ ಹೋರಾಟ ಅನಿವಾರ್ಯವಾಗಿದೆ. ಈ ಸಮಸ್ಯೆ ಹದಿನೈದು ದಿನಗಳಲ್ಲಿ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಬಂದ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಿದ್ದವು, ಬಸ್ಸ್, ಆಟೋ ಸಂಚಾರ ಸ್ಥಗಿತಗೊಂಡಿದ್ದವು, ಔಷಧಿ ಕೇಂದ್ರಗಳು, ಆಸ್ಪತ್ರೆಗಳು, ಹಾಲಿನ ಕೇಂದ್ರಗಳು ಎಂದಿನಂತೆ ತೆರೆದಿದ್ದವು.
ಪ್ರತಿಭಟನೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ಯಶೋಧರ, ಕಸವನಹಳ್ಳಿ ರಮೇಶ್, ಹೋರಕೆರಪ್ಪ, ನಗರಸಭಾ ಸದಸ್ಯರು, ಕರವೇ ಸಂಘಟನೆ, ಕನ್ನಡ ಪರ ಸಂಘಟನೆಗಳು, ಡಾಕ್ಟರ್ ಅಸೋಷಿಯನ್ ಸಂಘ, ವಿವಿಧ ರೈತಪರ ಸಂಘಟನೆಗಳು, ಸಂಘ ಸಂಸ್ಥೆಗಳು, ಪಕ್ಷಾತೀತವಾಗಿ ರಾಜಕೀಯ ಮುಖಂಡರು, ಮಹಿಳೆಯರು, ಸಾವಿರಾರು ರೈತರು ಸೇರಿದಂತೆ ಮತ್ತಿತ್ತರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಹಿರಿಯೂರು ಅರ್ಥಪೂರ್ಣ ಬಂದ್ ಗೆ ಸಾಕ್ಷಿಯಾಯಿತು.
ನಾಳೆ ಪ್ರತಿಭಟನಾಕಾರರು ವಿವಿ ಸಾಗರ ಡ್ಯಾಂ ಮುತ್ತಿಗೆ ಹಾಕಲಿದ್ದಾರೆ.












Click it and Unblock the Notifications