ಉಕ್ಕಿ ಹರಿದ ತುಂಗಾ ನದಿ; ಹರಿಹರಪುರದಲ್ಲಿ ನೂರಾರು ಹೆಕ್ಟೇರ್ ಗದ್ದೆ, ತೋಟಗಳು ಜಲಾವೃತ
ಚಿಕ್ಕಮಗಳೂರು, ಜುಲೈ, 25: ಭಾರೀ ಮಳೆ ಹಿನ್ನೆಲೆ ರಾಜ್ಯದ ಹಲವೆಡೆ ನದಿ, ಹಳ್ಳ, ಜಲಾಪಾತಗಳು ಅಪಾಯದ ಮಟ್ಟ ಮೀರಿ ಬೋರ್ಗರೆಯುತ್ತಿವೆ. ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆರಾಯನ ಆರ್ಭಟ ಮುಂದುವರೆದಿದೆ. ತುಂಗಾ ನದಿ ಉಕ್ಕಿ ಹರಿದಿದ್ದು, ನದಿ ಪಾತ್ರದ ತೋಟ, ಗದ್ದೆಗಳು ಸಂಪೂರ್ಣ ಜಲಾವೃತವಾಗಿವೆ.
ತುಂಗಾ ನದಿ ಉಕ್ಕಿ ಹರಿದ ಪರಿಣಾಮ ಕೊಪ್ಪ ತಾಲೂಕಿನ ನರಸೀಪುರ, ಹರಿಹರಪುರದ ನೂರಾರು ಹೆಕ್ಟೇರ್ನ ಗದ್ದೆ-ತೋಟಗಳು ಸಂಪೂರ್ಣ ಜಲಾವೃತವಾಗಿವೆ. ಇನ್ನು ಗದ್ದೆಗಳು ಸಂಪೂರ್ಣ ಜಲಾವೃತವಾಗಿದ್ದರಿಂದ ಇಲ್ಲಿನ ರೈತರು ಕಂಗಾಲಾಗಿದ್ದಾರೆ.

ಸಖರಾಯಪಟ್ಟಣ ಬಳಿ ಮಳೆ ಅವಾಂತರ
ಭಾರೀ ಮಳೆ ಹಿನ್ನೆಲೆ ಕಡೂರು ತಾಲೂಕಿನ ಸಖರಾಯಪಟ್ಟಣ ಸುತ್ತ-ಮುತ್ತಲಿನ ಹೊಲ-ಗದ್ದೆ, ತೋಟಗಳು ಜಲಾವೃತವಾಗಿವೆ. ಮತ್ತೊಂದೆಡೆ 15 ದಿನದ ಹಿಂದೆ ಸಂಪೂರ್ಣ ಖಾಲಿಯಾಗಿದ್ದ ಕಡೂರು ತಾಲೂಕಿನ ಮದಗದ ಕೆರೆ ಇದೀಗ ಮುಕ್ಕಾಲು ಭಾಗ ತುಂಬಿದ್ದು, ಇಲ್ಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ.
ಜಿಲ್ಲೆ ಪ್ರವಾಸ ಮುಂದೂಡುವಂತೆ ಮನವಿ
ಮಳೆಯಿಂದ ಈಗಾಗಲೇ ಜಿಲ್ಲೆಯಲ್ಲಿ ಹಲವು ಜಲಪಾತ, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಅಲ್ಲದೆ ನದಿ, ಜಲಪಾತಗಳು, ಭೂ ಕುಸಿತದ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆ ಸುರಕ್ಷತೆ ದೃಷ್ಟಿಯಿಂದ ಮಳೆ ಕಡಿಮೆಯಾಗುವವರೆಗೂ ಜಿಲ್ಲೆ ಪ್ರವಾಸ ಮುಂದೂಡುವಂತೆ ಪ್ರವಾಸಿಗರಿಗೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ.ಉಮಾಪ್ರಶಾಂತ್ ಮನವಿ ಮಾಡಿದ್ದಾರೆ.












Click it and Unblock the Notifications