ಚಿಕ್ಕಮಗಳೂರು: ಸಂಡೇ ಲಾಕ್ ಡೌನ್ ನಡುವೆಯೂ ಸಚಿವರು, ಶಾಸಕರ ಪ್ರವಾಸ
ಚಿಕ್ಕಮಗಳೂರು, ಜುಲೈ 5: ಕೊರೊನಾ ವೈರಸ್ ಆತಂಕದಿಂದ ಇಡೀ ರಾಜ್ಯವೇ ಸಂಪೂರ್ಣ ಲಾಕ್ ಡೌನ್ ಆಗಿದೆ, ಆದರೆ ಸಚಿವರು ಮತ್ತು ಶಾಸಕರಿಗೆ ಮಾತ್ರ ಈ ನಿಯಮ ಅನ್ವಯವಾದಂತಿಲ್ಲ.
ಸಚಿವರು ಮತ್ತು ಶಾಸಕರಿಗೆ ಭಾನುವಾರದ ಲಾಕ್ ಡೌನ್ ಅಪ್ಲೈ ಆಗಲ್ವ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ, ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.
ದೇವರಮನೆಗುಡ್ಡ, ಹೇಮಾವತಿ ನದಿ ಮೂಲ, ಬಲ್ಲಾಳರಾಯನ ದುರ್ಗಕ್ಕೆ ಸಚಿವರು, ಶಾಸಕ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿದ್ದು, ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಕುಮಾರಸ್ವಾಮಿ ಅವರೇ ಮುಖಕ್ಕೆ ಮಾಸ್ಕ್ ಹಾಕಿರಲಿಲ್ಲ. ಸಾಮಾಜಿಕ ಅಂತರದಿಂದಲೂ ಜನಪ್ರತಿನಿಧಿಗಳು ದೂರ ಉಳಿದಿದ್ದರು.

ಇದೇ ಸಂದರ್ಭದಲ್ಲಿ ಭಾನುವಾರದ ಲಾಕ್ ಡೌನ್ ಅಂಗವಾಗಿ ಕಾಫಿನಾಡಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ಫೀಲ್ಡಿಗಿಳಿದಿದ್ದರು. ಅನಗತ್ಯವಾಗಿ ರಸ್ತೆಯಲ್ಲಿ ಸಂಚಾರ ನಡೆಸುತ್ತಿದ್ದವರಿಗೆ ಎಚ್ಚರಿಕೆ ನೀಡಿದರು.

ವಾಹನಗಳನ್ನು ತಡೆದು ಪೊಲೀಸರು ಎಚ್ಚರಿಕೆ ನೀಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ರಸ್ತೆಗಿಳಿಯದಂತೆ ಮೈಕ್ ಮೂಲಕ ಎಚ್ಚರಿಕೆ ನೀಡಿದರು. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು.












Click it and Unblock the Notifications