ಪಾಳು ಬಿದ್ದ ಸರ್ಕಾರಿ ಶಾಲೆಗೆ ಬಣ್ಣ ಬಳಿದು ಹೈಟೆಕ್ ಮಾಡಿದ ಶಿಕ್ಷಕ
ಚಿಕ್ಕಮಗಳೂರು, ಜೂನ್ 4: ಕೊರೊನಾ ವೈರಸ್ ಹಿನ್ನೆಲೆಯ ಲಾಕ್ ಡೌನ್ ಕಾಲದಲ್ಲಿ ಸರ್ಕಾರಿ ಉದ್ಯೋಗದಲ್ಲಿ ಇದ್ದವರು ಮನೆಯಲ್ಲಿ ಕೂತು ಕಾಲ ಹಾಕಿದ್ದೆ ಹೆಚ್ಚು, ಆದರೆ ಚಿಕ್ಕಮಗಳೂರಿನಲ್ಲಿ ಶಿಕ್ಷಕರೊಬ್ಬರು ಪಾಳು ಬಿದ್ದಿದ್ದ ಶಾಲೆಯನ್ನು ಹೈಟೆಕ್ ಗೊಳಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸುಂಕಸಾಲೆ ಸರ್ಕಾರಿ ಶಾಲೆ ಅವನತಿಯ ಅಂಚಿನಲ್ಲಿತ್ತು. ಇದನ್ನು ಮನಗಂಡ ಶಾಲೆಯ ಶಿಕ್ಷಕ ಕಾಂತರಾಜ್, ತಾನು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಾಲೆಗೆ ಕೊರೊನಾ ವೈರಸ್ ಸಮಯದಲ್ಲಿ ರಜೆಯನ್ನು ಸದುಪಯೋಗಪಡಿಸಿಕೊಂಡು ಶಾಲೆಯ ಅಂದವನ್ನು ಹೆಚ್ಚಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ಕಲಿಕೆಗೆ ಪ್ರೋತ್ಸಾಹ
ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ವತಿಯಿಂದ ಶಾಲೆಗೆ ನೀಡಿದ 50 ಸಾವಿರ ರುಪಾಯಿ ಅನುದಾನದ ಜೊತೆಗೆ ತಮ್ಮ ಸ್ವಂತ 50 ಸಾವಿರ ರುಪಾಯಿ ಹಣ ಬಳಸಿಕೊಂಡು ಸ್ವತಃ ತಾವೇ ಶಾಲೆಗೆ ಅಂದವಾದ ಬಣ್ಣ ಬಳಿದಿದ್ದಾರೆ. ಇನ್ನು ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್, ಚಿತ್ರಕಲೆ, ಸ್ವಯಂ ಶಿಸ್ತು, ಮುಂತಾದ ಕಲಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಆರಂಭದಲ್ಲಿ ಎಂಟು ಮಕ್ಕಳಿದ್ದ ಶಾಲೆಯಲ್ಲಿ ಇಂದು 15 ಜನ ವಿದ್ಯಾರ್ಥಿಗಳಿದ್ದಾರೆ.

ತಿಂಗಳ ಹಿಂದೆ ಅವನತಿಯ ಅಂಚಿನಲ್ಲಿದ್ದ ಶಾಲೆ
ಮಕ್ಕಳ ಕಣ್ಮನ ಸೆಳೆಯುವಂತೆ ಸ್ಪ್ರೇ ಪೇಂಟಿಂಗ್, ರಂಗು ರಂಗಾದ ಸ್ಕ್ರೀನಿಂಗ್ ನಿಂದ ಕೊಠಡಿಯ ಅಂದ ಹೆಚ್ಚಿಸಿದೆ. ಜೊತೆಗೆ ಮಕ್ಕಳಿಗಾಗಿ ರೌಂಡ್ ಟೇಬಲ್ ವ್ಯವಸ್ಥೆ ಸಹ ಮಾಡಲಾಗಿದ್ದು, 2 ತಿಂಗಳ ಹಿಂದೆ ಅವನತಿಯ ಅಂಚಿನಲ್ಲಿದ್ದ ಶಾಲೆ ಇಂದು ಮದುವೆ ಮನೆಯಂತೆ ಸಿಂಗಾರಗೊಂಡಿದೆ.

ಲಾಕ್ ಡೌನ್ ಸಮಯವನ್ನು ಮಕ್ಕಳಿಗಾಗಿ ಮೀಸಲಿಟ್ಟಿದ್ದಾರೆ
ಇನ್ನು ಶಿಕ್ಷಕ ಕಾಂತರಾಜ್ ಮಾಡಿರುವ ಈ ಕಾರ್ಯದಿಂದ ಇಂದು ಸರ್ಕಾರಿ ಶಾಲೆಯು ಖಾಸಗಿ ಶಾಲೆಗಳಿಗಿಂತ ಹೆಚ್ಚು ಅಂದವಾಗಿದೆ. ಶಿಕ್ಷಕ ಕಾಂತರಾಜ್ ಅವರ ಕಾರ್ಯಕ್ಕೆ ಶಾಲೆಯ ಎಸ್.ಡಿ.ಎಂ.ಸಿ ಹಾಗೂ ಸ್ಥಳೀಯರು ಸಾಥ್ ನೀಡಿದ್ದಾರೆ. ಶಾಲೆಯ ಕಂಬಗಳಿಗೆ ಮಕ್ಕಳ ಸೃಜನಶೀಲತೆಯನ್ನು ಪೋಷಿಸುವ ಪೂರಕ ಚಿತ್ರಗಳನ್ನು ಬಿಡಿಸಿರುವ ಶಿಕ್ಷಕ ಕಾಂತರಾಜ್ ಲಾಕ್ ಡೌನ್ ಸಮಯವನ್ನು ಮಕ್ಕಳಿಗಾಗಿ ಮೀಸಲಿಟ್ಟಿದ್ದಾರೆ.

ಶಿಕ್ಷಕನ ಶಾಲೆಯ ಕಾಳಜಿಗೆ ಸಂತಸ
ಸದ್ಯ ಶಾಲೆಯಲ್ಲಿರುವ 15 ಮಕ್ಕಳಲ್ಲದೇ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾತಿಯಾಗಲು ಗ್ರಾಮಗಳಿಗೆ ಹೋಗಿ ಜಾಗೃತಿ ಮೂಡಿಸಲು ಶಿಕ್ಷಕ ಕಾಂತರಾಜ್ ಮುಂದಾಗಿದ್ದು, ಈ ಶಿಕ್ಷಕನ ಸರ್ಕಾರಿ ಶಾಲೆಯ ಪ್ರೀತಿಗೆ ಸಾಕ್ಷಿಯಾಗಿದೆ. ಇವರನ್ನು ಗ್ರಾಮಸ್ಥರು ಹಾಗೂ ಸ್ಥಳೀಯರು ಇವರ ಶಾಲೆಯ ಕಾಳಜಿಗೆ ಸಂತಸಗೊಂಡಿದ್ದಾರೆ.












Click it and Unblock the Notifications