ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ; ಚಿತ್ರದುರ್ಗದಲ್ಲಿ ಶೇ. 77.98 ಮತದಾನ
ಚಿತ್ರದುರ್ಗ, ಅಕ್ಟೋಬರ್ 28: ವಿಧಾನಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾನವು ಬುಧವಾರ ನಡೆದಿದ್ದು, ಚಿತ್ರದುರ್ಗದಲ್ಲಿ 77.98 % ಮತದಾನ ನಡೆದಿದೆ. ಜಿಲ್ಲೆಯ ಆರು ತಾಲೂಕುಗಳಲ್ಲಿ ಮತದಾನ ನಡೆದಿದ್ದು, ಸಂಜೆ 5 ಗಂಟೆಗೆ ಮುಕ್ತಾಯಗೊಂಡಿತು.
ನವೆಂಬರ್ 2ರಂದು ಚುನಾವಣೆಯ ಫಲಿತಾಂಶವು ಹೊರಬೀಳಲಿದೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿಯಿಂದ ಚಿದಾನಂದಗೌಡ, ಜೆಡಿಎಸ್ ನಿಂದ ಚೌಡರೆಡ್ಡಿ ತೂಪಲ್ಲಿ, ಕಾಂಗ್ರೆಸ್ ನಿಂದ ರಮೇಶ್ ಬಾಬು ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಹಿರಿಯೂರು ಶಾಸಕ ಡಿ.ಟಿ. ಶ್ರೀನಿವಾಸ್ ಸೇರಿದಂತೆ ಇತರೆ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಐದು ಜಿಲ್ಲೆಗಳ 38 ತಾಲೂಕುಗಳನ್ನೊಳಗೊಂಡ ವಿಧಾನ ಪರಿಷತ್ ಚುನಾವಣೆಯ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮಧ್ಯಾಹ್ನದ ಬಳಿಕ ಬಿರುಸಿನ ಮತ ಚಲಾವಣೆ ನಡೆಯಿತು.

ಹಿರಿಯೂರು ಶೇ 78.85 ಮತದಾನ, ಚಳ್ಳಕೆರೆ ಶೇ 73.92, ಮೊಳಕಾಲ್ಮೂರು ಶೇ 85.87, ಹೊಳಲ್ಕೆರೆ ಶೇ 87.98, ಹೊಸದುರ್ಗ ಶೇ 84.95, ಚಿತ್ರದುರ್ಗ ಶೇ 72.36 ಮತದಾನವಾಗಿದೆ. ಚಿತ್ರದುರ್ಗದಲ್ಲಿ ಒಟ್ಟು 21,019 ಪದವೀಧರ ಮತಗಳಿದ್ದು, ಅದರಲ್ಲಿ 16381 ಮತಗಳು ಚಲಾವಣೆಗೊಂಡಿವೆ.
ಹಿರಿಯೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಮೇಲುಗೈ: ಬಿಜೆಪಿಗೆ ಸಡ್ಡು ಹೊಡೆದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿರಿಯೂರು ಶಾಸಕಿ ಪೂರ್ಣಿಮಾ ಅವರ ಪತಿ ಡಿ.ಟಿ. ಶ್ರೀನಿವಾಸ್ ನವರು ಹಿರಿಯೂರಿನಲ್ಲಿ ಹೆಚ್ಚು ಮತ ಗಳಿಸುವ ನಿರೀಕ್ಷೆ ವ್ಯಕ್ತವಾಗಿದೆ. ಮತದಾನದಲ್ಲಿ ಐದು ಜಿಲ್ಲೆಗಳಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅವರಿಗೇ ಗೆಲುವಿನ ಸಾಧ್ಯತೆ ಇದೆ ಎನ್ನಲಾಗಿದೆ. ಬಂಡಾಯ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.












Click it and Unblock the Notifications