ಟಿಪ್ಪು ಕಳ್ಳ, ಕನ್ನಡ ವಿರೋಧಿ ಎಂದರೆ ಸಿದ್ದರಾಮಯ್ಯ ಎದೆಬಡಿದುಕೊಳ್ಳುವುದೇಕೆ?: ಸಿಟಿ ರವಿ
ಚಿಕ್ಕಮಗಳೂರು, ಮೇ 31 : "ಟಿಪ್ಪು, ಬಾಬರ್, ಘಜ್ನಿ-ಗೋರಿ, ಮೊಘಲ್ರನ್ನು ಟೀಕೆ ಮಾಡಿದರೆ ಸಿದ್ದರಾಮಯ್ಯ ಏಕೆ ಎದೆ ಬಡಿದುಕೊಳ್ಳುವರು?. ಇವರಿಗೆ ಉರಿ ಹತ್ತಿದಂತೆ ಏಕೆ ಆಡಬೇಕು?" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ. ಟಿ. ರವಿ ಆರ್ಎಸ್ಎಸ್ ಟೀಕಿಸಿದ್ದ ವಿರೋಧ ಪಕ್ಷದ ನಾಯಕನಿಗೆ ತಿರುಗೇಟು ನೀಡಿದರು.
"ಆರ್ಎಸ್ಎಸ್ ಬಗ್ಗೆ ಮಾತನಾಡಿದರೇ ಬಿಜೆಪಿಯವರು ಏಕೆ ಎದೆಬಡಿಕೊಳ್ಳುತ್ತಾರೆಂಬ" ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಅವರು, "ಆರ್ಎಸ್ಎಎಸ್ ಮತ್ತು ನಮಗೂ ವೈಚಾರಿಕ ಸಂಬಂಧವಿದೆ. ಆರ್ಎಸ್ಎಸ್ನಿಂದ ಪ್ರೇರಣೆಯಾಗಿದ್ದೇವೆ. ಕಾಂಗ್ರೆಸ್ನವರಿಗೆ ಟಿಪ್ಪು, ಬಾಬರ್, ಔರಂಗಜೇಬ್, ಘಜ್ನಿ ಜೊತೆ ಯಾವ ಸಂಬಂಧವಿದೆ? ಎಂದು ಹೇಳಲಿ. ಟಿಪ್ಪು ಕಳ್ಳ, ಕನ್ನಡ ವಿರೋಧಿ, ಅತ್ಯಾಚಾರಿ ಎಂದರೇ, ಇವರು ಯಾಕೆ ಮುಖ ಒರೆಸಿಕೊಳ್ಳುತ್ತಾರೆ. ಇವರಿಗೂ ಟಿಪ್ಪು, ಔರಂಗಜೇಬ್ನಿಗೂ ಏನು ಸಂಬಂಧ?" ಎಂದು ಪ್ರಶ್ನಿಸಿದರು.
ರಾಜ್ಯ ಸಭೆಗೆ ಮೂರನೇ ಅಭ್ಯರ್ಥಿ ಆಯ್ಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, "ಹೆಚ್ಚುವರಿ 32 ಮತಗಳಿವೆ ಚುನಾವಣೆ ನಂಬರ್ ಗೇಮ್ ಬರಬಹುದು, ಬರದೇ ಇರಬಹುದು ನಾವು ನಮ್ಮನ್ನು ಪರೀಕ್ಷೆ ಮಾಡಿಕೊಳ್ಳೋಕೆ ವಿರೋಧಿಗಳು ಮಾತುಕೊಟ್ಟಂತೆ ನಡೆದುಕೊಳ್ಳುತ್ತಾರಾ? ಎನ್ನುವುದು ತಿಳಿದುಕೊಳ್ಳಲು ಇದೊಂದು ಪರೀಕ್ಷೆಯಾಗಿದೆ . ರಣನೀತಿಯನ್ನು ಮಾಧ್ಯಮದಲ್ಲಿ ಚರ್ಚೆ ಮಾಡೋಕೆ ಸಾಧ್ಯವಿಲ್ಲ. ಫಲಿತಾಂಶ ಬಂದ ನಂತರ ಯಾರು ಅಡ್ಡ ಮತ ಹಾಕಿದ್ದಾರೆ. ಉದ್ಧ ಮತ ಹಾಕಿದ್ದಾರೆ ಗೊತ್ತಾಗುತ್ತದೆ. ನಮಗೂ 32 ಮತಗಳಿವೆ. ಜೆಡಿಎಸ್ಗೂ ಅಷ್ಟೇ ಮತಗಳಿವೆ. ಕಾಂಗ್ರೆಸ್ ಹೆಚ್ಚುವರಿ ಮತ ಏನು ಮಾಡುತ್ತಾರೆ ಗೊತ್ತಿಲ್ಲ. ಚುನಾವಣೆ ಅಂದ ಮೇಲೆ ತಂತ್ರಗಾರಿಕೆ ಇದ್ದೇ ಇರುತ್ತದೆ" ಎಂದು ಸಿ. ಟಿ. ರವಿ ಹೇಳಿದರು.

ಪ್ರತಿಪಕ್ಷಣಗಳಿಂದ ಗೊಂದಲ
"ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಪ್ರತಿಪಕ್ಷಗಳು ಮತ್ತು ಇತರರು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ" ಎಂದು ಸಮಾಜ ಕಲ್ಯಾಣ ಹಾಗೂ ಹಿಂದು ಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಬ್ರಹ್ಮಶ್ರೀ ನಾರಾಯಣಗುರುಗಳ ಮತ್ತು ಭಗತ್ ಸಿಂಗ್ ಪಠ್ಯದಲ್ಲಿ ಸೇರ್ಪಡೆ ಸಂಬಂಧ ಸ್ಪಷ್ಠೀಕರಣ ನೀಡಲಾಗಿದೆ. ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಅವರು ಭೇಟಿಮಾಡಿ ಮನವರಿಕೆ ಮಾಡಿಕೊಟ್ಟಿದ್ದಾರೆ" ಎಂದರು.

ಚಕ್ರತಿರ್ಥ ಒಬ್ಬರೇ ಇಲ್ಲ
"ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಏನೇನು ಅಪಾದನೆ ಬಂದಿದೆ ಅದೆಲ್ಲದಕ್ಕೂ ಉತ್ತರ ನೀಡಲಾಗಿದೆ. ಯಾವುದೇ ಗೊಂದಲಗಳಿಲ್ಲದೆ ಸರ್ಕಾರ ಎಲ್ಲವನ್ನೂ ಬಗೆಹರಿಸಲಿದೆ ಎಂದು ತಿಳಿಸಿದ ಅವರು, ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರ ಸಂಬಂಧ ವ್ಯಕ್ತಿ ಆಧಾರದ ಮೇಲೆ ನೋಡದೆ ವಿಷಯ ಆಧಾರದ ಮೇಲೆ ಮಾತನಾಡಬೇಕು. ರೋಹಿತ್ ಚಕ್ರತೀರ್ಥ ಸೇರಿದಂತೆ ಅನೇಕರು ಸಮಿತಿಯಲ್ಲಿದ್ದಾರೆ. ಹಿಂದಿನ ಸರ್ಕಾರ ಅವರಿಗೆ ಬೇಕಾದವರನ್ನು ಸೇರಿಸಿ ಸಮಿತಿ ರಚಿಸಿತ್ತು. ಪಠ್ಯ ಪರಿಷ್ಕರಣೆ ಯಾರು ಮಾಡಿದ್ದಾರೆ? ಎನ್ನುವು ದಕ್ಕಿಂತ ವಿಷಯಾಧಾರಿತವಾಗಿ ಮಾತನಾಡಬೇಕು" ಎಂದು ಸಚಿವರು ಹೇಳಿದರು.

ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ
"ಮಸೀದಿಗಳಲ್ಲಿ ಹಿಂದೂ ದೇವಾಲಯ ಕುರುಹು ಸಂಬಂಧ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಮತೀಯ ಕಾರಣಕ್ಕೆ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿ ಮಸೀದಿಗಳನ್ನು ಕಟ್ಟಲಾಗಿದೆ. ನಂತರ ಕಾಲಘಟ್ಟದಲ್ಲಿ ದೇವಾಲಯ ಕುರುಹುಗಳು ಕಾಣಿಸುತ್ತಿವೆ ಎನ್ನುವ ಕಾರಣಕ್ಕೆ ಹಿಂದೂ ದೇವಾಲಯಗಳನ್ನು ಬಿಟ್ಟುಕೊಡಬೇಕು ಎನ್ನುವುದು ಹಿಂದೂಗಳ ಭಾವನೆ. ಸತ್ಯಶೋಧನೆ ಸಂಬಂಧ ಸರ್ಕಾರ ಮತ್ತು ನ್ಯಾಯಾಲಯ ತೀರ್ಮಾನ ಕೈಗೊಳ್ಳುತ್ತದೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ 34 ಸಾವಿರ ದೇವಸ್ಥಾನಗಳು ಇದ್ದು, ನಿತ್ಯಪೂಜೆ ದೇವಸ್ಥಾನ ಅಭಿವೃದ್ಧಿ ಸರ್ಕಾರ ಅನುದಾನ ನೀಡುತ್ತಿದೆ. ಕೆಲವು ದೇವಸ್ಥಾನಗಳು ಶಿಥಿಲ ವಸ್ಥೆಯಲ್ಲಿದ್ದು ಹಂತ ಹಂತವಾಗಿ ದೇವಸ್ಥಾನಗಳ ಅಭಿವೃದ್ಧಿಗೆ ಸರ್ಕಾರ ಕ್ರಮವಹಿಸಲಿದೆ" ಎಂದರು.

ಆರ್ಎಸ್ಎಸ್ ಬಗ್ಗೆ ಲಘುವಾಗಿ ಮಾತನಾಡಬಾರದು
ಆರ್ಎಸ್ಎಸ್ ಬಗ್ಗೆ ಮಾತನಾಡಿದರೇ ಬಿಜೆಪಿಯವರು ಎದೆ ಬಿಡಿದುಕೊಳ್ಳುತ್ತಾರೆಂಬ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, "ಆರ್ಎಸ್ಸ್ ಬಗ್ಗೆ ಸಿದ್ಧರಾಮಯ್ಯ ಅವರು ಲಘುವಾಗಿ ಮಾತನಾಡಬಾರದು ಅವರ ಪಕ್ಷದ ಹಿರಿಯರೇ ಆರ್ಎಸ್ಎಸ್ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ. ಆರ್ಎಸ್ಎಸ್ ರಾಷ್ಟ್ರಪ್ರೇಮದ ಬಗ್ಗೆ ಸಿದ್ಧರಾಮಯ್ಯ ಅವರು ಅರ್ಥ ಮಾಡಿಕೊಳ್ಳಬೇಕು" ಎಂದರು.












Click it and Unblock the Notifications