ಗಡಿ ವಿವಾದ ಕೆದಕಿದ ಠಾಕ್ರೆ; ಕಾಂಗ್ರೆಸ್ನತ್ತ ಕೈ ತೋರಿಸಿದ ಸಿಟಿ ರವಿ
ಚಿಕ್ಕಮಗಳೂರು, ಜನವರಿ 18: " ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ" ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಹೇಳಿದ್ದಾರೆ. ಕರ್ನಾಟಕದಲ್ಲಿ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಚಿಕ್ಕಮಗಳೂರಿನಲ್ಲಿ ಸೋಮವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಮಾಧ್ಯಮಗಳ ಜೊತೆ ಮಾತನಾಡಿದರು. "ಗಡಿ ವಿಚಾರದಿಂದ ರಾಜಕೀಯ ಬೆಳೆ ಬೇಯಿಸಿಕೊಳ್ಳುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ" ಎಂದು ಹೇಳಿದರು.
"ಕನ್ನಡ ಮಾತನಾಡುವವರು ಮಹಾರಾಷ್ಟ್ರದ ಗಡಿಯೊಳಗೆ ಇದ್ದಾರೆ. ಮಠಾಠಿ ಮಾತನಾಡುವವರು ಕರ್ನಾಟಕದಲ್ಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹಲವು ಅಯೋಗಗಳು ಬಂದಿದೆ" ಎಂದರು.

"ಅವರವರ ಸಾಂಪ್ರದಾಯಿಕ ಅಸ್ಮಿತೆಯನ್ನು ಉಳಿಸುವ ಕೆಲಸ ಭಾರತೀಯರು ಮಾಡಿಕೊಂಡು ಬಂದಿದ್ದಾರೆ. ಸಾಂಸ್ಕೃತಿಕ ಅಸ್ಮಿತೆಗೆ ಧಕ್ಕೆ ತರುವ ಕೆಲಸ ನಡೆದಿಲ್ಲ. ಕಾಸರಗೋಡು ಕರ್ನಾಟಕಕ್ಕೆ ಸೇರಿದ್ದು ಎಂಬುದು ಹಲವು ವರ್ಷಗಳ ಕೂಗು" ಎಂದು ಸಿ. ಟಿ. ರವಿ ತಿಳಿಸಿದರು.
"ಭಾಷಾವಾರು ಪ್ರಾಂತ್ಯ ರಚನೆಯಾಗಬೇಕಾದರೆ ಬಿಜೆಪಿ ಅಸ್ತಿತ್ವದಲ್ಲಿರಲಿಲ್ಲ. ಅಂದು ದೇಶಾದ್ಯಂತ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಉದ್ಧವ್ ಠಾಕ್ರೆ ಪ್ರಶ್ನೆ ಮಾಡಬೇಕು ಅಂದರೆ ಅವರ ಬೆಂಬಲದಿಂದ ಅಧಿಕಾರ ನಡೆಸುತ್ತಿದ್ದಾರಲ್ಲ ಆ ಪಕ್ಷದ ವಿರುದ್ಧ ಪ್ರಶ್ನೆ ಮಾಡಬೇಕು"ಎಂದರು.
"ಭಾಷಾವಾರು ಪ್ರಾಂತ್ಯ ರಚನೆಯಾದಾಗ ಆಗ ಉದ್ಧವ್ ಠಾಕ್ರೆಯೂ ಹುಟ್ಟಿರಲಿಲ್ಲ, ನಾನು ಹುಟ್ಟಿರಲಿಲ್ಲ. ಕಾಂಗ್ರೆಸ್ ಹೆಗಲ ಮೇಲೆ ಕೂತು ಅವರು ಹೇಗೆ ಮಾತನಾಡುತ್ತಾರೆ. ನೈತಿಕತೆ ಇದ್ದರೆ ಅವರಿಗೆ ಆನ್ಯಾಯ ಮಾಡಿದ ಹೆಗಲಿನಿಂದ ಕೆಳಗಿಳಿಯಲಿ" ಎಂದು ಸಿ. ಟಿ. ರವಿ ಹೇಳಿದರು.












Click it and Unblock the Notifications