ಚಿತ್ರದುರ್ಗದಲ್ಲಿ ಭಾರೀ ಮಳೆ; ಬಿರುಗಾಳಿಗೆ ನೆಲಕಚ್ಚಿದ ಬಾಳೆ ಗಿಡಗಳು
ಚಿತ್ರದುರ್ಗ, ಏಪ್ರಿಲ್ 9: ನಿನ್ನೆ ರಾಜ್ಯದ ಹಲವೆಡೆ ಗಾಳಿ, ಆಲಿಕಲ್ಲು ಮಳೆಯಾಗಿದೆ. ಇತ್ತ ಚಿತ್ರದುರ್ಗ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಜಿಲ್ಲೆಯ ಹಲವೆಡೆ ಬೆಳೆದಿದ್ದ ಬಾಳೆ ಬೆಳೆಗಳು ಸಂಪೂರ್ಣ ನಾಶವಾಗಿವೆ.
ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗ್ರಾಮದಲ್ಲಿ ಮೂರು ಎಕರೆಯಲ್ಲಿ ಬೆಳೆದ ಬಾಳೆ ಬಿರುಗಾಳಿಗೆ ಸಿಲುಕಿ ನಾಶವಾಗಿದೆ. ಫಸಲಿಗೆ ಬಂದಿದ್ದ ಸುಮಾರು 300ಕ್ಕೂ ಹೆಚ್ಚು ಬಾಳೆ ಗಿಡಗಳು ಧರೆಗುರುಳಿವೆ. ಇದರೊಂದಿಗೆ 20ಕ್ಕೂ ಹೆಚ್ಚು ಅಡಿಕೆ ಗಿಡಗಳು ಮುರಿದು ಬಿದ್ದಿವೆ. ಹೊಸದುರ್ಗ ತಾಲ್ಲೂಕಿನ ಜೋಡಿಶ್ರೀರಂಗಾಪುರದಲ್ಲಿ ಸುರಿದ ಮಳೆಗೆ ನಾಲ್ಕೈದು ಮನೆಗಳಲ್ಲಿ ನೀರು ನುಗ್ಗಿದೆ. ಇದೇ ತಾಲ್ಲೂಕಿನ ಮಾಳಿಗೆಹಟ್ಟಿ ರೈತ ನರಸಿಂಹಮೂರ್ತಿ ಹಾಗೂ ಪರಮೇಶಪ್ಪ ಎಂಬುವರು ಬೆಳೆದ ಬಾಳೆ ಗಿಡಗಳೂ ಗಾಳಿಗೆ ಮುರಿದು ಬಿದ್ದಿವೆ. ಹಿರಿಯೂರು ತಾಲ್ಲೂಕಿನ ಇದ್ದಲನಾಗೆಹಳ್ಳಿ ಸಮೀಪದ ಹೊರಕೇರಪ್ಪಯಲ್ಲೂ ಬಾಳೆ ಗಿಡಗಳು ಧರೆಗುರುಳಿವೆ.
ಮಸ್ಕಿ: ವರುಣನ ಆರ್ಭಟಕ್ಕೆ ಭತ್ತದ ಬೆಳೆ ನಾಶ, ಕಣ್ಣೀರಿಟ್ಟ ರೈತ
ಜಿಲ್ಲೆಯ ಹಲವೆಡೆ ಬೀಸಿದ ಬಿರುಗಾಳಿಗೆ ನೂರಾರು ಮರಗಳು ನೆಲ ಕಚ್ಚಿವೆ. ಮನೆಯ ಶೀಟುಗಳು ಹಾರಿ ಹೋಗಿವೆ. ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಬಳಿ ಬೇವಿನ ಮರ ಬಿದ್ದ ಪರಿಣಾಮ ವೀರಭದ್ರೇಶ್ವರ ದೇವಾಲಯದ ಕಂಬಕ್ಕೆ ಹಾನಿಯಾಗಿದೆ.
ಹಿರಿಯೂರು- ಹೊಸದುರ್ಗ ರಸ್ತೆ ಮಧ್ಯೆ ಸಣ್ಣ ಮರ ಬಿದ್ದಿದೆ. ಈಗಾಗಲೇ ಜಿಲ್ಲೆಯಲ್ಲಿ ಲಾಕ್ ಡೌನ್ ನಿಂದಾಗಿ ಟೊಮೆಟೊ, ಬೂದುಗುಂಬಳ ಕಾಯಿ, ಹಾಗಲಕಾಯಿ, ಖರ್ಬೂಜ, ಕಲ್ಲಂಗಡಿ ಬೆಳೆಗಳು ನಾಶವಾಗಿದ್ದು ರೈತರು ಕಂಗಾಲಾಗಿದ್ದಾರೆ. ಈಗ ಸುರಿದಿರುವ ಈ ಮಳೆ ರೈತರನ್ನು ಇನ್ನಷ್ಟು ಆತಂಕಕ್ಕೆ ದೂಡಿವೆ.