ಚಿತ್ರದುರ್ಗ ಜಿಲ್ಲೆಯ ಸುವರ್ಣಮುಖಿ ನದಿಗೆ ಕಟ್ಟಿದ್ದ ಸೇತುವೆ ಕುಸಿತ
ಚಿತ್ರದುರ್ಗ, ಸೆಪ್ಟೆಂಬರ್, 21: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಸಮುದ್ರದಹಳ್ಳಿ ಹಾಗೂ ಮ್ಯಾದನಹೊಳೆ ಗ್ರಾಮಗಳ ಸಂಪರ್ಕ ಸೇತುವೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಜವನಗೊಂಡನಹಳ್ಳಿ ಹೋಬಳಿಯಲ್ಲಿ ಸುವರ್ಣಮುಖಿ ನದಿ ಹರಿಯುತ್ತಿದ್ದು, ಎರಡು ಗ್ರಾಮಗಳಿಗೆ ಸಂಪರ್ಕಿಸಲು ಸೇತುವೆ ನಿರ್ಮಾಣ ಮಾಡಿದ್ದರು. ಇದೀಗ ಸೇತುವೆ ಕುಸಿತದಿಂದ ಎರಡು ಗ್ರಾಮಗಳ ಸಂಪರ್ಕ ಸಂಚಾರ ಕಡಿತಗೊಂಡಿದ್ದು, ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಸುವರ್ಣಮುಖಿ ನದಿ ಮೈದುಂಬಿ ಹರಿದಿದೆ. ಪ್ರಸ್ತುತವಾಗಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಈ ನೀರಿನ ರಭಸಕ್ಕೆ ಸೇತುವೆ ಪಿಲ್ಲರ್ ಕುಸಿದಿದೆ.

ಸುವರ್ಣಮುಖಿ ನದಿ ಸಂಪರ್ಕ ಸೇತುವೆ ಕುಸಿತ
ವಿಷಯ ತಿಳಿದ ತಹಶೀಲ್ದಾರ್ ಪ್ರಶಾಂತ್ ಕೆ ಪಾಟೀಲ್ ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಸ್ಥಳೀಯ ಕಂದಾಯ ಅಧಿಕಾರಿಗಳು, ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಸೇತುವೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎರಡು ಗ್ರಾಮಗಳ ಜನರಿಗೆ ಸೇತುವೆ ಕುಸಿದಿರುವ ಬಗ್ಗೆ ತಿಳಿಸಲಾಗಿದೆ. ಇನ್ನು ಸೇತುವೆಯ ಎರಡು ಭಾಗದಲ್ಲಿ ಬ್ಯಾರಿಕೇಡ್, ಮಣ್ಣು ಹಾಕಿ, ರಸ್ತೆ ಬಂದ್ ಮಾಡಲಾಗಿದ್ದು, ಗ್ರಾಮಗಳಿಗೆ ತೆರಳಲು ಬೇರೆ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಕುರಿತು ಮಾತನಾಡಿದ ತಹಶೀಲ್ದಾರ್ ಪ್ರಶಾಂತ್ ಕೆ ಪಾಟೀಲ್ ಅವರು, "ಧರ್ಮಪುರ ಹೋಬಳಿಯ ಸಮುದ್ರದಹಳ್ಳಿ ಹಾಗೂ ಮ್ಯಾದನಹೊಳೆ ಗ್ರಾಮಗಳ ಸಂಪರ್ಕ ಸೇತುವೆ ಸ್ವಲ್ಪ ಮಟ್ಟಿಗೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಈಗಾಗಲೇ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಹಾಗೂ ವೃತ್ತ ನಿರೀಕ್ಷರು, ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಎರಡು ಗ್ರಾಮಗಳ ಜನರಿಗೆ ತಿಳಿ ಹೇಳಲಾಗಿದೆ. ಬ್ರಿಡ್ಜ್ ದುರಸ್ತಿಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಗ್ರಾಮಗಳಿಗೆ ಪರ್ಯಾಯ ರಸ್ತೆ ಇದ್ದು, ಹೆಚ್ಚು ಸಮಯ ಆಗುತ್ತದೆ. ಭಯ ಯಾವುದು ಬೇಡ ಎಂದರು. ಸೇತುವೆ ಬಳಿ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು," ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.












Click it and Unblock the Notifications