ಚಿಕ್ಕಮಗಳೂರು: ಪತ್ನಿಗಾಗಿ ಇಬ್ಬರು ಗಂಡಂದಿರು ಜಗಳ, ಕಿಡ್ನ್ಯಾಪ್ ಮಾಡಿ ಸಿಕ್ಕಿಬಿದ್ದ 2ನೇ ಗಂಡ
ಚಿಕ್ಕಮಗಳೂರು, ಆಗಸ್ಟ್, 30: ಕಡೂರು ತಾಲೂಕಿನಲ್ಲಿ ಪತ್ನಿಗೆ ಮೆಸೇಜ್ ಮಾಡಿದ್ದ ಮೊದಲನೇ ಗಂಡನನ್ನು ಎರಡನೇ ಗಂಡ ಓಪ್ರಕಾಶ್ ಎಂಬಾತ ಸಿನಿಮಾ ರೀತಿಯಲ್ಲಿ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾನೆ. ಮಾರ್ಗದ ಮಧ್ಯೆ ಕಾರು ಕೆಟ್ಟು ನಿಂತ ಸಂದರ್ಭದಲ್ಲಿ ಓಂಪ್ರಕಾಶ್ ಸೇರಿದಂತೆ ಏಳು ಜನ ಹಂತಕರನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಹಿಂಬಾಲಿಸಿ ವಶಕ್ಕೆ ಪಡೆದಿದ್ದಾರೆ.
ಮೋಹನ್ ರಾಮ್, ಮಂಜುಳಾ ಪ್ರೇಮದ ಕತೆ
ಐದು ವರ್ಷಗಳ ಹಿಂದೆ ಕಡೂರಿನಲ್ಲಿ ವಾಸಿಸುತ್ತಿದ್ದ ರಾಜಸ್ಥಾನದ ಕುಠಾಣಿ ಮೂಲದ ಮಂಜುಳಾಳನ್ನು ಮೋಹನ್ ರಾಮ್ ಎಂಬಾತ ಪ್ರೀತಿಸುತಿದ್ದು, ಕಳೆದ ವರ್ಷ ಜೋಧ್ಪುರ್ನಲ್ಲಿ ಇವರಿಬ್ಬರು ಮದುವೆ ಆಗಿದ್ದರು. ಮದುವೆ ಬಳಿಕ ಮೋಹನ್ ರಾಮ್ ತನ್ನ ಪತ್ನಿಯನ್ನು ಕಡೂರಿಗೆ ಕರೆದುಕೊಂಡು ಬಂದು ಸಂಸಾರ ನಡೆಸುತ್ತಿದ್ದನು. ಮದುವೆ ಆದ 2 ತಿಂಗಳ ನಂತರ ಮಂಜುಳಾ ತವರು ರಾಜ್ಯವಾದ ರಾಜಸ್ಥಾನಕ್ಕೆ ಹೋಗಿದ್ದಳು. ಪತ್ನಿ ಮಂಜುಳಾಳನ್ನು ಕಡೂರಿಗೆ ಕರೆದುಕೊಂಡು ಬರಲು ಮೋಹನ್ ರಾಮ್ ರಾಜಸ್ಥಾನಕ್ಕೆ ಹೋಗಿದ್ದ. ಆಗ ಪತಿ ಮೋಹನ್ ರಾಮ್ ಜೊತೆಗೆ ಬರಲು ಮಂಜುಳಾ ಒಪ್ಪಲಿಲ್ಲ. ಕಡೂರಿಗೆ ಬರಲು ಆಕೆ ಒಪ್ಪದಿದ್ದಕ್ಕೆ ಮೋಹನ್ ರಾಮ್ ಬೇಸತ್ತು ಸುಮ್ಮನಾಗಿದ್ದ.
ಸಿನಿಮೀಯ ರೀತಿಯಲ್ಲಿ ಕೊಲೆಗೆ ಸ್ಕೆಚ್
ಹೆಂಡತಿಯ ಮೇಲಿನ ಪ್ರೀತಿ ಹೆಚ್ಚಾದ ಕಾರಣ ಮೋಹನ್ ಸಮಯ ಸಿಕ್ಕಾಗಲೆಲ್ಲ ಆಕೆಗೆ ಮೆಸೇಜ್ ಮಾಡುತ್ತಿದ್ದ. ಯಾವುದೇ ಪ್ರತಿಕ್ರಿಯೆ ಬರದ ಕಾರಣ ಕಳೆದ ತಿಂಗಳು ಮತ್ತೆ ಆಕೆಗೆ ಬುದ್ಧಿ ಹೇಳಿ ಕರೆದುಕೊಂಡು ಬರಲು ಹೋಗಿದ್ದ. ಅವಳು ಹರಿಯಾಣದ ಪಿಪ್ಲಿವಾಲ ಗ್ರಾಮದ ಓಂ ಪ್ರಕಾಶ್ ಜೊತೆ ಮದುವೆ ಆಗಿರುವುದಾಗಿ ಮೋಹನ್ಗೆ ತಿಳಿದುಬಂದಿದೆ. ಮೋಹನ್ ತನ್ನ ಪತ್ನಿಗೆ ಮೆಸೇಜ್ ಮಾಡುತ್ತಿರುವ ವಿಷಯ ತಿಳಿದ ಎರಡನೇ ಪತಿ ಓಂಪ್ರಕಾಶ್ ಆತನನ್ನು ಮುಗಿಸಲು ಸಂಚು ರೂಪಿಸಿದ್ದ. ಓಂಪ್ರಕಾಶ್ ಏಳು ಜನರ ತಂಡದೊಂದಿಗೆ ಆಗಸ್ಟ್ 28ರಂದು ಭಾನುವಾರ ರಾತ್ರಿ ಕಡೂರಿಗೆ ಬಂದಿದ್ದ. ಸಿಪಿಸಿ ಕಾಲೋನಿಯಲ್ಲಿರುವ ದಿನಸಿ ಅಂಗಡಿಯಲ್ಲಿದ್ದ ಮೋಹನ್ ರಾಮ್ನನ್ನು ಸಿನಿಮಿಯ ಶೈಲಿಯಲ್ಲಿ ಅಪಹರಿಸಿ ಆತನ ಬಾಯಿಗೆ ಬಟ್ಟೆ ಕಟ್ಟಿ ಥಳಿಸಿದ್ದರು. ಕಾರಿನಲ್ಲಿಯೇ ಕೊಲೆಗೆ ಸಂಚು ನಡೆಸಿದ್ದಾರೆ.

ಸಿನೀಮಿಯ ರೀತಿಯಲ್ಲಿ ಹಂತಕರು ಅಂದರ್
ಕಾರಿನಲ್ಲಿ ಮೋಹನ್ನನ್ನು ಅಪಹರಿಸಿಕೊಂಡು ಹೋಗುತ್ತಿದ್ದ ದೃಶ್ಯವನ್ನು ಸ್ಥಳೀಯರು ಗಮನಿಸಿ ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯಪ್ರವೃತರಾದ ಕಡೂರು ಪೊಲೀಸರು ಹಂತಕರ ಕಾರನ್ನು ಹಿಂಬಾಲಿಸಿದರು. ಕಡೂರು ತಾಲೂಕಿನ ಮತಿಘಟ್ಟ ಬಳಿ ಹಂತಕರ ಕಾರು ಕೆಟ್ಟು ನಿಂತಿತ್ತು. ಆಗ ಎಂಟು ಜನ ಹಂತಕರನ್ನು ಪೊಲೀಸರು ಬಲೆಗೆ ಕೆಡವಿದರು. ಸಾವಿನ ದವಡೆಯಲ್ಲಿದ್ದ ಮೋಹನ್ ರಾಮ್ ಅದೃಷ್ಟವಶಾತ್ ಪಾರಾಗಿದ್ದಾನೆ. ಸಿನಿಮಿಯ ರೀತಿಯಲ್ಲಿ ಕಾರನ್ನು ಹಿಂಬಾಲಿಸಿದ ಪೊಲೀಸರು ಬೆಂಗಳೂರು ಮೂಲದ ಆರೋಪಿ 2ನೇ ಪತಿ ಓಂ ಪ್ರಕಾಶ್, ಶೈಲೇಂದ್ರ, ಪ್ರದೀಪ್, ದಲ್ಲಾರಾಮ್, ಜಿತೇಂದ್ರ, ಶಂಕರ್ ಪಾಟೀಲ್ ಹಾಗೂ ದಿನೇಶ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆ ಮಾಡಲು ಬಳಸಿದ್ದ ಕಾರು, ವಿಕೆಟ್ ವಶಕ್ಕೆ
ಹಂತಕರು ಕೊಲೆ ಮಾಡಲು ಬಳಸಿದ್ದ ವಿಕೆಟ್ ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಪಿಐ ಶಿವಕುಮಾರ್, ಪಿಎಸ್ಐ ಎನ್.ಕೆ. ರಮ್ಯಾ, ಹರೀಶ್, ಸಿಬ್ಬಂದಿಗಳಾದ ಕೃಷ್ಣಮೂರ್ತಿ, ರಾಜಪ್ಪ, ರಮೇಶ್, ಕುಚೇಲ, ಚಂದ್ರಶೇಖರ್ ಹಾಗೂ ಓಂಕಾರ್ ಮತ್ತಿತರರು ಪಾಲ್ಗೊಂಡಿದ್ದರು.
ಕಡೂರು ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾದ ಹಿನ್ನೆಲೆ ಅಮಾಯಕನ ಜೀವ ಉಳಿಸಿದಂತಾಗಿದೆ. ಪೊಲೀಸರ ಈ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.












Click it and Unblock the Notifications