ಮೋದಿ ವಿರುದ್ಧ ಪ್ರಚೋದನಾಕಾರಿ ಹೇಳಿಕೆ, ಜಿಗ್ನೇಶ್ ಮೇಲೆ ದೂರು
ಪ್ರಧಾನಮಂತ್ರಿ ಭಾಷಣಗಳಿಗೆ ಕನ್ನಡದ ಯುವ ಜನಾಂಗ ಅಡ್ಡಿಪಡಿಸಬೇಕು. ಏಪ್ರಿಲ್ ಹದಿನೈದನೇ ತಾರೀಕು ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬರ್ತಾರೆ. ಆಗ ಕುರ್ಚಿಗಳನ್ನು ಗಾಳಿಗೆ ತೂರಾಡಿ. ಅವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ಎಂದು ಗುಜರಾತ್ ನ ಶಾಸಕ ಹಾಗೂ ದಲಿತ ನಾಯಕ ಜಿಗ್ನೇಶ್ ಮೇವಾನಿ ಭಾಷಣ ಮಾಡಿದ್ದರು.
ಜಿಗ್ನೇಶ್ ಮೇವಾನಿ ವಿರುದ್ಧ ಚುನಾವಣೆ ಆಯೋಗದಿಂದ ದೂರು ದಾಖಲಿಸಿಕೊಳ್ಳಲಾಗಿದೆ. ಚುನಾವಣೆ ಆಯೋಗದ ಸದಸ್ಯರಾದ ಟಿ.ಜಯಂತ್ ಅವರು ಮೇವಾನಿ ಹಾಗೂ ಕೋಮು ಸೌಹಾರ್ದ ವೇದಿಕೆಯ ಶಫಿ ಉಲ್ಲಾ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ ಮಾಡಲಾಗಿದೆ.
ಬಿಜೆಪಿ ವಿರುದ್ದ ಕರ್ನಾಟಕದಲ್ಲಿ ಪ್ರಚಾರ ಆರಂಭಿಸಿದ ಜಿಗ್ನೇಶ್ ಮೇವಾನಿ
ಚಿತ್ರದುರ್ಗದ ವಾರ್ತಾಭವನದಲ್ಲಿ ಬುಧವಾರ ಭಾಷಣ ಮಾಡಿದ್ದರು. ಕೋಮು ಸೌಹಾರ್ದ ವೇದಿಕೆ ಆಯೋಜಿಸಿದ್ದ 'ಸಂವಿಧಾನ ರಕ್ಷಿಸಿ' ಕಾರ್ಯಕ್ರಮದಲ್ಲಿ ಜಿಗ್ನೇಶ್ ಮೇವಾನಿ ಮಾತನಾಡಿದ್ದರು. "ಪ್ರಧಾನಿ ಮೋದಿ ಅವರ ಭಾಷಣಕ್ಕೆ ಅಡ್ಡಿ ಪಡಿಸುವುದೇ ಯುವಜನರ ಜವಾಬ್ದಾರಿ" ಎಂದು ಹೇಳಿದ್ದರು.
"ನಾನಿಲ್ಲಿ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಲು ಬಂದಿಲ್ಲ. ಬಿಜೆಪಿ ಮತ್ತೊಮ್ಮೆ ದಕ್ಷಿಣ ಭಾರತವನ್ನು ಪ್ರವೇಶಿಸಬಾರದು ಎಂಬ ಕಾರಣಕ್ಕೆ ಜಾಗ್ರತೆ ಮೂಡಿಸಲು ಬಂದಿದ್ದೇನೆ" ಎಂದು ಜಿಗ್ನೇಶ್ ಹೇಳಿದ್ದರು.
ನನ್ನ ಪ್ರಚಾರದಿಂದ ಯಾವ ಪಕ್ಷಕ್ಕೆ ಲಾಭವಾಗುತ್ತದೋ ಗೊತ್ತಿಲ್ಲ. ಆದರೆ ನನ್ನ ಉದ್ದೇಶ ಮಾತ್ರ ಬಿಜೆಪಿಯನ್ನು ಸೋಲಿಸುವುದು ಎಂದು ಕಳೆದ ಡಿಸೆಂಬರ್ ನಲ್ಲಿ ಅವರು ಹೇಳಿದ್ದರು.