ಚಿಕ್ಕಮಗಳೂರಿನ ಮಳೆ ಚಿತ್ರ: ಜೋರು ಮಳೆ, ಭೂಕುಸಿತ, ಎಲ್ಲೆಲ್ಲೂ ನೀರು...
ಚಿಕ್ಕಮಗಳೂರು, ಆಗಸ್ಟ್ 7: ಮಹಾ ಮಳೆಗೆ ಚಿಕ್ಕಮಗಳೂರು ನಲುಗುತ್ತಿದೆ. ಎರಡು ಮೂರು ದಿನಗಳಿಂದ ಬಿಡುವು ಕೊಡದೆ ಸುರಿಯುತ್ತಿರುವ ಮಳೆಗೆ ಜನರು ಕಂಗಾಲಾಗಿದ್ದಾರೆ. ಒಂದೆಡೆ ಜೋರು ಮಳೆ, ಇನ್ನೊಂದೆಡೆ ಭೂಕುಸಿತ, ಜೊತೆಜೊತೆಗೇ ತುಂಬಿ ಹರಿದು ಸುತ್ತುವರಿಯುತ್ತಿರುವ ನದಿಗಳು... ಅಡಿಕೆ ತೋಟ, ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿ ಬಂದ ಫಸಲೆಲ್ಲಾ ನೆಲಕಚ್ಚಿದೆ. ಮನೆಗಳೂ ಕುಸಿದು ಬೀಳುತ್ತಿವೆ.
ಕಾರವಾರದಲ್ಲೂ ಬಿರುಸಾಗಿದೆ ಮಳೆ; ನೆರೆಗೆ ನೂರಾರು ಮನೆಗಳು ಜಲಾವೃತ, ಇಬ್ಬರ ಸಾವು
ಈ ನಡುವೆ ಭೂಕುಸಿತದಿಂದಾಗಿ ಸಾಕಷ್ಟು ಕಡೆ ರಸ್ತೆಗಳೂ ಸಂಪರ್ಕ ಕಡಿದುಕೊಂಡಿವೆ. ಎಷ್ಟೋ ಕಡೆ ಜಿಲ್ಲಾಡಳಿತ ಇನ್ನೂ ಸಹಾಯ ನೀಡಲು ಸಾಧ್ಯವಾಗಿಲ್ಲ. ಚಿಕ್ಕಮಗಳೂರಿನ ಮಳೆಯ ಈ ಚಿತ್ರಣ ನಡುಕ ಹುಟ್ಟಿಸುವಂತಿವೆ.
ರಾತ್ರಿಯಿಡೀ ನಡೆಯಿತು ಮಣ್ಣೆತ್ತುವ ಕಾರ್ಯಾಚರಣೆ
ಚಿಕ್ಕಮಗಳೂರಿನಲ್ಲಿ ಬಿಡದೇ ಮಳೆ ಸುರಿಯುತ್ತಿರುವುದರಿಂದ ರಸ್ತೆ ಬದಿ ಮಣ್ಣು ಕುಸಿಯುವ ಘಟನೆಗಳು ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿವೆ. ಚಾರ್ಮಾಡಿ ಘಾಟ್ ರಸ್ತೆಯ ನಾಲ್ಕೈದು ಕಡೆ ಗುಡ್ಡ ಕುಸಿದ ವರದಿಯಾಗಿದೆ. ಭಾರೀ ಪ್ರಮಾಣದಲ್ಲಿ ರಸ್ತೆಗೆ ಗುಡ್ಡದ ಮಣ್ಣು ಬಿದ್ದಿರುವ ಪರಿಣಾಮ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಚಾರ್ಮಾಡಿ ಘಾಟ್ ಮಾರ್ಗದ ಚಿಕ್ಕಮಗಳೂರು- ದಕ್ಷಿಣ ಕನ್ನಡ ಸಂಪರ್ಕ ಕಡಿತಗೊಂಡಿದೆ.
ರಸ್ತೆಗೆ ಬಿದ್ದಿದ್ದ ಮಣ್ಣನ್ನ ತೆರವುಗೊಳಿಸಲು ರಾತ್ರಿಯಿಡೀ ಸಾರ್ವಜನಿಕರು, ಸಿಬ್ಬಂದಿಗಳು ಹರಸಾಹಸ ಪಟ್ಟರು. ಬಣಕಲ್, ಬೆಳ್ತಂಗಡಿ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಉರುಳಿದ ಮರ; ವಾಹನ ಸಂಚಾರ ಬಂದ್
ಗಾಳಿ ರಭಸಕ್ಕೆ ನೆಲಕ್ಕುರುಳುತ್ತಿವೆ ವಿದ್ಯುತ್ ಕಂಬಗಳು
ಮಳೆಯೊಂದಿಗೆ ಬಿರುಗಾಳಿ ರಭಸವೂ ಹೆಚ್ಚಾಗಿದ್ದು, ಈ ರಭಸಕ್ಕೆ ವಿದ್ಯುತ್ ಟ್ರಾನ್ಸ್ ಫಾರ್ಮರ್, ಕಂಬಗಳು ನೆಲಕ್ಕುರುಳುತ್ತಿವೆ.
ತರೀಕೆರೆ ತಾಲೂಕಿನ ಬರಗೇನಹಳ್ಳಿಯಲ್ಲಿ ಹಲವು ಕಂಬಗಳು ಉರುಳಿ ಬಿದ್ದಿವೆ. ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.
30ಕ್ಕೂ ಹೆಚ್ಚು ಎಕರೆ ಅಡಿಕೆ, ಭತ್ತದ ಗದ್ದೆ ಜಲಾವೃತ
ತುಂಗಾ ನದಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿದೆ. ಈ ಮಳೆ ಆರ್ಭಟಕ್ಕೆ 30ಕ್ಕೂ ಹೆಚ್ಚು ಎಕರೆ ಅಡಿಕೆ ತೋಟ ಹಾಗೂ ಭತ್ತದ ಗದ್ದೆ ಜಲಾವೃತವಾಗಿವೆ. ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಯಿಂದ ತೋಟಗಳು ಮುಳುಗಡೆಯಾಗುತ್ತಿದ್ದು, ತುಂಗಾ ನದಿ ಪ್ರವಾಹಕ್ಕೆ ಜನರು ತತ್ತರಿಸಿದ್ದಾರೆ.
ಕೈ ಕೈ ಹಿಡಿದು ಸೇತುವೆ ದಾಟಿದ ಗ್ರಾಮಸ್ಥರು
ಭದ್ರಾ ನದಿ ಹರಿಯುವ ಸೇತುವೆ ಮುಳುಗಡೆಯಾದ ಹಿನ್ನೆಲೆಯಲ್ಲಿ ಇಟ್ಟನಟ್ಟಿ ಹಾಗೂ ಕುಳಗೂರು ಗ್ರಾಮಗಳಿಂದ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸ್ಥಗಿತಗೊಂಡಿದೆ. ನಿನ್ನೆ ಸಂಜೆಯಿಂದಲೂ ರಸ್ತೆ ಸಂಪರ್ಕವಿಲ್ಲದೆ ಜಿಲ್ಲೆಯ ಕೊಪ್ಪ ತಾಲೂಕಿನ ಗ್ರಾಮಸ್ಥರು ಪರದಾಟ ನಡೆಸುತ್ತಿದ್ದಾರೆ. ಒಬ್ಬರನೊಬ್ಬರು ಕೈಕೈ ಹಿಡಿದು ಸೇತುವೆ ದಾಟುತ್ತಿದ್ದಾರೆ. ವಿದ್ಯುತ್ ಕಡಿತದಿಂದ ಮೊಬೈಲ್ ಸಂಪರ್ಕವೂ ಸ್ಥಗಿತವಾಗಿದೆ.