ನಿಖಿಲ್ ಮದುವೆ, ಪ್ರತ್ಯಂಗಿರ ಯಾಗ: ಏಕಾಗಿ ಎಚ್ ಡಿಕೆ ಶೃಂಗೇರಿ ಭೇಟಿ?
Recommended Video
ಶೃಂಗೇರಿ (ಚಿಕ್ಕಮಗಳೂರು ಜಿಲ್ಲೆ), ಡಿಸೆಂಬರ್ 6: ತಮ್ಮ ಮಗನ ಮದುವೆ ವಿಚಾರದ ಬಗ್ಗೆ ಅಂತೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರದಂದು ಶ್ರಂಗೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ್ದಾರೆ. ನಿಖಿಲ್ ಮದುವೆ ವಿಚಾರದ ಬಗ್ಗೆ ಕೂಡ ಚರ್ಚೆ ಮಾಡುವ ಉದ್ದೇಶದಿಂದ ಬಂದಿದ್ದೇನೆ ಎಂದು ಹೇಳಿದ್ದಾರೆ.
ಯಾವುದೇ ಒಳ್ಳೆ ಕಾರ್ಯಕ್ಕೆ ಮುಂಚೆ ಶೃಂಗೇರಿ ಜಗದ್ಗುರುಗಳ ಆಶೀರ್ವಾದ ಹಾಗೂ ಮಾರ್ಗದರ್ಶನವನ್ನು ಪಡೆಯುತ್ತಾ ಬಂದಿದ್ದೇವೆ. ಅದೇ ರೀತಿ ನಿಖಿಲ್ ಮದುವೆ ವಿಚಾರವನ್ನು ಚರ್ಚೆ ಮಾಡಲು ಇಲ್ಲಿಗೆ ಬಂದಿದ್ದೇನೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಅವರು ಉತ್ತರ ನೀಡಿದ್ದಾರೆ.
ಮಾಟ-ಮಂತ್ರ ಕುಮಾರಸ್ವಾಮಿ ಮೇಲೆ ಪರಿಣಾಮ ಬೀರಲ್ಲ: ರೇವಣ್ಣ
ಶೃಂಗೇರಿ ಕ್ಷೇತ್ರಕ್ಕೆ ಬಂದು, ಶಾರದಾಂಬೆ ದರ್ಶನ ಪಡೆದು, ಗುರುಗಳ ಆಶೀರ್ವಾದ ಪಡೆದಾಗ ಹಲವಾರು ರೀತಿಯ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ ಎಂದಿರುವ ಕುಮಾರಸ್ವಾಮಿ, ನಾವು ಕದ್ದು ಮುಚ್ಚಿ ವಾಮಾಚಾರ, ಯಾಗ ಮಾಡಿಸುವ ಪ್ರಶ್ನೆ ಇಲ್ಲ. ದೇವರನ್ನು ನಂಬಿದ್ದೇವೆ, ದೇವರ ಪ್ರಾರ್ಥನೆ ಮಾಡುತ್ತೇವೆ. ಬೆಳಗಾವಿಯಲ್ಲಿ ಅಧಿವೇಶನ ಸುಸೂತ್ರವಾಗಿ ನಡೆಯಬೇಕು. ಹಾಗಾಗಿ ತಾಯಿಯ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಸೇರಿಸಿದ್ದಾರೆ.
ಮದುವೆ ವಿಚಾರವನ್ನೂ ಮಾತನಾಡಲು ಬಂದಿದ್ದೇನೆ
ಈ ಹಿಂದೆ ನಿಖಿಲ್ ಕುಮಾರಸ್ವಾಮಿ ಅವರಿಗೆ ನಿಶ್ಚಿತಾರ್ಥ ನಡೆದು, ಅದು ಮುರಿದುಬಿದ್ದಿತ್ತು. ಆ ನಂತರ ಆಂಧ್ರದ ಉದ್ಯಮಿಯೊಬ್ಬರ ಮಗಳ ಜತೆಗೆ ಮದುವೆ ನಿಶ್ಚಯವಾಗಿದೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತು. ಆದರೆ ನಂತರ ಕುಟುಂಬದ ಮೂಲಗಳು ಆ ವರದಿಯನ್ನು ತಳ್ಳಿಹಾಕಿದ್ದವು. ಇದೇ ಮೊದಲ ಬಾರಿಗೆ ಮಾಧ್ಯಮಗಳ ಎದುರು ತಮ್ಮ ಮಗನ ಮದುವೆ ವಿಚಾರವನ್ನೂ ಮಾತನಾಡಲು ಬಂದಿದ್ದೇವೆ ಎಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಪ್ರತ್ಯಂಗಿರ ಯಾಗಕ್ಕಾಗಿ ಕುಮಾರಸ್ವಾಮಿ ಸಂಕಲ್ಪ
ಶೃಂಗೇರಿ ಶಾರದೆ ಬಳಿ 10 ನಿಮಿಷದವರೆಗೂ ವಿಶೇಷ ಪ್ರಾರ್ಥನೆ ಸಲ್ಲಿಸಿದ ಕುಮಾರಸ್ವಾಮಿ, ಯಾಗದ ಸಂಕಲ್ಪ ಮಾಡಿದರು. ಆರೋಗ್ಯ ವೃದ್ಧಿ, ಶತ್ರು ನಾಶಕ್ಕಾಗಿ ಪ್ರತ್ಯಂಗಿರ ಯಾಗ ಮಾಡಿಸುತ್ತಿದ್ದು, ಶುಕ್ರವಾರದಂದು ಯಾಗದ ಪೂರ್ಣಾಹುತಿವರೆಗೂ ವ್ರತದಲ್ಲಿ ಇರಲಿದ್ದಾರೆ ಕುಮಾರಸ್ವಾಮಿ. ದೇವಸ್ಥಾನದ ಆವರಣದಲ್ಲಿರುವ ಯಾಗಶಾಲೆ ಮಂಟಪದಲ್ಲಿ ಯಾಗ ನಡೆಯುತ್ತಿದ್ದು, ಬೆಳಗ್ಗೆ 5 ಗಂಟೆಯಿಂದ ಯಾಗದ ಪೂರ್ಣಾಹುತಿ ನಡೆಯುತ್ತದೆ. 22 ದಿನಗಳ ಹಿಂದೆಯೇ ಸಹೋದರ ರೇವಣ್ಣಯಿಂದ ಯಾಗಕ್ಕೆ ಚಾಲನೆ.
ಆದರೆ ಗುರುವಾರ ಸಹೋದರ ಎಚ್.ಡಿ.ರೇವಣ್ಣ ಬಂದಿರಲಿಲ್ಲ. ಪ್ರತಿ ಬಾರಿ ಸಿಎಂ ಜತೆ ಒಟ್ಟಿಗೆ ಆಗಮಿಸುತ್ತಿದ್ದರು ಸಹೋದರ ರೇವಣ್ಣ.
ಶೃಂಗೇರಿ ಜಗದ್ಗುರುಗಳ ಮಾರ್ಗದರ್ಶನ
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಯಾವುದೇ ಕಾರ್ಯಕ್ರಮದ ಆರಂಭಕ್ಕೆ ಮುನ್ನ ಶೃಂಗೇರಿ ಜಗದ್ಗುರುಗಳ ಬಳಿ ಬಂದು ಮಾರ್ಗದರ್ಶನ ಪಡೆಯುತ್ತಾರೆ. ಆ ನಂತರದ ಮುಹೂರ್ತ ಇತ್ಯಾದಿ ವಿಚಾರಗಳಿಗೆ ಆದಿಚುಂಚನಗಿರಿ ಮಠದಲ್ಲಿ ನಿಷ್ಕರ್ಷೆ ಮಾಡಿದ ನಂತರವೇ ಮುಂದುವರಿಯಲಾಗುತ್ತದೆ ಎನ್ನುತ್ತವೆ ಆಪ್ತ ಮೂಲಗಳು.
ಶಾರದಾ ಮಾತೆ ಅನುಗ್ರಹ ಇದೆ
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಕೇರಳಕ್ಕೆ ತೆರಳಿದ್ದು, ಅಲ್ಲಿ ರಾಜ್ಯ ಸರಕಾರದ ವಿರುದ್ಧ ವಾಮಾಚಾರ ಮಾಡಿಸಲು ಹೋಗಿದ್ದಾರೆ ಎಂಬ ವದಂತಿ ಇದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಎಚ್.ಡಿ.ರೇವಣ್ಣ, ನಮ್ಮ ಕುಟುಂಬಕ್ಕೆ ಹಾಗೂ ಕುಮಾರಸ್ವಾಮಿ ಬೆನ್ನಿಗೆ ಶಾರದಾ ಮಾತೆ ಅನುಗ್ರಹ ಇದೆ ಹಾಸನದಲ್ಲಿ ಹೇಳಿದ್ದಾರೆ.
ಭಿನ್ನಮತೀಯರ ಧ್ವನಿ ಕೇಳಿಬರುತ್ತಿದೆ
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಸುದ್ದಿ ಇದೆ. ಅದಕ್ಕೆ ಪೂರಕ ಎಂಬಂತೆ ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನ ಸಿಗದವರ ಭಿನ್ನಮತ ಉದ್ಭವಿಸಿದೆ. ವಿವಿಧ ಮುಖಂಡರು ನಾನಾ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶೃಂಗೇರಿ ದೇವಸ್ಥಾನ ಹಾಗೂ ಸ್ವಾಮೀಜಿಯನ್ನು ಭೇಟಿ ಮಾಡಿದ್ದಾರೆ.