ಕುಂಚೇಬೈಲು ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆ: ಕಾರಿನ ಮೇಲೆ ಬಿದ್ದ ಬೃಹತ್ ಮರ
ಚಿಕ್ಕಮಗಳೂರು, ಮೇ, 23: ಕಳೆದೊಂದು ವಾರದಿಂದ ರಾಜ್ಯದ ಹಲವೆಡೆ ಭಾರೀ ಮಳೆ ಆಗಿದ್ದು, ಇದರಿಂದ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಇನ್ನು ಇಂದು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಬಿರುಗಾಳಿ, ಗುಡುಗು ಸಹಿತ ಮಳೆ ಸುರಿದ ಪರಿಣಾಮ ದೊಡ್ಡ ದೊಡ್ಡ ಅನಾಹುತಗಳೇ ಸಂಭವಿಸಿವೆ. ಹಾಗೆಯೆ ಗಾಳಿ, ಮಳೆ ಅಬ್ಬರದಿಂದ ಮನೆ ಮುಂದೆ ನಿಲ್ಲಿಸಿದ್ದ ಓಮ್ನಿ ಕಾರಿನ ಮೇಲೆ ಮರ ಬಿದ್ದ ಘಟನೆ ಶೃಂಗೇರಿ ತಾಲೂಕಿನ ಕುಂಚೇಬೈಲು ಗ್ರಾಮದಲ್ಲಿ ನಡೆದಿದೆ.
ಕುಂಚೇಬೈಲು ಗ್ರಾಮದಲ್ಲಿ ಅಬ್ಬರದ ಮಳೆ ಸುರಿದ ಕಾರಣ ತೋಟಕ್ಕೆ ಜನರನ್ನು ಕರೆದೊಯ್ಯುವ ಓಮ್ನಿ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದಿದ್ದು, ಕಾರು ನುಜ್ಜುಗುಜ್ಜಾಗಿದೆ. ಸದ್ಯ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಕೂಲಿ ಕಾರ್ಮಿಕರು ಪ್ರಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಕಾರಿನ ಮೇಲೆ ಮರ ಬಿದ್ದಿರುವುದರಿಂದ ಶೃಂಗೇರಿ-ಚಿಕ್ಕಮಗಳೂರು ರಸ್ತೆ ಕೆಲ ಬಂದ್ ಮಾಡಲಾಗಿದೆ. ಕಾರಿನಲ್ಲಿ ಜನ ಇಲ್ಲದಿದ್ದರಿಂದ ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ. ಈ ಕಾರು ಕಟ್ಟಡ ಗುತ್ತಿಗೆದಾರ ಪ್ರದೀಪ್ ಎಂಬುವರಿಗೆ ಸೇರಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ತಾಲುಕುವಾರು ಮಳೆ ಹಾನಿ ವಿವರ ಇಲ್ಲಿದೆ
ದಾವಣಗೆರೆ ಜಿಲ್ಲೆಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಒಂದೆಡೆ ಬಿಸಿಲಿನ ಬೇಗೆಗೆ ತತ್ತರಸಿದ್ದ ಜನರಿಗೆ ವರುಣ ತಂಪೆರೆದರೆ, ಮತ್ತೊಂದೆಡೆ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು, ರೈತರು ಬೆಳೆದಿದ್ದ ಬೆಳೆಗಳು ಜಲಾವೃತವಾಗಿವೆ. ಅದರಲ್ಲಿಯೂ ಭತ್ತ, ಬಾಳೆ, ಪಪ್ಪಾಯಿ ಸೇರಿದಂತೆ ಇತರೆ ಬೆಳೆಗಳು ನೀರುಪಾಲಾಗಿದ್ದು, ರೈತರಿಗೆ ಮತ್ತೊಂದು ಬರೆ ಬಿದ್ದಂತಾಗಿದೆ. ಸುಮಾರು 1 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.
ಭಾನುವಾರ ರಾತ್ರಿ ಭಾರೀ ಗಾಳಿ, ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿತ್ತು. ಅಲ್ಲದೆ, ತರಕಾರಿ ಬೆಳೆಗಳು ಸಹ ನೀರುಪಾಲಾಗಿದೆ. ಹೀಗೆ ಕೈಗೆ ಬಂದಿದ್ದ ಫಸಲು ಬಾರದೇ ರೈತರು ಕಣ್ಣೀರು ಸುರಿಸುವಂತಾಗಿದೆ. ಜಿಲ್ಲೆಯಲ್ಲಿ 13.6 ಮಿ.ಮೀ. ಸರಾಸರಿ ಮಳೆ ಸುರಿದಿದ್ದು, ಜಿಲ್ಲಾಡಳಿತ ಅಂದಾಜಿಸಿರುವ ಪ್ರಕಾರ 79.40 ಲಕ್ಷ ರೂ.ನಷ್ಟ ಸಂಭವಿಸಿದೆ. ಕೆಲವೆಡೆ ಮನೆಗಳು ಧರೆಗುರುಳಿದರೆ, ಮತ್ತೆ ಕೆಲವೆಡೆ ಜಮೀನುಗಳು ಜಲಾವೃತವಾಗಿವೆ.
ಚನ್ನಗಿರಿಯಲ್ಲಿ ವಾಡಿಕೆ ಮಳೆ 2.5 ಮಿ.ಮೀ ಹಾಗೂ ವಾಸ್ತವ ಮಳೆ 9.5 ಮಿ.ಮೀ. ಆಗಿದ್ದರೆ, ದಾವಣಗೆರೆ ತಾಲೂಕಿನಲ್ಲಿ ವಾಡಿಕೆ ಮಳೆ 1.0 ಮಿ.ಮೀ.ನಷ್ಟು ಆಗಿದೆ. ವಾಸ್ತವ ಮಳೆ 19.5 ಮಿ.ಮೀ ಸುರಿದಿದೆ. ಹರಿಹರದಲ್ಲಿ ವಾಡಿಕೆ ಮಳೆ 1.1 ಮಿ.ಮೀ ಹಾಗೂ ವಾಸ್ತವ ಮಳೆ 17.2 ಮಿ.ಮೀ. ಆಗಿದೆ.
ಇನ್ನು ಹೊನ್ನಾಳಿ ವಾಡಿಕೆ ಮಳೆ 2.4 ಮಿ.ಮೀ ಹಾಗೂ ವಾಸ್ತವ ಮಳೆ 9.0 ಮಿ.ಮೀ, ಜಗಳೂರು ವಾಡಿಕೆ ಮಳೆ 1.9 ಮಿ.ಮೀ ಹಾಗೂ ವಾಸ್ತವ ಮಳೆ 13.7 ಮಿ.ಮೀ, ನ್ಯಾಮತಿಯಲ್ಲಿ ವಾಡಿಕೆ ಮಳೆ 2.5 ಮಿ.ಮೀ ಹಾಗೂ ವಾಸ್ತವ ಮಳೆ 14.1 ಮಿ.ಮೀ ಮಳೆಯಾಗಿದೆ.
ದಾವಣಗೆರೆ ತಾಲೂಕು ವ್ಯಾಪ್ತಿಯಲ್ಲಿ 1 ಮನೆ ಭಾಗಶಃ ಹಾನಿಯಾಗಿದ್ದು, 150 ಹೆಕ್ಟೇರ್ ಭತ್ತದ ಬೆಳೆ ನಾಶವಾಗಿದೆ. ಇದರಿಂದ ಒಟ್ಟು ಅಂದಾಜು 30.60 ಲಕ್ಷ ರೂಪಾಯಿ ನಷ್ಟ, ಹರಿಹರ ತಾಲೂಕು ವ್ಯಾಪ್ತಿಯಲ್ಲಿ 2 ಮನೆ ಭಾಗಶಃ ಹಾನಿಯಾಗಿದ್ದು, 295 ಹೆಕ್ಟೇರ್ ಭತ್ತ ನೀರುಪಾಲಾಗಿದೆ. ಒಟ್ಟು ಅಂದಾಜು 18.93 ಲಕ್ಷ ರೂಪಾಯಿ ನಷ್ಟವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜಗಳೂರು ತಾಲೂಕು ವ್ಯಾಪ್ತಿಯಲ್ಲಿ 1 ಮನೆ ತೀವ್ರ ಹಾನಿಯಾಗದ್ದು, 10 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 30 ಹೆಕ್ಟೇರ್ ಅಡಿಕೆ, 38 ಹೆಕ್ಟೇರ್ ಬಾಳೆ, 20 ಹೆಕ್ಟೇರ್ ಪಪ್ಪಾಯಿ ಬೆಳೆ ಹಾನಿಯಾಗಿದೆ. 1 ಎತ್ತು ಮೃತಪಟ್ಟಿದ್ದು ಒಟ್ಟು ಅಂದಾಜು 29.87 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಜಿಲ್ಲೆಯಲ್ಲಿ ಒಟ್ಟಾರೆ ಅಂದಾಜು 79.40 ಲಕ್ಷ ರೂಪಾಯಿನಷ್ಟು ನಷ್ಟ ಸಂಭವಿಸಿದ್ದು, ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಇನ್ನು ಕೆಲವೆಡೆ ಜಿಲ್ಲಾಡಳಿತ ಸರ್ವೇ ನಡೆಸಬೇಕಾಗಿದೆ. ಹಾಗಾಗಿ, ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಸಂಭವಿಸಿದೆ. ಬೆಳೆಗಳು ಮಳೆಗೆ ಕೊಚ್ಚಿ ಹೋಗಿರುವುದರಿಂದ ರಾಜ್ಯ ಸರ್ಕಾರವು ಈ ಹಿಂದೆ ನೀಡುತ್ತಿದ್ದ ಪರಿಹಾರಕ್ಕಿಂತ ಹೆಚ್ಚಿನ ಪರಿಹಾರ ನೀಡುವ ಮೂಲಕ ನೆರವಾಗಬೇಕು ಎಂದು ಬೆಳೆ ನಷ್ಟ ಅನುಭವಿಸಿದ ರೈತರು ಆಗ್ರಹಿಸಿದ್ದಾರೆ.












Click it and Unblock the Notifications