ಎಚ್ಡಿಕೆ ಮುಂದೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಡಿಕೆಶಿ
ಚಿತ್ರದುರ್ಗ, ಆಗಸ್ಟ್ 18 : ಮುಂದಿನ ದಿನಗಳಲ್ಲಿ ನಮ್ಮ ಸಮುದಾಯಕ್ಕೆ ಒಳ್ಳೆಯ ಅವಕಾಶ ಬರುತ್ತಿದೆ, ಮನೆಗೆ ಬರುವ ಲಕ್ಷ್ಮಿಯನ್ನು ಕರ್ಕೊಂಡು ಹೋಗಿ ಎಂದು ನಂಜಾವಧೂತ ಸ್ವಾಮಿ ಹಾಗೂ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಗೆ ಹೇಳಿದ್ದೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಮುಂದೆಯೇ ಸಿಎಂ ಆಗುವ ಆಸೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಕ್ತಪಡಿಸಿದ್ದಾರೆ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ನೆಹರೂ ಮೈದಾನದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನಾಡ ಪ್ರಭು ಕೆಂಪೇಗೌಡ ಜಯಂತೋತ್ಸವ ಮತ್ತು ತಾಲೂಕು ಒಕ್ಕಲಿಗರ ಜಾಗೃತಿ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
" ನಾನು ಸಮಾರಂಭಕ್ಕೆ ಜೈಕಾರ, ಕೇಕೆ, ಶಿಳ್ಳೆಗೆ ಬಂದಿಲ್ಲ. ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಬಂದಿದ್ದೇನೆ . ಇಂದು ಹಿರಿಯೂರು ನಗರದಲ್ಲಿ ನಡೆಯುತ್ತಿರುವ ಈ ಜಯಂತಿ ರಾಜ್ಯಕ್ಕೆ ಮಾದರಿಯಾಗಬೇಕು. ಒಕ್ಕಲಿಗರ ಜಾತಿ ಜಾತಿಯಾಗಿದೆ. ಇಡೀ ವಿಶ್ವದಲ್ಲಿ ನಮ್ಮ ಸಮುದಾಯ ಇದೆ " ಎಂದು ಡಿಕೆ ಶಿವಕುಮಾರ್ ಹೇಳಿದರು.

ಕೆಂಪೇಗೌಡರು ಬೆಂಗಳೂರು ನಾಡನ್ನು ಕಟ್ಟಿದ್ದಾರೆ. ಎಲ್ಲಾ ಸಮೂದಾಯದ ಜನರಿಗೆ ಜಾಗ ಮಾಡಿಕೊಟ್ಟಿದ್ದಾರೆ. ಇಂತಹ ಹಿನ್ನಲೆ ಹೊಂದಿರುವ ಮಹನಿಯರ ಇತಿಹಾಸವನ್ನು ತಿದ್ದಲು ಬಿಜೆಪಿ ಸರಕಾರ ಪ್ರಯತ್ನ ಮಾಡಿತು. ಕುವೆಂಪು ಅವರ ವಿಶ್ವಮಾನದ ತತ್ವಕ್ಕೂ ಸರಕಾರ ಕೈಯಾಕಿದೆ. ಆದರೆ ಯಾರು ಇತಿಹಾಸ ತಿದ್ದಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಶಿಕ್ಷಕ, ಸೈನಿಕ, ಕೃಷಿಕ, ಕಾರ್ಮಿಕ ಇಲ್ಲಾಂದ್ರೆ ಸಮಾಜ ಇಲ್ಲ, ಕೆಂಪೇಗೌಡರು ಸರ್ವಜನಾಂಗದ ನಾಯಕ, ಇನ್ಮುಂದೆ ಒಕ್ಕಲಿಗರನ್ನು ಮಾತ್ರ ಕರೆದು ಯಾವುದೇ ಸಭೆ ಮಾಡಬೇಡಿ, ಕಾರ್ಯಕ್ರಮದ ಆಯೋಜಕರಿಗೆ ಎಲ್ಲ ಸಮಾಜದ ನಾಯಕರು ವೇದಿಕೆಯಲ್ಲಿ ಇರಬೇಕು. ಯಾರನ್ನು ಅಗೌರವದಿಂದ ಕಾಣಬಾರದು. ಎಲ್ಲರನ್ನೂ ಸಮಾನವಾಗಿ ಕಾಣುವುದು ಕೆಂಪೇಗೌಡರ ಮೂಲ ತತ್ವವಾಗಿದೆ ಎಂದರು.

ಕಾಂಗ್ರೆಸ್ ಸರಕಾರದ ವೇಳೆ ಆರಂಭಿಸಿದ ಸೋಲರ್ ಪಾರ್ಕ್ ಬಗ್ಗೆ ಮಾತನಾಡಿ "ಪಾವಗಡದಲ್ಲಿ 15 ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ರೈತರ ಯಾವುದೇ ಜಮೀನನ್ನು ವಶಪಡಿಸಿಕೊಳ್ಳದೆ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದೆವು. ಆದರೆ ಬಿಜೆಪಿ ಏನೋ ಮಾಡಿದ್ದೇನೆ ಎಂದು ತಪಾಸಣೆ ಮಾಡಿದರು. ಆದರೆ ನಮ್ಮ ಸರಕಾರದ ಕಾರ್ಯದಿಂದ ರೈತರಿಗೆ ಏಳು ಗಂಟೆಗಳ ಕಾಲ ವಿದ್ಯುತ್ ಕೊಡಲಾಗಿದೆ. ಇದು ನನ್ನ ದೊಡ್ಡ ಸಾಧನೆ ಅಲ್ಲ, ನನ್ನ ಸಣ್ಣ ಸೇವೆಯ ಪ್ರಯತ್ನ ಎಂದರು.
ಸಿಎಂ ಆಗುವ ಇಂಗಿತ
ಮುಂದಿನ ದಿನಗಳಲ್ಲಿ ನಮಗೆ ಅವಕಾಶ ಬರುತ್ತಿವೆ. ಶ್ರೀಗಳಿಗೂ ಬೆಳಕು ಕಿಟಕಿ ಬಾಗಿಲು ತೆಗೆದು ಮನೆ ಬಾಗಿಲಿಗೆ ಬರುತ್ತಿದೆ . ಬರುವ ಲಕ್ಷ್ಮಿಯನ್ನು ಒಳಗೆ ಕರೆದುಕೊಳ್ಳಿ ಎಂದು ಇಬ್ಬರು ಶ್ರೀಗಳಿಗೆ ವಿನಂತಿಸಿಕೊಂಡಿದ್ದೇನೆ. ಮನೆಗೆ ಕರ್ಕೊಂಡು ಹೋಗಲಿ, ಇಲ್ಲ ವಾಪಸ್ ಕಳಿಸಲಿ. ಸಮೂದಾಯದ ಜನರು ಕೂಡ ಕಷ್ಟಕಾಲದಲ್ಲಿ ನನ್ನ ಬೆನ್ನಿಗೆ ನಿಂತ್ಕೊಂಡಿದ್ದೀರಿ, ಮುಂದೆಯೂ ನಿಂತುಕೊಳ್ಳುತ್ತೀರಾ ಎಂಬ ಭರವಸೆ ಇದೆ ಎಂದು ಹೇಳುವ ಮೂಲಕ ಮುಖ್ಯಮಂತ್ರುಯಾಗುವ ಇಂಗಿತ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ನಂಜಾವಧೂತ ಸ್ವಾಮಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ಟಿಬಿ ಜಯಚಂದ್ರ, ಶಾಸಕ ಬಾಲಕೃಷ್ಣ, ನಿರ್ಮಾಪಕ ಉಮಾಪತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications