ಬೇಡ ಸಮುದಾಯಕ್ಕೂ ಹಬ್ಬಿತೇ ಒಳಪಂಗಡ ಬ್ರಹ್ಮಾಸ್ತ್ರ..?
ಮೊಳಕಾಲ್ಮೂರು, ಏಪ್ರಿಲ್ 13: ದಲಿತರಲ್ಲಿ ಎಡಗೈ ಮತ್ತು ಬಲಗೈ, ಸ್ಪರ್ಶ ದಲಿತ, ಅಸ್ಪರ್ಶ ದಲಿತರೆಂದು, ವೀರಶೈವ ಸಮುದಾಯದಲ್ಲಿ ಲಿಂಗಾಯತ, ಲಿಂಗಾಯತ ವೀರಶೈವ, ಜಂಗಮ, ಸಾದರ, ಬಣಜಿಗ, ಪಂಚಮಸಾಲಿ ಹೀಗೆ ನಾನಾ ಗುಂಪುಗಳಾಗಿ ವಿಭಜಿಸಿ ಮತದೋಚುತ್ತಿದ್ದ ರಾಜಕಾರಣಿಗಳ ಕಣ್ಣು ಈಗ ಬೇಡ ಜನಾಂಗದ ಮೇಲೆ ಬಿದ್ದಂತಿದೆ.
ಹೌದು, ಈವರೆಗೆ ಬೇಡ (ವಾಲ್ಮೀಕಿ) ಎಂದಷ್ಟೇ ಗುರುತಿಸಿಕೊಂಡು ರಾಜಕೀಯವಾಗಿ ಪ್ರಬಲರಾಗಿದ್ದ ಬೇಡರು ಈಗ ಮ್ಯಾಸ ಬೇಡ-ಊರ ಬೇಡ ಎಂದು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲಾರಂಭಿಸಿದ್ದಾರೆ. ಹೀಗೆ ಬೇಡ ಜನಾಂಗದ ನಡುವಿನ ಎರಡು ಗುಂಪುಗಳ ಸುದ್ದಿ ದೊಡ್ಡದಾಗಲು ಕಾರಣವಾಗಿರುವುದು ಮೊಳಕಾಲ್ಮೂರು ರಾಜಕೀಯ.
ಊರ ಬೇಡ ನಾಯಕರಾದ ಶ್ರೀರಾಮುಲು
ಬಿಜೆಪಿ ಯಾವಾಗ ಶ್ರೀರಾಮುಲು ಅವರನ್ನು ಮೊಳಕಾಲ್ಮೂರು ಅಭ್ಯರ್ಥಿಯಾಗಿ ಘೋಷಿಸಿತೋ, ಆಗ ಈ ಊರ ಬೇಡ-ಮ್ಯಾಸ ಬೇಡ ಕಲ್ಪನೆ ಮುನ್ನಲೆಗೆ ಬಂದಿದೆ. ಆಗಿರುವುದಿಷ್ಟೇ. ಶ್ರೀರಾಮುಲು ಊರ ಬೇಡ ಗುಂಪಿಗೆ ಸೇರಿದವರು. ಮೊಳಕಾಲ್ಮೂರಿನ ಹಾಲಿ ಶಾಸಕ ಎಸ್ ತಿಪ್ಪೇಸ್ವಾಮಿಯವರು ಮ್ಯಾಸ ಬೇಡ ಗುಂಪಿಗೆ ಸೇರಿದವರು. ತಿಪ್ಪೇಸ್ವಾಮಿ ಬೆಂಬಲಿಗರು ತಮ್ಮ ನಾಯಕನಿಗೆ ಬಿಜೆಪಿ ಟಿಕೇಟ್ ನಿರಾಕರಿಸಿರುವುದಕ್ಕೆ ಮ್ಯಾಸ ಬೇಡರಿಗೆ ಆಗಿರುವ ಅನ್ಯಾಯ ಎಂಬ ರೀತಿಯಲ್ಲಿ ಪ್ರತಿಬಿಂಬಿಸಲು ಹೊರಟಿದ್ದಾರೆ.

ಪರಿಣಾಮ ಬೇಡರು ಅಡ್ಡಡ್ಡವಾಗಿ ವಿಭಜನೆಗೊಂಡಿದ್ದಾರೆ. ಈವರೆಗೆ ದಲಿತ ನಾಯಕ ಎಂದು ಬಿಂಬಿತವಾಗಿದ್ದ ಶ್ರೀರಾಮುಲು ಅವರು ಊರ ಬೇಡ ನಾಯಕ ಎಂಬ ಹಣೆಪಟ್ಟಿ ಹೊತ್ತುಕೊಳ್ಳುವಂತಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ
ಒಳಪಂಗಡದ ರಾಜಕಾರಣ
ತಿಪ್ಪೇಸ್ವಾಮಿಯವರ ಬೆಂಬಲಿಗರು ತಮ್ಮ ನಾಯಕನಿಗೆ ಮ್ಯಾಸಬೇಡ ಕೋಟಾದಡಿಯಲ್ಲಿ ಟಿಕೆಟ್ ಕೊಡಬೇಕೆಂಬ ಆಗ್ರಹ ಮುಂದಿಡುತ್ತಿದ್ದಾರೆ. ಇದರೊಂದಿಗೆ ವಾಲ್ಮೀಕಿ ಜನಾಂಗದಲ್ಲೂ ಒಳಪಂಗಡ ರಾಜಕಾರಣದ ಬೆಂಕಿ ಹೊತ್ತಿಕೊಂಡಿದೆ. ಈ ಬೆಂಕಿಯ ಕೆನ್ನಾಲಗೆ ನೆರೆಯ ದಾವಣಗೆರೆ, ಚಿತ್ರದುರ್ಗಕ್ಕೂ ಹಬ್ಬಿದ್ದು ಎಲ್ಲಾ ರಾಜಕೀಯ ಪಕ್ಷಗಳಲ್ಲಿರುವ ವಾಲ್ಮೀಕಿ ನಾಯಕರು ಟಿಕೆಟ್ ಪಡೆಯಲು ಈ ಒಳಪಂಗಡದ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದ್ದಾರೆ.
ಜಾತಿ ವಿಮರ್ಶೆಗೆ ನಾಂದಿ
ಈ ಎರಡೂ ಜನಾಂಗಗಳ ಆಚರಣೆ ನಡುವೆ ಏನೂ ಭಿನ್ನತೆಯಿಲ್ಲ. ಊರಲ್ಲಿ ಬದುಕುವವರು ಊರ ಬೇಡರಾದರೆ, ಊರೂರು ತಿರುಗಿಕೊಂಡು, ಊರ ಹೊರಗೆ ನೆಲೆಕಂಡುಕೊಂಡವರು ಮ್ಯಾಸ ಬೇಡರು. ಆದರೆ ರಾಜಕಾರಣಿಗಳ ಟಿಕೆಟ್ ವ್ಯಾಮೋಹ ಇಡೀ ಸಮುದಾಯವನ್ನೇ ವಿಭಜಿಸಿದೆ. ಪರಿಶಿಷ್ಟ ಜನಾಂಗದ ನಾಯಕರ ಜಾತಿ ವಿಮರ್ಶೆಗೆ ನಾಂದಿ ಹಾಡಿದೆ.












Click it and Unblock the Notifications