ಕವಾಡಿಗರಹಟ್ಟಿ ಪ್ರಕರಣ: ಬ್ರಾಹ್ಮಣ್ಯ ಹಿಂಸೆ ಮಾತ್ರವಲ್ಲ, ಬ್ರಾಹ್ಮಣ್ಯ ಭಯೋತ್ಪಾದನೆ - ನಟ ಚೇತನ್
ಚಿತ್ರದುರ್ಗ, ಆಗಸ್ಟ್ 05: ಚಿತ್ರದುರ್ಗ ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಒಂದು ಗರ್ಭಪಾತ ಸೇರಿ ಆರು ಮಂದಿ ಮೃತಪಟ್ಟಿದ್ದು, 180,ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಗೆ ಚಲನಚಿತ್ರ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಭಾನುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೆ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಇದೊಂದು ಬ್ರಾಹ್ಮಣ್ಯ ಹಿಂಸೆ ಮಾತ್ರವಲ್ಲ, ಬ್ರಾಹ್ಮಣ್ಯ ಭಯೋತ್ಪಾದನೆ ಕೂಡ (ಕೆಮಿಕಲ್ ವಾರ್ಫೇರ್) ಎಂದು ಟ್ವೀಟ್ ಮಾಡಿದ್ದಾರೆ.

ತನ್ನ ಫೇಸ್ಬುಕ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟ ಚೇತನ್ "ಚಿತ್ರದುರ್ಗ ಪಟ್ಟಣದಲ್ಲಿ ವಿಷಪೂರಿತ ನೀರು ಕುಡಿದ ಕಾರಣ (ಸ್ಥಳೀಯರ ಹೇಳಿಕೆಯಂತೆ) 5 ಜನರು ಸಾವನ್ನಪ್ಪಿದ್ದಾರೆ ಮತ್ತು 100ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮಾಲಿನ್ಯಕ್ಕೆ ಕಾರಣವೆಂದರೆ ಎಸ್ಸಿ ಪುರುಷ ಮತ್ತು ಸವರ್ಣ ಮಹಿಳೆ ನಡುವಿನ ಅಂತರ್ಜಾತಿ ವಿವಾಹ. ಇದು ನಿಜವಾಗಿದ್ದರೆ, ಇದೊಂದು ಬ್ರಾಹ್ಮಣ್ಯ ಹಿಂಸೆ ಮಾತ್ರವಲ್ಲ ಬ್ರಾಹ್ಮಣ್ಯ ಭಯೋತ್ಪಾದನೆ ಕೂಡ (ಕೆಮಿಕಲ್ ವಾರ್ಫೇರ್) ಎಂದಿದ್ದಾರೆ.
ನಾನು ನಾಳೆ ಚಿತ್ರದುರ್ಗಕ್ಕೆ ತೆರಳುತ್ತಿದ್ದು, ಸ್ಥಳದಲ್ಲೇ ತನಿಖೆ ನಡೆಸಿ ಶೀಘ್ರ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಕವಾಡಿಗರಹಟ್ಟಿ ಕಲುಷಿತ ನೀರು ಪ್ರಕರಣ, ಮೃತ ಕುಟುಂಬಕ್ಕೆ ಪರಿಹಾರ
ಚಿತ್ರದುರ್ಗ: ಚಿತ್ರದುರ್ಗ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಲು ಸರ್ಕಾರದಿಂದ ಹಣ ಬಿಡುಗಡೆ ಮಾಡಿದೆ.
ಜುಲೈ 31ರಂದು ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮೂರು ಮಂದಿ ಮೃತಪಟ್ಟಿದ್ದರು. ಈ ಮೂವರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ.
ಈ ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು ನೀಡಿದ ಸೂಚನೆಯ ಮೇರೆಗೆ ದುರಂತದಲ್ಲಿ ಮೃತರಾದ ರಘು , ಪ್ರವೀಣ್ ಹಾಗೂ ಮಂಜುಳಾ ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂಗಳಂತೆ ಪರಿಹಾರ ಮಂಜೂರು ಮಾಡಿ, ಜಿಲ್ಲಾಧಿಕಾರಿಗಳಿಗೆ ಒಟ್ಟು 15 ಲಕ್ಷ ರೂ ಬಿಡುಗಡೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications