ಚಿಕ್ಕಮಗಳೂರು: ಕೆಂಪೇಗೌಡರ ಪ್ರತಿಮೆಗೆ ಮಣ್ಣು ಸಂಗ್ರಹಿಸುವ ಅಭಿಯಾನದ ರಥಕ್ಕೆ ಚಾಲನೆ
ಚಿಕ್ಕಮಗಳೂರು, ಅಕ್ಟೋಬರ್, 29: ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮೃತ್ತಿಕೆ ಸಂಗ್ರಹಿಸುವ ಅಭಿಯಾನದ ರಥಕ್ಕೆ ಜಿಲ್ಲೆಯಲ್ಲಿ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಚಾಲನೆ ನೀಡಿದ್ದಾರೆ. ಇದೇ ವೇಳೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 11ರಂದು ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ ಎಂದರು.
ಸರ್ಕಾರ ಎಲ್ಲಾ ಜಿಲ್ಲೆಯ ಪ್ರತಿ ಗ್ರಾಮಗಳಿಂದ ಮಣ್ಣು ಸಂಗ್ರಹ ಅಭಿಯಾನ ಕೈಗೊಂಡಿದ್ದು, ಪ್ರತಿ ಜಿಲ್ಲೆಗೆ ತೆರಳಿ ಮಣ್ಣು ಸಂಗ್ರಹ ಮಾಡಲಾಗುತ್ತದೆ ಎಂದರು. ಇದೇ ವೇಳೆ ಶಾಸಕ ಸಿ.ಟಿ.ರವಿ ಮಾತನಾಡಿದ್ದು, ನಾಡಪ್ರಭು ಕೆಂಪೇಗೌಡರು ಮೈಸೂರು ಅರಸರ ಸಾಮಂತರಾಗಿ ಅವರು 500 ವರ್ಷಗಳ ಪೂರ್ವದಲ್ಲಿ ಬೆಂಗಳೂರು ನಗರದ ಬಗ್ಗೆ ವಿಶೇಷ ಕಲ್ಪನೆಯನ್ನಿಟ್ಟುಕೊಂಡಿದ್ದರು. ನಗರದ ನಿರ್ಮಾಣ ಹೇಗಿರಬೇಕು ಎನ್ನುವ ದೂರ ದೃಷ್ಟಿಯನ್ನು ಇಟ್ಟುಕೊಂಡು ಬೆಂಗಳೂರು ನಗರವನ್ನು ಕಟ್ಟಿದ್ದರು. ಬೆಂಗಳೂರಿನ ವಿಮಾನ ನಿಲ್ದಾಣದ ಹತ್ತಿರದಲ್ಲಿ ಸುಮಾರು 100 ಹೆಕ್ಟೇರ್ ವಿಸ್ತೀರ್ಣದ ಉದ್ಯಾನವನದ ಮಧ್ಯದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದನ್ನು ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದರು.

ಬೆಂಗಳೂರಿನಲ್ಲೂ ಮಣ್ಣಿನ ಸಂಗ್ರಹ
ನಾಡಪ್ರಭು ಕೆಂಪೇಗೌಡ ಅವರ ಬೃಹತ್ ಪ್ರತಿಮೆ ಥೀಮ್ ಪಾರ್ಕ್ಗೆ ಬಳಕೆ ಆಗಲಿರುವ ಮಣ್ಣಿನ ಸಂಗ್ರಹ ಅಭಿಯಾನಕ್ಕೆ ಬುಧವಾರ ಬೆಂಗಳೂರಿನಲ್ಲೂ ಚಾಲನೆ ದೊರೆತಿತ್ತು. ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನಕ್ಕೆ ಗಾಂಧಿನಗರದ ಅಣ್ಣಮ್ಮ ದೇವಸ್ಥಾನದ ಮುಂದೆ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರು ಆದ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಬುಧವಾರ ಚಾಲನೆ ನೀಡಿದ್ದರು.
ಈ ಅಭಿಯಾನವು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ನಡೆಯುತ್ತಿದೆ. ಸಚಿವರು ಇತ್ತೀಚೆಗಷ್ಟೇ ರಾಮನಗರದಲ್ಲಿ ಇದೇ ಅಭಿಯಾನಕ್ಕೆ ಅದ್ಧೂರಿಯಾಗಿ ಚಾಲನೆ ನೀಡಿ ಮಣ್ಣು ಸಂಗ್ರಹಿಸಿದ್ದರು. ಅಣ್ಣಮ್ಮ ದೇವಿ ದೇವಸ್ಥಾನದ ಮುಂಭಾಗದಲ್ಲಿ ಸರ್ವಾಲಂಕೃತಗೊಂಡಿದ್ದ ನಾಡಪ್ರಭು ಕೆಂಪೇಗೌಡರ ವಿಶೇಷ ರಥಕ್ಕೆ ಪೂರ್ಣಕುಂಭ ಸ್ವಾಗತ ನೀಡಲಾಗಿತ್ತು. ಸಾವಿರಾರು ಉತ್ಸಾಹಿಗಳು, ಯುವಕರು, ಕಾರ್ಯಕರ್ತರು ಗಾಂಧಿ ನಗರದ ಬೀದಿಗಳಲ್ಲಿ ಜಯಘೋಷಗಳನ್ನು ಹಾಕಿದ್ದರು. ಬಾವುಟಗಳನ್ನು ಬೀಸುತ್ತ ಹೆಜ್ಜೆ ಹಾಕಿ ರಥಗಳ ಚಾಲನೆಗೆ ಸಾಕ್ಷಿಯಾಗಿದ್ದರು.

ಮಣ್ಣು ಸಂಗ್ರಹದ ಬಗ್ಗೆ ಸಚಿವರು ಹೇಳಿದ್ದೇನು?
ಈ ಸಂದರ್ಭದಲ್ಲಿ ಮಾತನಾಡಿದ್ದ ಅಶ್ವಥ್ ನಾರಾಯಣ್, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪರಂಪರೆಗೆ ಸೇರಿದ ಅಣ್ಣಮ್ಮದೇವಿ ದೇವಸ್ಥಾನವನ್ನು ಕೂಡ ಜೀರ್ಣೋದ್ಧಾರ ಮಾಡಲು ಒಲವಿದೆ. ಈ ಬಗ್ಗೆ ಧರ್ಮದರ್ಶಿಗಳು ಮತ್ತು ಭಕ್ತವೃಂದದ ಜತೆ ಮಾತುಕತೆ ನಡೆಸಲಾಗುವುದು ಎಂದರು. ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿಯವರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ 108 ಅಡಿ ಎತ್ತರದ ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಹಾಗೂ ಥೀಮ್ ಪಾರ್ಕ್ ಉದ್ಘಾಟನೆ ಮಾಡಲಿದ್ದಾರೆ. ನವೆಂಬರ್ 7 ರವರೆಗೆ ರಾಜ್ಯಾದ್ಯಂತ ಸಂಗ್ರಹವಾಗುವ ಪವಿತ್ರ ಮಣ್ಣು ಪ್ರತಿಮೆ, ಪಾರ್ಕ್ನಲ್ಲಿ ಬಳಸಲಾಗುವುದು ಎಂದು ಅಶ್ವಥ್ ನಾರಾಯಣ್ ಹೇಳಿದರು.












Click it and Unblock the Notifications