ಚಿತ್ರದುರ್ಗದಲ್ಲಿ "ಭಾರತ್ ಜೋಡೋ" ; ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಲು ಬನ್ನಿ, ಎಚ್.ಆಂಜನೇಯ ಮನವಿ
ಚಿತ್ರದುರ್ಗ, ಅಕ್ಟೋಬರ್, 07: ಕಾಂಗ್ರೆಸ್ ಕೈಗೊಂಡಿರುವ ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಲು ಬನ್ನಿ. ಭಾರತ ದೇಶ ಈಗ ಸಂಕಷ್ಟದ ಸ್ಥಿತಿಯಲ್ಲಿದ್ದು, ಅಘೋಷಿತ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕೆಲವರಿಂದ ದೇಶದಲ್ಲಿ ದ್ವೇಷಮಯ ವಾತಾವರಣ ಸೃಷ್ಟಿ ಆಗುತ್ತಿದೆ. ಜನರನ್ನು ಎತ್ತಿಕಟ್ಟುವ ಕೆಲಸಗಳು ನಡೆಯುತ್ತಿವೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಚಿತ್ರದುರ್ಗದಲ್ಲಿ ಹೇಳಿದರು.
ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, ಮನಸ್ಸುಗಳನ್ನು ಒಡೆಯಲಾಗುತ್ತಿದೆ. "ಸೌಹಾರ್ದದ ಭಾವನೆ ಹೊರಟು ಹೋಗಿದ್ದು, ಹಿಂಸಾಚಾರವೇ ಹೆಚ್ಚಾಗಿದೆ. ಕ್ಷುಲ್ಲಕ ಕಾರಣಗಳಿಗಾಗಿ ಜನರನ್ನು ಕೊಲ್ಲಲಾಗುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಅಪಾಯದಲ್ಲಿದೆ. ಕೆಲವರು ಭಾರತದ ಸಂವಿಧಾನಕ್ಕೆ ಬೆಲೆಯನ್ನೇ ನೀಡುತ್ತಿಲ್ಲ. ನಾಗರೀಕತೆಯ ಅಡಿಪಾಯದ ಮೇಲೆ ದಾಳಿ ನಡೆಯುತ್ತಿದ್ದು, ಇದರಿಂದ ಇಡೀ ದೇಶ ಸಂಕಷ್ಟದ ಸಮಯವನ್ನು ಎದುರಿಸುತ್ತಿದೆ," ಎಂದು ಅಸಮಾಧಾನ ಹೊರಹಾಕಿದರು.
ಚಿತ್ರದುರ್ಗ: ಫಲ ಕೊಡದ ಜೆಡಿಎಸ್, "ಕೈ" ಹಿಡಿಯಲು ಸಜ್ಜಾಗಿದ್ದಾರಾ ಕ್ಯಾಸಿನೊ ದೊರೆ?
"ಜನರ ಭಾವನೆಗಳಿಗೆ ಬೆಲೆಯೇ ಇಲ್ಲದಂತಾಗಿದ್ದು, ಮತದಾರರ ಮೇಲೆ ಏಕತೆಯನ್ನು ಹೇರಲಾಗುತ್ತಿದೆ. ವೈವಿಧ್ಯತೆಯನ್ನು ಸಹಿಸಿಕೊಳ್ಳುವ ಮನಸ್ಥಿತಿ ದೂರವಾಗುತ್ತಿದೆ. ಇದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದ ಹಂಚಿನತ್ತ ಸಾಗುತ್ತಿದೆ. ತಮ್ಮ ಅಭಿಪ್ರಾಯಗಳನ್ನು ಬೆಂಬಲಿಸದೇ ಇರುವ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿ ಬಂಧಿಸುತ್ತಿದ್ದಾರೆ. ವಿರೋಧ ಪಕ್ಷಗಳ ಮೇಲೆ ಸಿಬಿಐ, ಇ.ಡಿ ಮುಂತಾದ ಸಂಸ್ಥೆಗಳನ್ನು ಚೂ ಬಿಟ್ಟು ಹಿಂಸೆ ಕೊಡಲಾಗುತ್ತಿದೆ," ಎಂದು ಬಿಜೆಪಿ ವಿರುದ್ಧ ಎಚ್. ಆಂಜನೇಯ ವಾಗ್ದಾಳಿ ನಡೆಸಿದರು.
ಗಗನಕ್ಕೇರಿವೆ ಅಗತ್ಯ ವಸ್ತುಗಳ ಬೆಲೆ
ದೇಶದಲ್ಲಿ ಈಗ ನಿರುದ್ಯೋಗ ಹೆಚ್ಚಾಗುತ್ತಿದ್ದು, ಇದರ ಜೊತೆಗೆ ಬಡತನವೂ ಏರುತ್ತಲೇ ಇದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು, ಇದರಿಂದ ಬಡಜನರು ಜೀವನ ನಡೆಸುವುದು ಕಷ್ಟ ಆಗಿದೆ. ಬಡವರ ನೋವನ್ನು ಕೇಳುವ ಕಿವಿಗಳು ಇಲ್ಲದಂತಾಗಿದೆ. ಬಡವರ ಕಣ್ಣೀರು ಒರೆಸುವವರು ಯಾರು ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ಒಡೆದ ಮನಸ್ಸುಗಳನ್ನು ಒಟ್ಟುಗೂಡಿಸುವ ದೃಷ್ಟಿಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ ಕೈ ಜೋಡಿಸಿ
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ಈ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಎಲ್ಲ ಜಾತಿ, ಧರ್ಮ, ಪಂಥ, ಭಾಷೆಯ ಜನರನ್ನೂ ಭೇಟಿ ಮಾಡಿ, ಅವರ ನೋವುಗಳಿಗೆ ಸ್ಪಂದಿಸುತ್ತಿದ್ದಾರೆ. ದೇಶ ಸಂಕಟದಲ್ಲಿರುವ ಈ ಸಮಯದಲ್ಲಿ ನಾವೆಲ್ಲರೂ ಅವರ ಜೊತೆಗೆ ಹೆಜ್ಜೆ ಹಾಕಬೇಕಿದೆ. ಹೊಸ ನಾಡನ್ನು ಕಟ್ಟಬೇಕಿದೆ. ಈ ಮಹತ್ತರ ಕಾರ್ಯದಲ್ಲಿ ತಾವೆಲ್ಲರೂ ಭಾಗಿ ಆಗಬೇಕು. ಭಾರತದ ಭವಿಷ್ಯದ ನಾಯಕ ರಾಹುಲ್ ಗಾಂಧಿ ಅವರ ಜೊತೆಗೆ ಹೆಜ್ಜೆ ಹಾಕಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಮನವಿ ಮಾಡಿದ್ದಾರೆ.
ಹಿರಿಯೂರಿಗೆ ತಲುಪಲಿರುವ ಯಾತ್ರೆ
ಪಾದಯಾತ್ರೆ ಅಕ್ಟೋಬರ್ 10ರಂದು ಸಂಜೆ 4 ಗಂಟೆಗೆ ಹಿರಿಯೂರಿನ ತಾಹಾ ಪ್ಯಾಲೇಸ್ ಬಳಿಗೆ ಆಗಮಿಸಲಿದೆ. ಸಂಜೆ 7 ಗಂಟೆಗೆ ಬಾಲೆನಹಳ್ಳಿ -ಹರ್ತಿಕೋಟೆ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಮಂಗಳವಾರ ಅಕ್ಟೋಬರ್ 11ರಂದು ಬೆಳಗ್ಗೆ 6:30ರ ಸುಮಾರಿಗೆ ಹರ್ತಿಕೋಟೆ ಗ್ರಾಮದಿಂದ ಪಾದಯಾತ್ರೆ ಆರಂಭಗೊಂಡು ಬೆಳಗ್ಗೆ 11 ಗಂಟೆಗೆ ಹೋಟೆಲ್ ಚೇತನ್ ಹತ್ತಿರ ಬರಲಿದೆ. ಸಾಣಿಕೆರೆಯಲ್ಲಿ ಊಟ ಮತ್ತು ವಿಶ್ರಾಂತಿ ಪಡೆಯಲಾಗುತ್ತದೆ. ಸಂಜೆ 4 ಗಂಟೆಗೆ ಸಾಣಿಕೆರೆಯಿಂದ ಪಾದಯಾತ್ರೆ ಸಾಗಿ ಸಂಜೆ 7 ಗಂಟೆಗೆ ಎಸ್.ಆರ್.ಎಸ್ ಶಾಲೆ ಆವರಣ ಚಳ್ಳಕೆರೆ ಟೌನ್ನಲ್ಲಿ ತಂಗುತ್ತಾರೆ.
ಇನ್ನು ಅಕ್ಟೋಬರ್ 12, ಬುಧವಾರದಂದು ಬೆಳಗ್ಗೆ 6:30ಕ್ಕೆ ಎಸ್.ಆರ್.ಎಸ್ ಶಾಲೆ, ಚಳ್ಳಕೆರೆ ಟೌನ್ನಿಂದ ಪಾದಯಾತ್ರೆ ಆರಂಭಗೊಳ್ಳಿಲಿದ್ದು, ಬೆಳಗ್ಗೆ 11 ಗಂಟೆಗೆ ಗಿರಿಯಮ್ಮನಹಳ್ಳಿ ಗೇಟ್ ಬಳಿ ಊಟ ಮತ್ತು ವಿಶ್ರಾಂತಿಯನ್ನು ಪಡೆಯಲಿದ್ದಾರೆ. ಸಂಜೆ 4 ಗಂಟೆಗೆ ಗಿರಿಯಮ್ಮನಹಳ್ಳಿ ಗೇಟ್ನಿಂದ ಪಾದಯಾತ್ರೆ ಸಾಗಲಿದ್ದು, ಸಂಜೆ 7 ಗಂಟೆಗೆ ಹಿರೇಹಳ್ಳಿ ಟೋಲ್ ಪ್ಲಾಜಾ, ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಶಾಲೆ, ಹಿರೇಹಳ್ಳಿ, ಮೊಳಕಾಲ್ಮೂರು ಕ್ಷೇತ್ರದಲ್ಲಿ ತಂಗುತ್ತಾರೆ.
ಕೋನಸಾಗರದ ಹತ್ತಿರ ಊಟ ಮತ್ತು ವಿಶ್ರಾಂತಿ
ಅಕ್ಟೋಬರ್ 13 ಗುರುವಾರದಂದು ಬೆಳಗ್ಗೆ 6:30ಕ್ಕೆ ಬಿ.ಜಿ.ಕೆರೆ ಅಂಡರ್ಪಾಸ್, ಬೊಮ್ಮಗೊಂಡನಕೆರೆ ಇಲ್ಲಿಂದ ಪಾದಯಾತ್ರೆ ಆರಂಭಗೊಳ್ಳುತ್ತದೆ. ಬೆಳಗ್ಗೆ 11 ಗಂಟೆ ಕೋನಸಾಗರ ಗ್ರಾಮದ ಹತ್ತಿರ ಊಟ ಮತ್ತು ವಿಶ್ರಾಂತಿಯನ್ನು ಪಡೆಯಲಾಗುತ್ತದೆ. ಸಂಜೆ 4 ಗಂಟೆಗೆ ಕೋನಸಾಗರದಿಂದ ಪಾದಯಾತ್ರೆ ಸಾಗಿ ಸಂಜೆ 7 ಗಂಟೆಗೆ ಮೊಳಕಾಲ್ಮುರು ಕಾಂಗ್ರೆಸ್ ಕಛೇರಿಯವರೆಗೆ ಸಾಗಲಿದ್ದು, ನಂತರ ರಾಂಪುರ ಹತ್ತಿರ ತಂಗುತ್ತಾರೆ.
ಅಕ್ಟೋಬರ್ 14 ಶುಕ್ರವಾರದಂದು ಬೆಳಗ್ಗೆ 6:30ಕ್ಕೆ ರಾಂಪುರದಿಂದ ಪಾದಯಾತ್ರೆ ಆರಂಭಗೊಂಡು, ಬೆಳಗ್ಗೆ 11 ಗಂಟೆಗೆ ಕುಂಟುಮಾರಮ್ಮ ದೇವಸ್ಥಾನ, ಟೋಲ್ ಹತ್ತಿರ ತಲುಪಲಿದೆ. ನಂತರ ಆಂಧ್ರಪ್ರದೇಶದಲ್ಲಿ ಊಟ ಮತ್ತು ವಿಶ್ರಾಂತಿ ಪಡೆಯಲಾಗುತ್ತದೆ. ಸಂಜೆ 4 ಗಂಟೆಗೆ ಕುಂಟುಮಾರಮ್ಮ ದೇವಸ್ಥಾನದಿಂದ ಪಾದಯಾತ್ರೆ ಸಾಗಿ ಸಂಜೆ 7 ಗಂಟೆಗೆ ಹೆಚ್.ಪಿ ಪೆಟ್ರೋಲ್ ಪಂಪ್, ಓಬಳಾಪುರಂ ಗ್ರಾಮ, ಹಲಕುಂದಿ ಮಠವನ್ನು ತಲುಪಲಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ತಂಗಲಾಗುತ್ತದೆ ಎನ್ನುವ ಮಾಹಿತಿಯೊಂದ ಪಕ್ಷದ ಮೂಲಗಳಿಂದ ಹೊರಬಿದ್ದಿದೆ.
ದೇಶಕ್ಕೆ ಭೂತಾನ್ ಅಡಿಕೆ ಆಮದಿಗೆ ಆಂತಕ ವ್ಯಕ್ತಪಡಿಸಿದ ಕೋಟೆ ನಾಡಿನ ರೈತರು !