ಜನರಿಗೆ ಬೇಕಾಗಿರುವು ಹಣ ಅಲ್ಲ ಸ್ವಾಮಿ, ಅಕ್ಕಿ: ನೀವು ಸುಮ್ನೆ ಪುಂಗ್ಬೇಡಿ: ಸಿ.ಟಿ.ರವಿಗೆ ಕೆ.ಜೆ.ಜಾರ್ಜ್ ತಿರುಗೇಟು
ಚಿಕ್ಕಮಗಳೂರು, ಜೂನ್, 16: ಜನರ ಖಾತೆಗೆ ಹಣ ಹಾಕಿ ಅವರೇ ಹೆಚ್ಚುವರಿ 5 ಕೆ.ಜಿ. ಅಕ್ಕಿ ಕೊಂಡುಕೊಳ್ಳುತ್ತಾರೆ ಎಂದು ಹೇಳಿದ್ದ ಸಿ.ಟಿ.ರವಿಗೆ ಇಂಧನ ಸಚಿವ ಹಾಗೂ ಚಿಕ್ಕಮಗಳೂರು ಉಸ್ತುವಾರಿ ಕೆ.ಜೆ.ಜಾರ್ಜ್ ತಿರುಗೇಟು ನೀಡಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ಮಾತನಾಡಿದ ಅವರು, ನಾವು ಅಕ್ಕಿಯನ್ನು ಉಚಿತವಾಗಿ ಕೇಳುತ್ತಿಲ್ಲ. ದುಡ್ಡು ಕೊಡುತ್ತೇವೆ ಕೊಡಿ ಎಂದು ಕೇಳಿದ್ದೇವೆ. ಜನರಿಗೆ ಬೇಕಾಗಿರುವುದು ಅಕ್ಕಿಯೇ ಹೊರತು ಹಣವಲ್ಲ. ಎಫ್.ಸಿ.ಐ. ಅವರೇ ಸ್ಟಾಕ್ ಇದೆ, ಕೊಡುತ್ತೇವೆ ಎಂದು ಲೆಟರ್ ಕೊಟ್ಟಿದ್ದಾರೆ. ಈಗ ಅಕ್ಕಿ ವಾಪಸ್ ಹೋಗಿದೆ. ಕೊಳೆಯಲು ಬಿಟ್ಟಿದ್ದೀರಾ ಸಿ.ಟಿರವಿ ಅವರೇ ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಪಾಪ ಸಿ.ಟಿ.ರವಿ is a party man, ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಅವರಿಗೆ ಇದೆಲ್ಲ ಹೇಗೆ ಗೊತ್ತಾಗುತ್ತದೆ. ಅಕ್ಕಿ ಇರುವುದೇ ಬಡವರಿಗೆ ಕೊಡುವುದಕ್ಕೆ. ಹಣ ಕೊಡಿ ಅಂದರೆ ಹೇಗೆ?. ಜನರಿಗೆ ಬೇಕಾಗಿರುವುದು ಅಕ್ಕಿಯೇ ಹೊರತು ದುಡ್ಡಲ್ಲ ಎಂದು ತಿರುಗೇಟು ನೀಡಿದರು.

ಇದೇ ವೇಳೆ ಮತಾಂತರ ನಿಷೇಧ ಕಾಯ್ದೆ ಹಿಂಪಡೆದಿದ್ದಕ್ಕೆ ಬಿಜೆಪಿಯವರ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರ ಕೆಲಸವೇ ವಿರೋಧ ಮಾಡುವುದು. ಕಾಂಗ್ರೆಸ್ನ ಅಭಿವೃದ್ಧಿ ಹೆಜ್ಜೆಗೆ ವಿರೋಧವೇ ಅವರ ಕೆಲಸ. ಅವರು ಪ್ರತಿಪಕ್ಷ ಅಲ್ಲ, ವಿರೋಧ ಪಕ್ಷ ಎಂದು ಲೇವಡಿ ಮಾಡಿದರು.
ಮತಾಂತರ ನಿಷೇಧ ಕಾಯ್ದೆ ಮೊದಲೇ ಇತ್ತು. ಬಲವಂತ ಹಾಗೂ ಆಶ್ವಾಸನೆ ಕೊಟ್ಟು ಮತಾಂತರ ಮಾಡುವುದು ತಪ್ಪು. ಅದು ಹಳೇ ಕಾಯ್ದೆಯೇ ಇದೆ. ಅದನ್ನು ನಾವು ಒಪ್ಪುತ್ತೇವೆ. ಆದರೆ, ಅವರು ಕೆಲವು ತಪ್ಪು ಮಾಡಿದ್ದಾರೆ. ಆರೋಪ ಮಾಡಿದವರು ದಾಖಲೆ ತೋರಿಸಬೇಕು. ಆರೋಪ ಮಾಡುವವರು ಸಾಕ್ಷಿ ಕೊಟ್ಟು ಹೇಳಬೇಕು ಎಂದು ತಿವಿದರು.
ನನ್ನ ಮೇಲೆ ಆರೋಪ ಮಾಡಿದರೆ, ನಾನೇ ಪ್ರೂವ್ ಮಾಡಬೇಕಾ. ಇದು ಯಾವ ಕಾನೂನಿನಲ್ಲಿ ಇದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಬಿಜೆಪಿಯವರು ಈ ರೀತಿ ತುಂಬಾ ತಪ್ಪುಗಳನ್ನು ಮಾಡಿದ್ದಾರೆ. ಅದನ್ನು ನಾವು ಸರಿ ಮಾಡುತ್ತೇವೆ. ಇಷ್ಟು ದಿನ ಅವರೇ ಇದ್ದರಲ್ಲಾ ಹೊಸದಾಗಿ ಏನು ಕಂಡುಹಿಡಿದಿದ್ದಾರೆ. ನಮಗೂ ಜವಾಬ್ದಾರಿ ಇದೆ, ಹಾಗಾಗಿ ಎಲ್ಲರಿಗೂ ಸರಿ ಆಗುವ ಕಾಯ್ದೆ ಜಾರಿಗೆ ಮಾಡುತ್ತೇವೆ ಎಂದರು.












Click it and Unblock the Notifications