ಚಿತ್ರದುರ್ಗ; ಇಮ್ಯೂನಿಟಿ ಬೂಸ್ಟರ್ ಸೇವಿಸಿದ ಕಾರ್ಮಿಕರು ಅಸ್ವಸ್ಥ
ಚಿತ್ರದುರ್ಗ, ಅಕ್ಟೋಬರ್ 24; ಮಹಾಮಾರಿ ಕೊರೊನಾ ವೈರಸ್ನಿಂದ ತಮ್ಮ ಜೀವವನ್ನು ರಕ್ಷಿಸಿಕೊಳ್ಳಲು ಹಾಗೂ ದೇಹದಲ್ಲಿ ಪ್ರತಿರೋಧಕತೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ನೀಡಿದ್ದ ಇಮ್ಯೂನಿಟಿ ಬೂಸ್ಟರ್ ಕುಡಿದ ನಂತರ 8 ಮಂದಿ ಕಾರ್ಮಿಕರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಎರಡು ವರ್ಷಗಳಿಂದ ಇಡೀ ಜಗತ್ತನ್ನೇ ಕಾಡಿ ಸಾವು, ನೋವನ್ನು ತಂದಿಟ್ಟಿದ್ದ ಕೊರೊನಾದಿಂದ ದೇಹದಲ್ಲಿನ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸರ್ಕಾರ ಕಾರ್ಮಿಕ ಕಲ್ಯಾಣ ಇಲಾಖೆ ಮೂಲಕ ರಾಜ್ಯದಾದ್ಯಂತ ಕಟ್ಟಡ ಹಾಗೂ ಇನ್ನಿತರ ಕಾರ್ಮಿಕರಿಗೆ ಇಮ್ಯೂನಿಟಿ ಬೂಸ್ಟರ್ ಇರುವ ಕಿಟ್ಗಳನ್ನು ವಿತರಿಸಲಾಗಿತ್ತು.
ಅದರಂತೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲೂ ಕೂಡ ಎಲ್ಲಾ ಕಾರ್ಮಿಕರಿಗೂ ಕಳೆದ 8/10/2021 ರಂದು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸುಮಾರು 800 ಜನರಿಗೆ ಇಮ್ಯೂನಿಟಿ ಬೂಸ್ಟರ್ ಕಿಟ್ ಗಳನ್ನು ವಿತರಿಸಿದ್ದರು. ಆದರೆ ಕಾರ್ಮಿಕರು ದಸರಾ ಹಬ್ಬ ಇದ್ದುದ್ದರಿಂದ ಅದನ್ನು ತಕ್ಷಣವೇ ಕುಡಿಯದೇ ಶನಿವಾರ ಕಾಸಿ ಕುಡಿದಿದ್ದಾರೆ. ಕುಡಿದ ಬೆನ್ನಲ್ಲೆ ವಾಂತಿ, ಬೇದಿ ಶುರುವಾಗಿದ್ದು, ಎಲ್ಲರೂ ಒಂದೇ ಬಾರಿಗೆ ಬಂದು ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಘಟನೆ ಬಳಿಕ ಈಗಾಗಲೇ ಜಿಲ್ಲೆಯಲ್ಲಿ ಹಲವು ಕಾರ್ಮಿಕರು ಪಡೆದುಕೊಂಡಿರುವ ಇಮ್ಯೂನಿಟಿ ಬೂಸ್ಟರ್ ಅನ್ನು ಯಾರು ಸೇವಿಸಬಾರದೆಂದು ತಿಳಿಸಲಾಗಿದೆ. ಕಾರ್ಮಿಕ ಇಲಾಖೆ ಅವರು ನೀಡಿದ ಡಬ್ಬಿಗಳಲ್ಲಿರುವ ಪುಡಿಯಲ್ಲಿ ಪ್ಲಾಸ್ಟಿಕ್ ಮಿಶ್ರಣವೂ ಇರುವುದು ಕಂಡು ಬಂದಿದ್ದು, ಕಳಪೆಯಿಂದ ಕೂಡಿರುವ ಮಿಶ್ರಣವನ್ನು ಕೊಟ್ಟಿದ್ದಾರೆ. ಇದನ್ನು ಕುಡಿದ ಮೇಲೆ ನಮಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ ಎಂದು ಕಟ್ಟಡ ಕಾರ್ಮಿಕರ ಸಂಘದ 8 ಜನ ಕಾರ್ಮಿಕರು ಆರೋಪಿಸಿದ್ದಾರೆ.
ಇತ್ತ ಇಮ್ಯೂನಿಟಿ ಬೂಸ್ಟರ್ ಕುಡಿದು ಆಸ್ಪತ್ರೆ ದಾಖಲಾಗಿರುವ ವಿಷಯ ತಿಳಿಯುತ್ತಿದ್ದಂತೆ ಕಲಬುರಗಿಯಿಂದ ಬಂದ ಕಾರ್ಮಿಕ ಕಲ್ಯಾಣ ಇಲಾಖೆ ಉಪ ಆಯುಕ್ತ ನಾಗೇಶ್ ಕಾರ್ಮಿಕರ ಆರೋಗ್ಯ ವಿಚಾರಿಸಿದರು, ಅವರು ಕೊಟ್ಟಿರುವ ಬೂಸ್ಟರ್ ಗಳ ಡಬ್ಬಗಳು, ಅವುಗಳಲ್ಲಿರುವ ಪುಡಿಯನ್ನು ಪರಿಶೀಲಿಸಿದರು. ನಂತರ ವೈದ್ಯರ ಬಳಿ ಮಾಹಿತಿಯನ್ನು ಪಡೆದುಕೊಂಡರು.
ಮಾಧ್ಯಮಗಳ ಜೊತೆ ದೂರವಾಣಿ ಮೂಲಕ ಮಾತನಾಡಿದ ಅವರು, "ಸರ್ಕಾರ ನಿರ್ದೇಶನದಂತೆ ಕಾರ್ಮಿಕರಿಗೆ ಈ ಕಿಟ್ ಅನ್ನು ನೀಡಿದ್ದು, ರಾಜ್ಯದಲ್ಲಿ ಯಾವುದೇ ದೂರುಗಳು ಬಂದಿಲ್ಲ. ಆದರೆ ಚಿತ್ರದುರ್ಗದಲ್ಲಿ ಮಾತ್ರ ಈ ಘಟನೆ ಸಂಭವಿಸಿದ್ದು, ಇದರ ನಿಖರ ಕಾರಣ ತಿಳಿದು ಬರುವವರೆಗೂ ಉಳಿದ ಕಾರ್ಮಿಕರಿಗೆ ವಿತರಿಸಬೇಕಿದ್ದ ನಾಲ್ಕುವರೆ ಸಾವಿರ ಕಿಟ್ಗಳ ಹಂಚಿಕೆಯನ್ನು ನಿಲ್ಲಿಸಲಾಗಿದೆ" ಎಂದು ತಿಳಿಸಿದರು.
ಒಟ್ಟಾರೆ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕಾರ್ಮಿಕ ಇಲಾಖೆಯಿಂದ ನೀಡಿದ್ದ ಇಮ್ಯೂನಿಟಿ ಬೂಸ್ಟರ್ ಕಿಟ್ ಕಾರ್ಮಿಕರ ಜೀವಕ್ಕೆ ಕುತ್ತು ತಂದಿದ್ದು, ತನಿಖೆಯಿಂದ ಸತ್ಯಾಸತ್ಯತೆ ಹೊರ ಬರಬೇಕಾಗಿದೆ.












Click it and Unblock the Notifications