ಚಿತ್ರದುರ್ಗ; ಕ್ರಿಕೆಟ್ ವಿಚಾರಕ್ಕೆ ಯುವಕರ ಮಾರಾಮಾರಿ, ಪಂದ್ಯಾವಳಿ ರದ್ದು
ಚಿತ್ರದುರ್ಗ, ಏಪ್ರಿಲ್ 13; ಕ್ರಿಕೆಟ್ ಆಟದ ಮೈದಾನದ ವಿಚಾರಕ್ಕೆ ವಾಗ್ವಾದ ನಡೆದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಹಿರಿಯೂರು ತಾಲೂಕಿನ ಚಳ್ಳಮಡು ಗ್ರಾಮದಲ್ಲಿ ಯುವಕರು ಹೊಡೆದಾಡಿಕೊಂಡಿದ್ದಾರೆ.
ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡಿಕೊಂಡಿದ್ದ ಒಂದು ಗುಂಪಿನ ಕಡೆಯವರು ಕ್ರಿಕೆಟ್ ಆಟ ಆಡಲು ಮೈದಾನ ಬಿಟ್ಟುಕೊಡುವಂತೆ ಒತ್ತಾಯಿಸಿದಾಗ ಮಾತಿಗೆ ಮಾತು ಬೆಳೆದಿದೆ. ಬಳಿಕ ಹೊಡೆದಾಟ ನಡೆದಿದೆ. ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಲ್ಲು, ದೊಣ್ಣೆ, ಮಾರಕಾಸ್ತ್ರಗಳಿಂದ ಬಡಿದಾಡಿ ಕೊಂಡಿದ್ದಾರೆ. ಗಾಯಾಳನ್ನು ಚಿಕಿತ್ಸೆಗಾಗಿ ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆ ಆವರಣದಲ್ಲಿ ಸಹ ಜಗಳ ನಡೆದಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಹಿರಿಯೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಏಪ್ರಿಲ್ 14 ಮತ್ತು 15ರಂದು ಕ್ರಿಕೆಟ್ ಪಂದ್ಯಾವಳಿ ನಡೆಯಬೇಕಿತ್ತು. ಯುವಕರ ಗಲಾಟೆ ಹಿನ್ನಲೆಯಲ್ಲಿ ಪಂದ್ಯಾವಳಿಯನ್ನು ರದ್ದು ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಪಂದ್ಯಾವಳಿಗಾಗಿ ಹಾಕಿದ್ದ ಬ್ಯಾನರ್ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ.
ಹೊಡೆದಾಟದಲ್ಲಿ ಗಾಯಗೊಂಡವರು ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ಹಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications