ಉಡುಪಿ-ಚಿಕ್ಕಮಗಳೂರು: ಕಾಂಗ್ರೆಸ್ ಟಿಕೆಟ್ ಬಗ್ಗೆ ಜೋರಾಯ್ತು ಅಭಿಯಾನ!
ಚಿಕ್ಕಮಗಳೂರು, ಮಾರ್ಚ್ 10: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಟಿಕೆಟ್ಗಾಗಿ ಭಾರೀ ಪೈಪೋಟಿ ನಡೆದಿದೆ. ಕ್ಷೇತ್ರದ ಹಾಲಿ ಸಂಸದರು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ.
2024ರ ಲೋಕಸಭೆ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಅಭ್ಯರ್ಥಿ ಯಾರು? ಎಂಬುದು ಇನ್ನೂ ಸಹ ಅಂತಿಮವಾಗಿಲ್ಲ. ಟಿಕೆಟ್ ಪಡೆಯಲು ಪೈಪೋಟಿ ಜೋರಾಗಿದೆ.

ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಗೊಂಡಿರುವ ಜಯಪ್ರಕಾಶ್ ಹೆಗ್ಡೆ ಅವರನ್ನು ಪುನಃ ಕಾಂಗ್ರೆಸ್ಗೆ ಕರೆತಂದು ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿ ಇದೆ. ಆದರೆ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಸುಧೀರ್ ಕುಮಾರ್ ಮುರೊಳ್ಳಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಬಗ್ಗೆ ಅಭಿಯಾನ ಜೋರಾಗಿದೆ.
ಬಿಜೆಪಿಯಲ್ಲಿ 'ಗೋ ಬ್ಯಾಕ್ ಶೋಭಾ' ಎಂದು ನಡೆಯುತ್ತಿರುವ ಅಭಿಯಾನದ ಮಾದರಿಯಲ್ಲಿಯೇ ಕಾಂಗ್ರೆಸ್ನಲ್ಲಿ 'ಗೋ ಬ್ಯಾಕ್ ಹೆಗ್ಡೆ' ಎಂಬ ಅಭಿಯಾನ ನಡೆಯುತ್ತಿದ್ದು, ಕಾಂಗ್ರೆಸ್ ನಾಯಕರಿಗೆ ತಲೆ ನೋವು ತಂದಿದೆ. ಯಾರು ಅಭ್ಯರ್ಥಿ ಎಂಬ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ.
ಕೈ ನಾಯಕರಿಂದ ಅಭಿಯಾನ: ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆ. ಜಯಪ್ರಕಾಶ್ ಹೆಗ್ಡೆ ಹೆಸರು ಕೇಳಿ ಬಂದಿರುವುದಕ್ಕೆ ಕಾಂಗ್ರೆಸ್ ಕಾರ್ಯಕತರು, ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಹೆಗ್ಡೆ ಅವರ ವಿರುದ್ಧ ಗೋ ಬ್ಯಾಕ್ ಅಭಿಯಾನ ಆರಂಭಿಸಿರುವ ಕೈ ಮುಖಂಡರು, ಇದೀಗ ಬಹಿರಂಗ ಸಭೆ ನಡೆಸುವ ಮೂಲಕ ಮತ್ತೊಬ್ಬ ಆಕಾಂಕ್ಷಿ ಕೆಪಿಸಿಸಿ ವಕ್ತಾರ ಹಾಗೂ ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಟಿಕೆಟ್ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸದ್ಯ ಬಿಜೆಪಿಯಲ್ಲಿರುವ ಜಯಪ್ರಕಾಶ್ ಹೆಗ್ಡೆ ಅವರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾಂಗ್ರೆಸ್ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಶೃಂಗೇರಿಯಲ್ಲಿ ಸುಧೀರ್ ಕುಮಾರ್ ಮುರೊಳ್ಳಿ ಪರ ಮುಖಂಡರು ಸಭೆ ನಡೆಸಿದ್ದು, ಮುರೊಳ್ಳಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ರಾಜ್ಯ ನಾಯಕರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಕ್ಷೇತ್ರದ ಎಲ್ಲಾ ಜನಪರ ಚಳವಳಿ ಅಂದರೆ ರೈತ, ಕಾರ್ಮಿಕ, ದಲಿತ ಚಳುವಳಿಗಳ ಜೊತೆ ಸುಧೀರ್ ಕುಮಾರ್ ಮುರೊಳ್ಳಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು, ಎಲ್ಲಾ ಪಕ್ಷ ಹಾಗೂ ಸಂಘಟನೆಗಳಲ್ಲೂ ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ವೈಯಕ್ತಿಕವಾದ ಹಿತೈಷಿಗಳಿದ್ದಾರೆ. ಕಾನೂನು, ರಾಜಕೀಯ, ಕೃಷಿ, ಸಾಹಿತ್ಯ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಜ್ಞಾನವುಳ್ಳವರಾಗಿದ್ದು, ತಮ್ಮ ವಾಕ್ಚಾತುರ್ಯದಿಂದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.
ಹೀಗಾಗಿ ಕಷ್ಟಕಾಲದಲ್ಲಿ ಪಕ್ಷಕ್ಕೆ ಕೈಕೊಟ್ಟವರು ಈಗ ಬೇಡ. ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ ಲೋಕಸಭಾ ಚುನಾವಣೆಗೆ ಸುಧೀರ್ ಕುಮಾರ್ ಮುರೊಳ್ಳಿ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ. ರಾಜ್ಯ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೆ? ಎಂದು ಕಾದು ನೋಡಬೇಕಿದೆ.
ಸುಧೀರ್ ಕುಮಾರ್ ಮುರೊಳ್ಳಿಗೆ ಯಾಕೆ ಟಿಕೆಟ್
* ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆ ಪ್ರದೇಶವನ್ನು ಒಳಗೊಂಡಿರುತ್ತದೆ.
* ಜನಸಮುದಾಯ, ಭಾಷೆ, ಸಂಸ್ಕೃತಿ, ಕೃಷಿ, ಬದುಕಿನ ಪದ್ಧತಿಯ ವಿಚಾರಗಳನ್ನು ಗಮನಿಸಿದಂತೆ ವೈವಿಧ್ಯತೆಯಿಂದ ಕೂಡಿರುವ ಕ್ಷೇತ್ರವಾಗಿರುತ್ತದೆ.
* ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿಯ ವಕ್ತಾರರಾಗಿ, ಮಾಧ್ಯಮ ವಿಶ್ಲೇಷಕರಾಗಿ ಹಾಗೂ ನಾಯಕತ್ವ ಮತ್ತು ತರಬೇತಿ ವಿಭಾಗದ ಸದಸ್ಯರಾಗಿ ಈ ಕ್ಷೇತ್ರವಲ್ಲದೇ ಹಲವಾರು ಕ್ಷೇತ್ರಗಳಲ್ಲಿಯೂ ಪಕ್ಷದ ಪರವಾಗಿ ಸುಧೀರ್ ಕುಮಾರ್ ಕುಮಾರ್ ಮುರೊಳ್ಳಿ ಕೆಲಸ ಮಾಡಿರುತ್ತಾರೆ.
* ಈ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರದ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರಿಗೆ
ಪರಿಚಿತರಾಗಿರುವ ವ್ಯಕ್ತಿ ಸುಧೀರ್ ಕುಮಾರ್ ಮುರೊಳ್ಳಿ.
* ವಿದ್ಯಾರ್ಥಿ ಜೀವನದಲ್ಲಿ ಉಡುಪಿ ಮತ್ತು ಕರಾವಳಿ ಭಾಗದಲ್ಲಿ ವಿದ್ಯಾರ್ಥಿ ಚಳುವಳಿಯಲ್ಲಿ ಹಾಗೂ ನಾಯಕತ್ವದಲ್ಲಿ ತೊಡಗಿಸಿಕೊಂಡಿರುತ್ತಾರೆ. ಆ ಕಾರಣದಿಂದ ಕರಾವಳಿ ಭಾಗದಲ್ಲಿ ಸುಧೀರ್ ಕುಮಾರ್ ಮುರೊಳ್ಳಿ ಪರಿಚಯವುಳ್ಳವರಾಗಿರುತ್ತಾರೆ.
* ಉಡುಪಿ- ಚಿಕ್ಕಮಗಳೂರಿನ ಎಲ್ಲಾ ಜನಪರ ಚಳುವಳಿ ಅಂದರೆ ರೈತ, ಕಾರ್ಮಿಕ, ದಲಿತ ಚಳುವಳಿಗಳ ಜೊತೆ ಸುಧೀರ್ ಕುಮಾರ್ ಮುರೊಳ್ಳಿ ಸಕ್ರಿಯವಾಗಿ ಗುರುತಿಸಿಕೊಂಡಿರುತ್ತಾರೆ.
* ಎಲ್ಲಾ ಪಕ್ಷ ಹಾಗೂ ಸಂಘಟನೆಗಳಲ್ಲೂ ಸುಧೀರ್ ಕುಮಾರ್ ಮುರೊಳ್ಳಿ ಮುರೊಳ್ಳಿ ಅವರಿಗೆ ವೈಯಕ್ತಿಕವಾದ ಹಿತೈಷಿಗಳಿರುತ್ತಾರೆ. ಕನ್ನಡ ಹಾಗೂ ಕುಂದಾಪುರ ಕನ್ನಡವನ್ನು ಚೆನ್ನಾಗಿ ಬಲ್ಲವರಾಗಿದ್ದು, ಜನಸಮುದಾಯವನ್ನು ಸೆಳೆಯಲು ಸಶಕ್ತರಾಗಿರುತ್ತಾರೆ.
* ಕ್ಷೇತ್ರಾದ್ಯಂತ ಕಾರ್ಯಕರ್ತರೊಂದಿಗೆ ವೈಯಕ್ತಿಕವಾದ ಪರಿಚಯ ಮತ್ತು ಸಂಬಂಧವನ್ನು ಇಟ್ಟುಕೊಂಡಿರುತ್ತಾರೆ. ಸಾಕಷ್ಟು ಜನಪರ ಹೋರಾಟಗಳಲ್ಲಿ ಭಾಗವಹಿಸಿದ ಹಿನ್ನೆಲೆ ಇರುತ್ತದೆ.
* ಮಲೆನಾಡು-ಕರಾವಳಿ ಜನಪರ ಒಕ್ಕೂಟದ ಭಾಗವಾಗಿ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿರುತ್ತಾರೆ.
ಕಾನೂನು ವಿಷಯಗಳ ಬಗ್ಗೆ ಜನರನ್ನು ಸೆಳೆಯುವಲ್ಲಿ ಹಾಗೂ ರಾಜಕೀಯ, ಕೃಷಿ, ಸಾಹಿತ್ಯ ಸೇರಿದಂತೆ ಎಲ್ಲಾ ಜ್ಞಾನವುಳ್ಳವರಾಗಿದ್ದು, ತಮ್ಮ ವಾಕ್ಚಾತುರ್ಯದಿಂದ ಯಶಸ್ವಿಯಾಗಿರುತ್ತಾರೆ.
* ನ್ಯಾಯವಾದಿಯಾಗಿಯೂ ಈ ಎಲ್ಲಾ ಭಾಗದಲ್ಲಿ ಪರಿಚಿತರಾಗಿರುತ್ತಾರೆ. ಆದುದರಿಂದ ಮುಂಬರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸುಧೀರ್ ಕುಮಾರ್ ಮುಸ್ಕೊಳ್ಳಿ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕಾಗಿ ಒತ್ತಾಯಿಸಲಾಗಿದೆ.












Click it and Unblock the Notifications