ಶೃಂಗೇರಿ: ದುರಸ್ತಿ ಹಂತ ತಲುಪಿದ ನೆಮ್ಮಾರುನಲ್ಲಿರುವ ತೂಗು ಸೇತುವೆ, ಸರ್ಕಾರದ ನಿರ್ಲಕ್ಷ್ಯ
ಚಿಕ್ಕಮಗಳೂರು, ನವೆಂಬರ್, 03: ಗುಜರಾತ್ನಲ್ಲಿ ನಡೆದ ಮೊರ್ಬಿ ದುರಂತ 141 ಜನರನ್ನು ಬಲಿಪಡೆದಿದೆ. ಕರ್ನಾಟಕದಲ್ಲಿ ಕೂಡ ಇಂಥ ಹಲವಾರು ಅಪಾಯಕಾರಿ ಸೇತುವೆಗಳು ಇವೆ. ಗುಜರಾತ್ನ ಮೊರ್ಬಿ ಸೇತುವೆಯಷ್ಟೇ ಚಿಕ್ಕಮಗಳೂರಿನಲ್ಲಿಯೂ ಅಪಾಯಕಾರಿ ಸೇತುವೆಗಳು ಇವೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದಲ್ಲಿರುವ ತೂಗು ಸೇತುವೆ ಅಪಾಯಕ್ಕೆ ಕಾದು ಕುಳಿತಿದ್ದು, ಅಲ್ಲಿನ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದಲ್ಲಿ 20 ವರ್ಷಗಳ ಹಿಂದೆ ತುಂಗಾ ನದಿ ಮೇಲೆ ನಿರ್ಮಿಸಿದ ಸೇತುವೆ ಇದೀಗ ಮುರಿದು ಬೀಳುವ ಸ್ಥಿತಿಯಲ್ಲಿದೆ. ಇಲ್ಲಿನ ಸುಂಕದಮಕ್ಕಿ ಹಾಗೂ ಹೆಡದಾಳು ಗ್ರಾಮದ 150ಕ್ಕೂ ಹೆಚ್ಚು ಕುಟುಂಬಗಳಿಗೆ ಈ ಸೇತುವೆಯೇ ಆಧಾರವಾಗಿದೆ. ಇವರಿಗೆ ಬೇರೆ ಮಾರ್ಗ ಇದ್ದರೂ 12 ಕಿಲೋ ಮೀಟರ್ ಸುತ್ತಿ ಬರಬೇಕು. ಹಾಗಾಗಿ 20 ವರ್ಷಗಳ ಹಿಂದೆ ಸರ್ಕಾರವೇ ತೂಗುಸೇತುವೆ ನಿರ್ಮಿಸಿತ್ತು. ಆದರೆ ನಿರ್ವಹಣೆ ಇಲ್ಲದೆ ಸೇತುವೆ ಮುರಿದು ಬೀಳುವ ಹಂತಕ್ಕೆ ತಲುಪಿದ್ದು, ಸೇತುವೆಗೆ ಹಾಕಿರುವ ಗ್ರಿಲ್ಗಳು ಕಿತ್ತು ಬಂದಿವೆ. ಸೇತುವೆಯ ಫುಟ್ಪಾತ್ ಹಾಗೂ ತಡೆಗೋಡೆಗೆ ಹಾಕಿರುವ ಗ್ರಿಲ್ಗಳ ಜಾಯಿಂಟ್ ಕೂಡ ತಪ್ಪಿದೆ. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. ಇನ್ನು ಸರ್ಕಾರ ಕೂಡಲೇ ಇತ್ತ ಗಮನಹರಿಸಿ ಸೇತುವೆಗೆ ಬಣ್ಣ ಹೊಡೆದು, ಗ್ರೀಸ್ ಹಾಕಿ ಬಂದೋಬಸ್ತ್ ಮಾಡಬೇಕು ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.

ನೆಮ್ಮಾರಿನ ಜನತೆಗೆ ಸೇತುವೆ ಕುಸಿಯುವ ಆತಂಕ
ಸೇತುವೆ ಸ್ಥಿತಿ ಬಗ್ಗೆ ಸ್ಥಳೀಯರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಅಧಿಕಾರಿಗಳು ಸ್ಥಳಕ್ಕೆ ಸುಮ್ಮನೆ ಬಂದು ಹೋಗುತ್ತಿದ್ದು, ಇದುವರೆಗೂ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಒಂದು ವೇಳೆ ಈ ಸೇತುವೆ ಹಾಳಾದರೆ, ಈ ಭಾಗದ ಜನರು ಸಣ್ಣಪುಟ್ಟ ಕೆಲಸಕ್ಕೂ ಹೆದ್ದಾರಿಗೆ ಬರಬೇಕಾಗುತ್ತದೆ. ಹೆದ್ದಾರಿಗೆ ಕನಿಷ್ಠ 10 ಕಿಲೋ ಮೀಟರ್ ಸುತ್ತಿ ಬಳಸಿ ಬರಬೇಕು. ಮಳೆಗಾಲದಲ್ಲಿ 10 ಕಿಲೋ ಮೀಟರ್ ಹೋಗುವುದು ಅಸಾಧ್ಯವಾಗಿರುತ್ತದೆ. ಮಕ್ಕಳು ಶಾಲಾ-ಕಾಲೇಜಿಗೆ ಹೋಗುವುದಕ್ಕೆ ಆಗುವುದಿಲ್ಲ. ಮಕ್ಕಳು ಶಾಲಾ-ಕಾಲೇಜಿಗೆ ತೆರಳಬೇಕೆಂದರೆ ನಿತ್ಯ 20 ಕಿಲೋ ಮೀಟರ್ ನಡೆಯಬೇಕಾಗುತ್ತದೆ. ಈ ಸೇತುವೆ ನಿರ್ಮಾಣ ಆದಗಿನಿಂದ ಒಂದೇ ಒಂದು ಬಾರಿ ಮಾತ್ರ ಬಣ್ಣ-ಗ್ರೀಸ್ ಕಂಡಿದೆ. ಮೊದಲೆಲ್ಲ ಸೇತುವೆ ಮೇಲೆ 4-5 ಜನ ಓಡಾಡಿದರೂ ಕೂಡ ಏನೂ ಆಗುತ್ತಿರಲಿಲ್ಲ. ಈಗ ಇಬ್ಬರು ಓಡಾಡಿದರೆ ಸಾಕು ಸೇತುವೆ ತೂಗಾಡುತ್ತದೆ. ಆದ್ದರಿಂದ ಇಲ್ಲಿ ಓಡಾಡಲು ತುಂಬಾ ಭಯ ಆಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಸರ್ಕಾರ ಬಡಜನರಿಗೆಂದು ತೂಗು ಸೇತುವೆಯನ್ನೇನೋ ನಿರ್ಮಿಸಿ ಕೊಟ್ಟಿತ್ತು. ಆದರೆ ಸೇತುವೆ ನಿರ್ವಹಣೆಯನ್ನು ಸರ್ಕಾರ ಮರೆತೇಬಿಟ್ಟಿದೆ. ಆದ್ದರಿಂದ ಇಂದು ಆ ಸೇತುವೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಕಂಬಿಗಳು ಕಿತ್ತಿದ್ದು, ಇಂಟರ್ ಲಿಂಕ್ ಹೋಗಿವೆ. ತೂಗುಸೇತುವೆ ಸಂಪೂರ್ಣ ತೂಗಾಡುತ್ತಿದೆ. ಏನಾದರೂ ಅನಾಹುತ ಸಂಭಸುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರ ಒತ್ತಾಯ ಆಗಿದೆ.

ಶಿವಪುರ ತೂಗುಸೇತುವೆ ಮೇಲೆ ಪುಂಡಾಟಿಕೆ
ಜೋಯಿಡಾದ ಶಿವಪುರ ತೂಗುಸೇತುವೆ ಮೇಲೆ ಕಾರು ಚಲಾಯಿಸಿ ಪುಂಡಾಟ ನಡೆಸಿದವರ ಪೈಕಿ ಓರ್ವ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಜೋಯಿಡಾ ತಾಲೂಕಿನ ಮುಜಾಹಿದ್ ಆಜಾದ್ ಸಯ್ಯದ್ (25) ಬಂಧಿತ ಆರೋಪಿ ಆಗಿದ್ದಾನೆ. ಜೋಯಿಡಾದ ಶಿವಪುರ ತೂಗುಸೇತುವೆಯನ್ನು ನೋಡಲು ಯುವಕರು ಪ್ರವಾಸಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ತೂಗು ಸೇತುವೆ ಮೇಲೆ ಕಾರು ಚಲಾಯಿಸಿಕೊಂಡು ತೆರಳಿ ಹುಚ್ಚಾಟ ಮೆರೆದಿದ್ದಾರೆ. ಈ ಬಗ್ಗೆ ಇತರೆ ಪ್ರವಾಸಿಗರು ಆಕ್ಷೇಪ ವ್ಯಕ್ತಪಡಿಸಿದಾಗ ಅವರ ವಿರುದ್ಧವೇ ತಿರುಗಿಬಿದ್ದಿದ್ದರು. ಯುವಕರ ಪುಂಡಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ ಮಾದ್ಯಮಗಳಲ್ಲಿಯೂ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಂಜುನಾಥ ಮೊಖಾಶಿ ಎಂಬುವವರು ಯುವಕರ ವಿರುದ್ಧ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಮಹಾರಾಷ್ಟ್ರ ನೋಂದಣಿಯ ಕಾರನ್ನು ಪತ್ತೆ ಮಾಡಿ, ಮುಜಾಹಿದ್ ವಿರುದ್ಧ ಕಲಂ 279, 336ರ ಅಡಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಜೋಯಿಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ತೂಗು ಸೇತುವೆ ಕುಸಿತ, ಭೀಕರ ದುರಂತ
ಗುಜರಾತ್ನ ಮೊರ್ಬಿಯಲ್ಲಿ ನಡೆದ ತೂಗು ಸೇತುವೆ ದುರಂತದಲ್ಲಿ ನೂರಾರು ಅಮಾಯಕ ಜೀವಗಳು ಬಲಿಯಾಗಿವೆ. ಒಂದು ಕ್ಷಣ ಮೈಮರೆತಿದ್ದಕ್ಕೆ ಭೀಕರ ದುರಂತವೊಂದು ನಡೆದುಹೋಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ತೂಗು ಸೇತುವೆಗಳು ಪ್ರವಾಸಿಗರ ಫೆವರೇಟ್ ತಾಣಗಳಾಗಿದ್ದು, ಹೀಗೆ ಬಂದವರು ತೂಗು ಸೇತುವೆಗಳ ಮೇಲೆ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ನಿರ್ವಹಣೆ ಇಲ್ಲದೆ ಸೇತುವೆಗಳು ದುರಸ್ತಿಗೆ
ಬಹುಭಾಗ ಅರಣ್ಯ ಪ್ರದೇಶಗಳಿಂದಲೇ ಕೂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿನ ಬಹುತೇಕ ಹಳ್ಳಿಗಳಿರುವುದು ಗುಡ್ಡಗಾಡು ಪ್ರದೇಶಗಳಲ್ಲಿ. ಇಂತಹ ಕೆಲ ಹಳ್ಳಿಗಳಿಗೆ ಅಡ್ಡಲಾಗಿರುವ ನದಿಗಳಿಗೆ ದಶಕಗಳ ಹಿಂದೆ ತೂಗು ಸೇತುವೆ ನಿರ್ಮಿಸಲಾಗಿತ್ತು. ಆದರೆ ಈ ತೂಗು ಸೇತುವೆಗಳು ನಿರ್ವಹಣೆ ಇಲ್ಲದೆ ದುರಸ್ಥಿಗೆ ತಲುಪಿ ಹಲವು ವರ್ಷಗಳೇ ಕಳೆದಿದ್ದು, ಇದೀಗ ಗುಜರಾತ್ನ ಮೊರ್ಬಿ ತೂಗು ಸೇತುವೆ ದುರಂತದ ಬಳಿಕ ಜಿಲ್ಲೆಯಲ್ಲಿನ ತೂಗು ಸೇತುವೆ ಮೇಲಿನ ಸಂಚಾರ ಭಯ ಹುಟ್ಟಿಸುತ್ತಿದೆ.












Click it and Unblock the Notifications