ಚಿಕ್ಕಮಗಳೂರಲ್ಲಿ ಮಳೆ; ಕಾಫಿ ಬೆಳೆಗಾರರಿಗೆ ಸಂಕಷ್ಟ
ಚಿಕ್ಕಮಗಳೂರು, ಫೆಬ್ರವರಿ 19; ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ ಜಿಲ್ಲೆಯಾದ್ಯಂತ ತೇವಾಂಶ ವಾತಾವರಣ ಉಂಟಾಗಿದೆ. ಶುಕ್ರವಾರ ಗುಡುಗು ಸಹಿತವಾಗಿ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದು, ರೊಬಾಸ್ಟಾ ಕಾಫಿಗೆ ಹೊಡೆತ ಬೀಳಲಿದೆ.
ಹವಾಮಾನ ಇಲಾಖೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆಯ ಮುನ್ಸೂಚನೆ ನೀಡಿತ್ತು. ತೇವಾಂಶಯುಕ್ತ ಗಾಳಿ ಚಲನವು ನೈರುತ್ಯ ದಿಕ್ಕಿನಡೆಗೆ ಚಲಿಸುತ್ತಿರುವುದರಿಂದ ಮಲೆನಾಡು ಭಾಗವಾದ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ ಮತ್ತು ಶೃಂಗೇರಿ ತಾಲೂಕಿನಲ್ಲಿ ಫೆ.18 ರಿಂದ 20 ರವರೆಗೆ ಸಾಧಾರಣ ಮಳೆಯಾಗುತ್ತದೆ ಎಂಬ ಮುನ್ಸೂಚನೆ ಕೊಡಲಾಗಿತ್ತು.
ಕೊಡಗಿನ ಶನಿವಾರಸಂತೆ ಸುತ್ತಮುತ್ತ ಭಾರೀ ಆಲಿಕಲ್ಲು ಮಳೆ
ಬಯಲು ಭಾಗವಾದ ಕಡೂರು ಮತ್ತು ತರೀಕೆರೆ ತಾಲೂಕಿನಲ್ಲಿ ಮೋಡಕವಿದ ವಾತಾವರಣ ಉಂಟಾಗುತ್ತಿದ್ದು, ಸಾಧಾರಣ ಮಳೆಯಾಗಲಿದೆ ಎಂದು ಹೇಳಿತ್ತು. ಜಿಲ್ಲೆಯಲ್ಲಿ ಫೆ.18 ರಂದು ಬೆಳಗ್ಗೆ ಮೋಡಕವಿದ ವಾತಾವರಣ ಉಂಟಾಗಿ ಬಳಿಕ ಬಿಸಿಲು ಬಂದಿತ್ತು. ರಾತ್ರಿ ತುಂತುರು ಮಳೆಯಾಗಿದ್ದು, ಇಂದು ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾರಣವಿತ್ತು.
ಕಾಫಿನಾಡು ಚಿಕ್ಕಮಗಳೂರಲ್ಲಿ ಕಾಫಿ ತೋಟ ಮುಟ್ಟುಗೋಲು
ಮಳೆಯಿಂದ ರಕ್ಷಣೆ ಪಡೆದ ಜನರು
ಮಧ್ಯಾಹ್ನ ಚಿಕ್ಕಮಗಳೂರು ನಗರದಲ್ಲಿ ಇದ್ದಕ್ಕಿದ್ದಂತೆ ಕೆಲವು ನಿಮಿಷ ಮಳೆ ಸುರಿಯಿತು. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಮಳೆಯಲ್ಲೇ ನೆನೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ಅಂಗಡಿಗಳ ಮುಂದೆ ನಿಂತು ಮಳೆಯಿಂದ ರಕ್ಷಣೆ ಪಡೆದುಕೊಂಡರು.
ವಿವಿಧ ತಾಲೂಕುಗಳಲ್ಲಿ ಮಳೆ
ಮೂಡಿಗೆರೆ, ಕೊಪ್ಪ ಮತ್ತು ಶೃಂಗೇರಿ ತಾಲೂಕಿನ ಬಹುತೇಕ ಸ್ಥಳಗಳಲ್ಲಿ ಮಳೆಯಾಗಿದೆ. ಕಡೂರು, ಕಸಬಾ, ಸಿಂಗಟಗೆರೆ, ಪಂಚನಹಳ್ಳಿ ಸಖರಾಯಪಟ್ಟಣ, ಬೀರೂರು, ಎಮ್ಮೆದೊಡ್ಡಿ, ಬಾಸೂರು ಗ್ರಾಮಗಳಲ್ಲಿ ಕನಿಷ್ಟ 8 ಮಿ. ಮೀ.ನಿಂದ ಗರಿಷ್ಟ 46 ಮಿ. ಮೀಟರ್ ವರೆಗೆ ಮಳೆಬಿದ್ದಿದೆ.
ಚಿಕ್ಕಮಗಳೂರಿನಲ್ಲಿ ಮಳೆ
ತರೀಕೆರೆ ತಾಲೂಕಿನ ಲಕ್ಕವಳ್ಳಿ, ರಂಗೇನಹಳ್ಳಿ, ಹುಣಸಘಟ್ಟ, ತಣಿಗೆಬೈಲು, ಉಡೇವಾ, ತ್ಯಾಗದಬಾಗಿ, ಲಿಂಗದಹಳ್ಳಿ ಕನಿಷ್ಠ 4 ಮಿ. ಮೀ. ನಿಂದ ಗರಿಷ್ಟ 18 ಮಿ.ಮೀಟರ್ ವರೆಗೂ ಮಳೆಯಾಗಿದ್ದರೆ, ಅಜ್ಜಂಪುರ ತಾಲೂಕಿನ ಶಿವನಿ, ಬುಕ್ಕಾಂಬೂದಿ ಮತ್ತು ಚೌಳಹಿರಿಯೂರಿನಲ್ಲೂ ಕನಿಷ್ಠ 2.3 ಮಿ.ಮೀ.ನಿಂದ ಗರಿಷ್ಟ 20 ಮಿ. ಮೀ. ತನಕ ಮಳೆಯಾಗಿದೆ.
ಕಾಫಿ ಕೊಯ್ಲಿಗೆ ಹೊಡೆತ
ಈಗಾಗಲೇ ಅರೇಬಿಕಾ ಕಾಫಿ ಕೊಯ್ಲು ಮುಗಿದಿದ್ದು, ರೊಬಾಸ್ಟಾ ಕೊಯ್ಲು ಆರಂಭಗೊಂಡಿದೆ. ಮೊಡಕವಿದ ವಾತಾವರಣದಿಂದ ಕಾಫಿ ಒಣಗಿಸಲು ಸ್ವಲ್ಪ ತೊಂದರೆಯಾದರೆ, ಕೊಯ್ಲು ಮಾಡಲು ಕಷ್ಟಕರವಾಗುತ್ತದೆ. ಮಳೆ ಬಿದ್ದು ಕಾಫಿ ಹಣ್ಣು ಬಿರಿದು ಒಡೆದು ನೆಲಕ್ಕುದುರುತ್ತಿದ್ದು, ಕಾಫಿತೊಟ್ಟು ಮಳೆಯಿಂದ ತೊಯ್ದು ಕೊಯ್ಲು ಮಾಡುವಾಗ ಹಣ್ಣುಗಳು ನೆಲಕ್ಕುದುರಿ ಬೆಳೆಗಾರರಿಗೆ ನಷ್ಟವಾಗಲಿದೆ.
ಮಳೆಯ ವಿವರಗಳು
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದಿರುವ ಮಳೆ ವಿವರ ಮಿ. ಮೀ.ಗಳಲ್ಲಿ ಇಂತಿದೆ. ಚಿಕ್ಕಮಗಳೂರು ಕಸಬಾ 6.2, ವಸ್ತಾರೆ 7.2, ಜೋಳದಾಳ್ 6.2, ಆಲ್ದೂರು 7.3, ಕೆ.ಆರ್.ಪೇಟೆ 4.3, ಅತ್ತಿಗುಂಡಿ 16.2, ಸಂಗಮೇಶ್ವರಪೇಟೆ 5.3, ಬ್ಯಾರುವಳ್ಳಿ 5.3, ಕಳಸಾಪುರ 9.5, ಮಳಲೂರು 9.2, ದಾಸರಹಳ್ಳಿ 7.2, ಕಡೂರು ಕಸಬಾ 15.2, ಸಿಂಗಟಗೆರೆ 46, ಪಂಚನಹಳ್ಳಿ 5.4, ಸಖರಾಯಪಟ್ಟಣ 5.8, ಗಿರಿಯಾಪುರ 8, ಬೀರೂರು 8.6, ಎಮ್ಮೆದೊಡ್ಡಿ 18.6, ಬಾಸೂರು 16, ಕೊಪ್ಪ 23, ಹರಿಹರಪುರ 3, ಜಯಪುರ 18, ಕಮ್ಮರಡಿ 5.2, ಬಸರಿಕಟ್ಟೆ 36.1, ಮೂಡಿಗೆರೆ ಕಸಬಾ 12.4, ಕೊಟ್ಟಿಗೆಹಾರ 6.2,ಜಾವಳಿ 5, ಗೋಣಿಬೀಡು 5.2, ಬಾಳೂರು 5.2, ಹಿರೇಬೈಲು 6.2.