ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸಿ: ಸರ್ಕಾರಕ್ಕೆ ಶ್ರೀರಾಮಸೇನೆ ಒತ್ತಾಯ
ಚಿಕ್ಕಮಗಳೂರು, ನವೆಂಬರ್, 07: ದತ್ತ ಗುರುಗಳ ಶಾಪದಿಂದ ಯಡಿಯೂರಪ್ಪ ಪೀಠ ಕಳೆದುಕೊಂಡಿದ್ದಾರೆ. ಈಗ ಬಸವರಾಜ ಬೊಮ್ಮಾಯಿಗೂ ಹೇಳುತ್ತಾ ಇದ್ದೀವಿ, ಮುಂದೆ ಮತ್ತೆ ಸರ್ಕಾರ ಅಧಿಕಾರಕ್ಕೆ ಬರಬೇಕೆಂದರೆ ತಕ್ಷಣ ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸಿ. ಇಲ್ಲವಾದರೆ ಯಡಿಯೂರಪ್ಪನವರಿಗೆ ಆದ ಪರಿಸ್ಥಿತಿಯೇ ನಿಮಗೂ ಆಗುತ್ತದೆ ಎಂದು ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದ ಶಂಕರ ಮಠದಲ್ಲಿ ದತ್ತಮಾಲಾ ಅಭಿಯಾನಕ್ಕೆ ದತ್ತಮಾಲಾಧಾರಣೆ ಮಾಡುವ ಮೂಲಕ ಚಾಲನೆ ನೀಡಿ ಮಾತಾನಾಡಿದ ಅವರು, ಧರ್ಮದ ವಿಚಾರದಲ್ಲಿ ಡ್ರಾಮಾ ಮಾಡುವುದು ಒಳ್ಳೆಯದಲ್ಲ. ತಕ್ಷಣ ಏನಾದರು ಆಗಲಿ ಎಂದು ಗಟ್ಟಿ ನಿರ್ಧಾರ ಮಾಡಬೇಕು. ಕೂಡಲೇ ದತ್ತಪೀಠವನ್ನ ಹಿಂದೂಗಳ ಪೀಠವೆಂದು ಆದೇಶಿಸಿ, ಹಿಂದೂ ಅರ್ಚಕರ ನೇಮಿಸಬೇಕು. 13ನೇ ತಾರೀಖಿನೊಳಗೆ ಅರ್ಚಕರನ್ನು ನೇಮಿಸದಿದ್ದರೆ ಪರಿಸ್ಥಿತಿ ಕಠಿಣವಾಗುತ್ತೆ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ದತ್ತ ಜಯಂತಿ: ತುಳಸಿ ಕಟ್ಟೆ ಜಾಗದಲ್ಲಿ ಹೋಮ ಮಾಡಲು ಭಜರಂಗ ದಳ ಪಟ್ಟು
ಹಿಂದೂ ಅರ್ಚಕರ ನೇಮಕಕ್ಕೆ ಒತ್ತಾಯ
ಹಿಂದೂ ಅರ್ಚಕರನ್ನು ನೇಮಕ ಮಾಡದಿದ್ದರೆ ಹೇಗೆ ಬಿಜೆಪಿ ಅಧ್ಯಕ್ಷರ ಕಾರು ಅಲುಗಾಡಿತ್ತೋ, ಅದೇ ರೀತಿ ಸರ್ಕಾರ ಅಲುಗಾಡುತ್ತದೆ. ಇನ್ನು ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸದಿದ್ದರೆ ಯಡಿಯೂರಪ್ಪರ ಪೀಠ ಹೋಗುತ್ತದೆ ಎಂದು ಹೇಳಿದ್ದೆ. ಅದೇ ರೀತಿ ಅವರು ಪೀಠವನ್ನು ಕಳೆದುಕೊಂಡರು. ಈಗ ಬಸವರಾಜ ಬೊಮ್ಮಯಿಗೆ ಹೇಳುತ್ತಾ ಇದ್ದೀನಿ, ಕೂಡಲೇ ಹಿಂದೂ ಅರ್ಚಕರನ್ನು ನೇಮಕ ಮಾಡಿ, ಇಲ್ಲದಿದ್ದರೆ ನಿಮ್ಮ ಸಿಎಂ ಪದವಿಗೆ ಸಂಕಷ್ಟ ಎದುರಾಗಲಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ದತ್ತಮಾಲಾ ಅಭಿಯಾನಕ್ಕೆ ಚಾಲನೆ
ಶ್ರೀರಾಮಸೇನೆಯ ವತಿಯಿಂದ ನಡೆಯುತ್ತಿರುವ 18ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಇಂದು ಚಾಲನೆ ಸಿಕ್ಕಿದೆ. ನಗರದ ಶಂಕರ ಮಠದಲ್ಲಿ ಮಾಲಾಧಾರಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಈ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಶ್ರೀರಾಮಸೇನೆಯ ಕಾರ್ಯಕರ್ತರು ಮಾಲಾಧಾರಣೆ ಮಾಡಿದರು. ಇಂದಿನಿಂದ ಏಳು ದಿನಗಳ ಕಾಲ ದತ್ತಮಾಲಾ ಅಭಿಯಾನ ನಡೆಯಲಿದ್ದು, ನವೆಂಬರ್ 13ರಂದು ದತ್ತಪೀಠದಲ್ಲಿ ದತ್ತ ಪಾದುಕೆ ದರ್ಶನ ಪಡೆಯುವ ಮೂಲಕ ತೆರೆ ಕಾಣಲಿದೆ.