ಚಿಕ್ಕಮಗಳೂರು: 14 ವರ್ಷದ ಬಳಿಕ ತುಂಬಿದ ವಿಷ್ಣು ಸಮುದ್ರ ಕೆರೆ
ಚಿಕ್ಕಮಗಳೂರು, ಸೆಪ್ಟೆಂಬರ್, 11: ಜಿಲ್ಲೆಯ ಅತಿದೊಡ್ಡ ಕೆರೆಯಾದ ಹೇಮಗಿರಿಯ ವಿಷ್ಣು ಸಮುದ್ರಕೆರೆ ಕೋಡಿ ಬಿದ್ದಿದೆ. ಸತತ 14 ವರ್ಷಗಳ ನಂತರ ಕೆರೆ ಮೈದುಂಬಿ ಹರಿಯುತ್ತಿರುವುದರಿಂದ ರೈತರ ಮುಖದಲ್ಲಿ ಸಂತೋಷ ತರಿಸಿದೆ. ಕೆರೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನಸಾಗರ ಹರಿದು ಬರುತ್ತಿದೆ.
ನಂಜುಂಡಪ್ಪನವರ ವರದಿಯ ಪ್ರಕಾರ ಸತತ ಬರದ ದವಡೆಗೆ ಸಿಲುಕುತ್ತಿದ್ದ ಕಡೂರು ತಾಲೂಕು, ಈ ಬಾರಿ ವರುಣನ ಕೃಪೆಯಿಂದ ಬಹುತೇಕ ಕೆರೆಕಟ್ಟೆಗಳು ಉಕ್ಕಿಹರಿಯುತ್ತಿವೆ. ಸಮೃದ್ಧ ಮಳೆಯಿಂದಾಗಿ ಅಂತರ್ಜಲ ಅಭಿವೃದ್ದಿಗೆ ವರದಾನ ಆಗಿದೆ. ಕಳೆದ 2008-09ರ ಆಸುಪಾಸಿನಲ್ಲಿ ವಿಷ್ಣು ಸಮುದ್ರ ಕೆರೆಯು ತುಂಬಿ ಕೋಡಿ ಹರಿದಿರುವುದು ಬಿಟ್ಟರೆ, ನಂತರದಲ್ಲಿ ಕೋಡಿ ಬಿದ್ದ ಉದಾಹರಣೆಯೇ ಇಲ್ಲ.
Recommended Video
ಚಿಕ್ಕಮಗಳೂರಿನಲ್ಲಿ ನಿಲ್ಲದ ವರುಣನ ಅಟ್ಟಹಾಸ; ಜಿಲ್ಲೆಯ ಮಳೆ ವಿವರ ಇಲ್ಲಿದೆ
ಇದೀಗ ಕಡೂರಿನಲ್ಲಿ ಮಳೆರಾಯ ಆರ್ಭಟಿಸಿದ್ದಾನೆ. ವಿಷ್ಣುಸಮುದ್ರ ಕೆರೆ ಕೋಡಿ ಬಿದ್ದಿರುವುದರಿಂದ ತಾಲೂಕಿನ ಕಸಬಾ, ಸಿಂಗಟಗೆರೆ, ಯಗಟಿ ಮತ್ತು ಪಂಚನಹಳ್ಳಿ ಹೋಬಳಿಗಳ ಅಚ್ಚುಕಟ್ಟು ಪ್ರದೇಶಗಳಿಗೆ ಆಸರೆ ಆದಂತಾಗಿದೆ. ತಾಲೂಕಿನ ಯಗಟಿ, ಮಲ್ಲಾಘಟ್ಟ, ಚಟ್ನಳ್ಳಿ ಕೆರೆಗಳಿಗೆ ನೀರುಣಿಸುವ ವಿಷ್ಣು ಸಮುದ್ರ ಕೆರೆಯು 554 ಹೆಕ್ಟೇರ್ ಪ್ರದೇಶದ ವಿಸ್ತೀರ್ಣದಲ್ಲಿ ತನ್ನ ಕಬಂದಬಾಹುವಿನಂತೆ ಚಾಚಿಕೊಂಡಿದೆ.
ಇನ್ನು ಅಯ್ಯನಕೆರೆ ಮತ್ತು ಮದಗದ ಕೆರೆಗಳ ವಿಸ್ತೀರ್ಣದ ಎರಡು ಪಟ್ಟು ಹೆಚ್ಚಾಗಿರುವ ವಿಷ್ಣುಸಮುದ್ರ ಕೆರೆಯ ಕೋಡಿ ಬಿದ್ದ ಸಂಗತಿ ತಿಳಿಯುತ್ತಿದ್ದಂತೆ, ಸುತ್ತಮುತ್ತಲಿನ ಗ್ರಾಮಸ್ಥರು ಕೆರೆಯ ಕೋಡಿ ಹರಿಯುತ್ತಿರುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಧಾವಿಸುತ್ತಿದ್ದ ದೃಶ್ಯ ಕಂಡು ಬಂದಿದೆ.
ಹೇಮಗಿರಿ ಪ್ರದೇಶ ನಿರ್ಮಾಣ ಆಗಿದ್ದು ಹೇಗೆ?; ಹೇಮಗಿರಿಯ ಪ್ರದೇಶವು ಈ ಹಿಂದೆ ಪಿರಿಯಾಗ್ರಹ ಎಂಬ ಹೆಸರಿನಡಿ ನಿರ್ಮಾಣವಾಗಿತ್ತು. ಹೊಯ್ಸಳರ ದೊರೆ ವಿಷ್ಣುವರ್ಧನನು ಕ್ರಿಸ್ತಶಕ 1181ರ ಶಾಸನದ ಪ್ರಕಾರ ಕೆರೆಯನ್ನು ನಿರ್ಮಿಸಿದ್ದಾನೆ ಎಂದು ಹೇಳಲಾಗಿದೆ. ತದನಂತರದಲ್ಲಿ ಕ್ರಿಸ್ತ ಶಕ 1259ರ ಶಾಸನದ ಪ್ರಕಾರ ಮಹಾವಡ್ಡಬೆವಹಾರಿ ಸೋವಾಸಿ ಮಾಧವಭಟ್ಟಯ್ಯನ ಮಗ ಅಲ್ಲಾಳ ದೇವನು, ಶ್ರೀಮದ ನಾದಿಯ ಅಗ್ರಹಾರವಾದ ವಿಷ್ಣುಸಮುದ್ರವೆಂಬ ಕೆರೆ ಸಂತೆಯ ಕೆರೆಯ ಧರ್ಮಕ್ಕೆಂದು ಹಣವನ್ನು ದಾನ ನೀಡಿರುವುದನ್ನು ತಿಳಿಸಿದೆ.
ಈ ಹಣಕ್ಕೆ ಬಂದ ಬಡ್ಡಿಯಿಂದ ಪ್ರತಿ ವರ್ಷ 30 ಗದ್ಯಾಣದಲ್ಲಿ ಆ ಕೆರೆಯ ತೂಬನ್ನು ಸರಿಪಡಿಸುತ್ತಾ, ಮಹಾಜನರು ಸಧರ್ಮವನ್ನು ನಡಸುವರೆಂದು ಶಾಸನ ಉಲ್ಲೇಖಿಸಿದೆ. ಕೆರೆಯ ಒಂದು ಭಾಗದಲ್ಲಿ ಕೆರೆಸಂತೆ ಗ್ರಾಮ, ಮತ್ತೊಂದು ಭಾಗದಲ್ಲಿ ಹೇಮಗಿರಿ ಗ್ರಾಮ ಇದೆ. ಇಲ್ಲಿನ ಲಕ್ಚ್ಮೀ ಜನಾರ್ಧನ, ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಗಳು ಪ್ರಖ್ಯಾತಿ ಪಡೆದಿವೆ. ಈ ಕೆರೆಗೆ ದೇವನೂರು ಕೆರೆ ತುಂಬಿದರೆ ಅಲ್ಲಿನ ಹೆಚ್ಚುವರಿ ನೀರು, ದುದ್ದ, ಹಾರನಹಳ್ಳಿ ಕಡೆ ಮಳೆ ಹೆಚ್ಚಾದರೆ ಅಲ್ಲಿಂದಲೂ ಸಹ ನೀರು ಬರುತ್ತದೆ.
ಗದ್ಯಾನಾಣ್ಯಗಳ ಬಡ್ಡಿ ಹಣದಲ್ಲಿ ಕೆರೆಗೆ ತೂಬನ್ನು ನಿರ್ಮಿಸಲಾಗಿತ್ತು ಎಂದು ಪೂರ್ವಜರು ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ರಾಜ್ಯದ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ವಿಷ್ಣುಸಮುದ್ರ, 14 ವರ್ಷಗಳ ನಂತರ ತುಂಬಿ ಕೋಡಿ ಹರಿಯುತ್ತಿದ್ದು, ಈ ಭಾಗದ ಜನರಲ್ಲಿ ಸತೋಷ ತರಿಸಿದೆ. ಕೆರೆಯ ಸುತ್ತಮುತ್ತಲಿನ ಗ್ರಾಮಗಳಾದ ಲಿಂಗ್ಲಾಪುರ, ಸಂತೆಕೆರೆಹಳ್ಳಿ, ಮಲ್ಲಪ್ಪನಹಳ್ಳಿ ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿದ್ದು, ತುಂಬಾ ನಷ್ಟ ಉಂಟಾಗುತ್ತಲೇ ಇರುತ್ತದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಕೆರೆಯನ್ನು ಪ್ರವಾಸಿತಾಣವಾಗಿಸಲು ಪ್ರಯತ್ನ ನಡೆಸುವಂತಾಗಲಿ ಎನ್ನುವುದು ಅಲ್ಲಿನ ಸ್ಥಳೀಯರ ಅಭಿಪ್ರಾಯ ಆಗಿದೆ.
ಮಳೆರಾಯನ ಆರ್ಭಟಕ್ಕೆ ತತ್ತರಿಸಿದ ಕಾಫಿನಾಡು; ಇನ್ನು ಶೃಂಗೇರಿ, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ತರೀಕೆರೆ, ಕಡೂರು ಭಾಗಗಳಲ್ಲಿಯೂ ಮಳೆರಾಯ ಆರ್ಭಟಿಸಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಸುತ್ತಮುತ್ತ ಮೋಡ ಕವಿದ ವಾತವರಣ ನಿರ್ಮಾಣ ಆಗಿದೆ. ಅಬ್ಬರಿಸುತ್ತಿರುವ ಮಳೆಗೆ ಜನರು ಬೆಚ್ಚಿ ಬಿದ್ದಿದ್ದು, ಜನರು ಮಳೆಯನ್ನು ನಿಲ್ಲಿಸುವಂತೆ ದೇವರ ಮೊರೆ ಹೋಗುತ್ತಿದ್ದಾರೆ. ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಅನ್ನದಾತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.